ಗ್ರಾಮೀಣ ರಸ್ತೆ ದುರಸ್ತಿ; ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಗೋಪಾಲಯ್ಯ ಗರಂ
ಮಂಡ್ಯ, ಜೂನ್ 29 : ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದಾಗಿ ಹಾಳಾಗಿರುವ ರಸ್ತೆಗಳನ್ನು ಶೀಘ್ರ ದುರಸ್ತಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕರ ಆಕ್ಷೇಪದ ಹಿನ್ನಲೆಯಲ್ಲಿ ನಡೆದ ಚರ್ಚೆಯ ಬಳಿಕ ಸಭೆ ಮುಗಿದ ಕೂಡಲೇ ಸಂಬಂಧಪಟ್ಟ ಶಾಸಕರ ಜೊತೆ ತಮ್ಮ ಅಧಿಕಾರಿಗಳನ್ನು ಕಳುಹಿಸಿ ರಸ್ತೆ ಪರಿಶೀಲಿಸಿ ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಮೇಲುಕೋಟೆ ಶಾಸಕ ಸಿ. ಎಸ್. ಪುಟ್ಟರಾಜು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಲಾರಿಗಳು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಸಾಮಗ್ರಿಗಳನ್ನು ಗ್ರಾಮಾಂತರ ಪ್ರದೇಶದ ರಸ್ತೆಗಳಲ್ಲಿ ಸಾಗಾಣಿಕೆ ಮಾಡುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಹಾಳಾಗಿರುವ ರಸ್ತೆಯನ್ನು ದುರಸ್ತಿಪಡಿಸದೆ ಕೇವಲ ಗುಂಡಿ ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರುನಲ್ಲಿ ರಸ್ತೆಗಳು ಹಾಳು
ಪುಟ್ಟರಾಜು ಆರೋಪಕ್ಕೆ ಧನಿಗೂಡಿಸಿದ ಶಾಸಕರಾದ ಡಿ. ಸಿ. ತಮ್ಮಣ್ಣ, ಮದ್ದೂರು ತಾಲೂಕಿನಲ್ಲಿ ಸುಮಾರು ಎಂಟು ರಸ್ತೆಗಳು ಹಾಳಾಗಿವೆ. ತೈಲೂರು ಕೆರೆಯನ್ನು ಭಾಗಶಃ ಮುಚ್ಚಲಾಗಿದೆ. ಏನೇನು ಹಾಳಾಗಿದೆ ಅದನ್ನು ಸರಿಪಡಿಸಲು ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಎಸ್. ಅಶ್ವತಿ, ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ರಸ್ತೆ ದುರಸ್ತಿ ಸಂಬಂಧ ಮಾತನಾಡಿದ್ದೇನೆ. ದುರಸ್ತಿ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪ್ರತಿನಿತ್ಯ ಅಪಘಾತ, ಸಾವು-ನೋವು
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸಿ. ಎಸ್. ಪುಟ್ಟರಾಜು, ಪ್ರತಿ ಕೆಡಿಪಿ ಸಭೆಯಲ್ಲೂ ಇದನ್ನೇ ಹೇಳುತ್ತಿದ್ದೀರಿ. ಪಾಂಡವಪುರ ರೈಲು ನಿಲ್ದಾಣದಿಂದ ಕೆ. ಆರ್. ಪೇಟೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸವಾರರು ಪ್ರತಿನಿತ್ಯ ಅಪಘಾತಕ್ಕೊಳಗಾಗಿ ಸಾವು-ನೋವು ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಟಿಪ್ಪರ್ ಹರಿದು ತಾಯಿ-ಮಗು ಮೃತಪಟ್ಟಿದ್ದಾರೆ. ಇದು ಹೀಗೇ ಮುಂದುವರಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಮರಕ್ಕೆ ಕಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಲ್ಲಿಕಾರ್ಜುನ್ ಈಗಾಗಲೇ ಹಲವು ಕಡೆಗಳಲ್ಲಿ ರಸ್ತೆಗಳನ್ನು ದುರಸ್ತಿಪಡಿಸಲಾಗಿದೆ ಎಂದಾಗ, ಶಾಸಕ ಸಿ. ಎಸ್. ಪುಟ್ಟರಾಜು ಎಲ್ಲಿ ರಸ್ತೆ ದುರಸ್ತಿಪಡಿಸಿದ್ದೀರಿ, ಬನ್ನಿ ಈಗಲೇ ನಮ್ಮ ಕ್ಷೇತ್ರಕ್ಕೆ ಹೋಗೋಣ. ರಸ್ತೆ ದುರಸ್ತಿಪಡಿಸದಿದ್ದರೆ ಏನು ಮಾಡಲಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಶಾಸಕರಾದ ಡಿ. ಸಿ. ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ ಕೂಡ ಧನಿಗೂಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಹೆದ್ದಾರಿ ಕಾಮಗಾರಿಗಳ ಲಾರಿಗಳಿಂದ ರಸ್ತೆ ಹಾಳು
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಿವೇಕಾನಂದ ಮಾತನಾಡಿ, ಮಾರ್ಚ್ 31ರವರೆಗೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ವಾಹನಗಳಿಂದ ಸುಮಾರು 55 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದಾಗ ಇದರಿಂದ ಸಿಡಿಮಿಡಿಗೊಂಡ ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ, ನೀವು ದಂಡ ಹಾಕಿರುವ ಹಣದಿಂದ ಅರ್ಧ ಕಿ.ಮೀ. ರಸ್ತೆಯನ್ನೂ ದುರಸ್ತಿಪಡಿಸಲು ಆಗಲ್ಲ. ಕೋಟಿಗಟ್ಟಲೆ ಹಣ ತಂದು ನಾವು ರಸ್ತೆ ದುರಸ್ತಿಪಡಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿಯ ಲಾರಿಗಳು ಅಗತ್ಯಕ್ಕಿಂತ ಹೆಚ್ಚು ಸಾಗಣೆ ಮಾಡಿ ರಸ್ತೆ ಹಾಳು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಗಣಿಗಳಿಗೆ ಅವಕಾಶ ನೀಡಲು ಮನವಿ
ಜಿಲ್ಲೆಯ ಗಣಿಗಳನ್ನು ಬಂದ್ ಮಾಡಿ ಹೊರ ಜಿಲ್ಲೆಯಿಂದ ರಸ್ತೆ, ಇತರೆ ಕಾಮಗಾರಿಗಳು ಮತ್ತು ಮನೆಗಳ ನಿರ್ಮಾಣಕ್ಕೆ ಕಚ್ಚಾ ಸಾಮಗ್ರಿಗಳನ್ನು ದುಪ್ಪಟ್ಟು ಬೆಲೆ ತೆತ್ತು ತರಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಜನ ಪರದಾಡುವಂತಾಗಿದೆ. ನಿಮಗಿಷ್ಟ ಬಂದಂತೆ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡರು.
ಹಂಗರಹಳ್ಳಿ ಮತ್ತು ಮುಂಡಗದೊರೆಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ಸ್ಥಳೀಯವಾಗಿಯೇ ಕಚ್ಚಾ ಸಾಮಗ್ರಿಗಳನ್ನು ತಯಾರಿಸಬಹುದು. ಈ ಸಂಬಂಧವಾಗಿ ಜಂಟಿ ಸರ್ವೆ ನಡೆಸಿ ಆರು ತಿಂಗಳಾದರೂ ಜಿಲ್ಲಾಧಿಕಾರಿಗಳು ನನಗೆ ವರದಿ ನೀಡಿಲ್ಲ ಈ ಸಂಬಂಧವಾಗಿ ಪತ್ರ ಬರೆದರೂ ಜಿಲ್ಲಾಧಿಕಾರಿಗಳು ಅದಕ್ಕೆ ಉತ್ತರ ನೀಡಿಲ್ಲ ಎಂದು ಸಚಿವ ಗೋಪಾಲಯ್ಯ ಅವರಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಹಂಗರಹಳ್ಳಿಯಲ್ಲಿರುವ ನಿಜಸ್ಥಿತಿಯನ್ನು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಕೊಡಿ ಎಂದು ಡಿಎಓ ರುದ್ರನ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾಗೆ ಸೂಚನೆ ನೀಡಿದರು.
Recommended Video