ಓಟು ಅವರಿಗೆ, ಕೆಲಸ ನಮ್ಮಿಂದಲಾ?; ಜನರ ಮೇಲೆ ಹರಿಹಾಯ್ದ ಸಚಿವ ತಮ್ಮಣ್ಣ
ಮಂಡ್ಯ, ಜೂನ್ 8: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಮತ್ತೊಮ್ಮೆ ನಾಲಿಗೆ ಸ್ಥಿಮಿತ ಕಳೆದುಕೊಂಡು ಮನಬಂದಂತೆ ಜನರನ್ನು ನಿಂದಿಸಿದ್ದಾರೆ. ಕ್ಷೇತ್ರದಲ್ಲಿ ನಿಖಿಲ್ ಗೆ ಮತ ಹಾಕದ ಜನರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆಯೇ ಸಚಿವರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನರು, ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಕೇಳಿಕೊಂಡ ಸಂದರ್ಭದಲ್ಲಿ, ನೀವು ನಿಖಿಲ್ ಗೆ ಮತ ಹಾಕಿಲ್ಲ, ಈಗ ಕೇಳೋಕೆ ಬರ್ತಿರಾ ಎಂದು ಬೈದಿದ್ದಾರೆ.
ಮಂಡ್ಯ ಜಿಲ್ಲೆಯ ಮೂವರು ಸಚಿವರಿಗೆ ಸಂಪುಟದಿಂದ ಕೊಕ್ ಸಾಧ್ಯತೆ?
ಇನ್ನೂ ಮುಂದುವರೆದು ಮಾತನಾಡಿದ ಅವರು, ಇನ್ನೇನು ಜೋಡೆತ್ತುಗಳು ಬರುತ್ತವೆ, ಕರೆದು ಹತ್ತಿಸಿಕೊಳ್ಳಿ ಎಂದು ಪರೋಕ್ಷವಾಗಿ ದರ್ಶನ್ -ಯಶ್ ವಿರುದ್ಧ ಮಾತಾಡಿದ್ದಾರೆ. ಓಟ್ ಹಾಕಲ್ಲ, ಈಗ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ಧಿ ಕೆಲಸಕ್ಕಾಗಿ ನಮ್ಮನ್ನು ಕೇಳಲು ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.
ಈ ಹಿಂದೆಯೂ ಚುನಾವಣೆ ವೇಳೆ ಮನಬಂದಂತೆ ಮಾತನಾಡಿದ ಕಾರಣಕ್ಕೆ ಮದ್ದೂರು ಕ್ಷೇತ್ರದಲ್ಲಿ ನಿಖಿಲ್ ಗೆ ಕಡಿಮೆ ಅಂತರದ ಗೆಲುವು ದೊರಕಿತ್ತು ಎಂದು ಅಂದಾಜಿಸಲಾಗಿದೆ.