ಕೋವಿಡ್ ಚಿಕಿತ್ಸೆ: ಮಂಡ್ಯದಿಂದ ಬಂತು ಆತ್ಮವಿಶ್ವಾಸ ವೃದ್ಧಿಸುವ ಸುದ್ದಿ!
ಬೆಂಗಳೂರು, ಜು. 03: ಕೊರೊನಾ ವೈರಸ್ಗಿಂತ ಅದು ಜನರಲ್ಲಿ ಸೃಷ್ಟಿಸುತ್ತಿರುವ ಆತಂಕ ಭಯಾನಕವಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ಕೊಡಲು ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿಲ್ಲ.
Recommended Video
ಹೀಗಾಗಿ ಕೊರೊನಾ ವೈರಸ್ ಇಲ್ಲದವರು ಚಿಕಿತ್ಸೆ ಸಿಗದೇ ಮೃತಪಡುತ್ತಿರುವುದು ಜನರು ಸಮೂಹ ಸನ್ನಿಗೆ ಒಳಗಾಗುವಂತೆ ಮಾಡಿದೆ. ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಚಿಕಿತ್ಸೆ ಸಿಗದೆ ಮೃತಪಡುತ್ತಿರುವವರ ಸಾವಿನ ಘಟನೆಗಳು ಜನರಲ್ಲಿ ಆತಂಕ ತಂದಿವೆ.
ಕೊವಿಡ್ 19: ಶುಭ ಸುದ್ದಿ ಆಗಸ್ಟ್ 15ಕ್ಕೆ ಸ್ವದೇಶಿ ಲಸಿಕೆ ಬಿಡುಗಡೆ
ಜೊತೆಗೆ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವವರ ಮೃತ ದೇಹಗಳನ್ನು ವಿಲೇವಾರಿ ಮಾಡಿದ ರೀತಿಯೂ ಜನರನ್ನು ಮತ್ತಷ್ಟು ವಿಚಲಿತಗೊಳಿಸಿದೆ. ಕೊರೊನಾ ವೈರಸ್ಗೆ ತುತ್ತಾಗಿ ಸಾಯುವುದಕ್ಕಿಂತ ಅದು ಸೃಷ್ಟಿಸುತ್ತಿರುವ ಆತಂಕ ಹೆಚ್ಚು ಭಯಾನಕವಾಗಿದೆ.
ಇಂತಹ ಆತಂಕದ ಪರಿಸ್ಥಿತಿಯಿಂದ ಹೊರಬರಲು ಸಹಾಯಕವಾಗುವಂತಹ ಅನೇಕ ವಿಷಯಗಳು ನಮ್ಮ ಸುತ್ತಲೂ ನಡೆಯುತ್ತಿವೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯಲ್ಲಿ ಕೋವಿಡ್
ಮಂಡ್ಯ ಜಿಲ್ಲೆ ಕೊರೊನಾ ವೈರಸ್ನಿಂದ ಹೊರತಾಗಿಲ್ಲ. ಅಲ್ಲಿಯೂ ಕೊರೊನಾ ವೈರಸ್ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 440 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಆದರೆ ಸೋಂಕಿತರನ್ನು ಅಲ್ಲಿನ ವೈದ್ಯರು ನೋಡುತ್ತಿರುವ ರೀತಿ ಬೆಂಗಳೂರು ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ.
ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆ
ಮಂಡ್ಯದಲ್ಲಿ ಈ ವರೆಗೆ 352 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, 88 ಜನರು ಮಂಡ್ಯದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಂಡ್ಯ ವಿಮ್ಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ.
ಸೋಂಕಿತರಿಗೆ ಹೆರಿಗೆ
ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಕೋವಿಡ್-19 ಸೋಂಕಿತ ಮೂವರು ಗರ್ಭಿಣಿಯರಿಗೆ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಸಿಸೇರಿಯನ್ ಹೆರಿಗೆ ಮಾಡಿಸಿರುವ ವೈದ್ಯರ ತಂಡಕ್ಕೆ ಇದೀಗ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸೋಂಕಿತರಿಗೆ ಚಿಕಿತ್ಸೆ ಕೊಡಲು ನಿರಾಕರಿಸುತ್ತಿರುವ ವೈದ್ಯರು, ಮೃತರ ಅಂತ್ಯಸಂಸ್ಕಾರವನ್ನು ಭಯಾನಕವಾಗಿ ಮಾಡಿದವರಿಗೆ ಬುದ್ದಿ ಹೇಳುವಂತಿದೆ ಮಂಡ್ಯದ ವೈದ್ಯರ ಈ ಸಾಧನೆ. ಜೊತೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾದ ತಕ್ಷಣ ಬದುಕು ಮುಗಿಯಿತು ಎಂಬ ಆತಂಕ ಬೇಡ ಎಂಬ ಆತ್ಮವಿಶ್ವಾಸವನ್ನು ವಿಮ್ಸ್ ವೈದ್ಯರು ಮೂಡಿಸಿದ್ದಾರೆ.
ಮಾದರಿಯಾದ ಮಂಡ್ಯದ ವೈದ್ಯರು
ಜಿಲ್ಲೆಯ ಮಳವಳ್ಳಿಯ ಗರ್ಭಿಣಿ ಸೇರಿದಂತೆ ಸೋಂಕು ದೃಢಪಟ್ಟಿದ್ದ ಮೂವರು ಗರ್ಭಿಣಿಯರಿಗೆ ಅತ್ಯಂತ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯೂ ಆಗಿರುವ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಲಾಗಿದೆ.
ಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ವಿಮ್ಸ್ನ ಡಾ. ಯೋಗೇಂದ್ರ ಕುಮಾರ್ ನೇತೃತ್ವದಲ್ಲಿ ಕೊರೊನಾ ವೈರಸ್ ಸೋಂಕಿತ ಗರ್ಭಿಣಿಗೆ ನಿನ್ನೆ (ಜು.02) ಸಿಸೇರಿಯನ್ ಮೂಲಕ ಹೆರಿಗೆ ಆಗಿದೆ. ತಾಯಿ ಹಾಗೂ ಹೆಣ್ಣು ಮಗು ಇಬ್ಬರೂ ಆರೋಗ್ಯದಿಂದ ಇದ್ದು, ಇನ್ನೆರಡು ದಿನದಲ್ಲಿ ಮಗುವಿಗೂ ಕೂಡ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೂ ಮೊದಲು ವಿಮ್ಸ್ನಲ್ಲಿ ಮತ್ತಿಬ್ಬರು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿತ್ತು.
ಯಶಸ್ವಿ ಹೆರಿಗೆ ಬಳಿಕ ವೈದ್ಯರು ಮತ್ತು ತಾಯಿ-ಮಗುವಿನ ಕುಟುಂಬಸ್ಥರ ಮುಖದಲ್ಲಿ ನಗು ಮೂಡಿದೆ. ಕೊರೋನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಿದ ಹಿನ್ನೆಲೆಯಲ್ಲಿ ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ. ತಾವು ಮಾಡಿದ ಕೆಲಸದ ಮೂಲಕ ಇತರರಿಗೂ ಮಂಡ್ಯ ಮಿಮ್ಸ್ ವೈದ್ಯರು ಮಾದರಿಯಾಗಿದ್ದಾರೆ.
ಆಸ್ಪತ್ರೆಗೆಳು ಸೀಲ್ಡೌನ್
ಕೋರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಟ್ಟಿದ್ದರಿಂದ ಮದ್ದೂರು, ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ, ಅರಕೆರೆ ಸಮುದಾಯ ಆರೋಗ್ಯ ಕೇಂದ್ರಗಳ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಸೀಲ್ಡೌನ್ ಮಾಡಲಾಗಿದೆ.
ಅರಕೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಂಕಿತ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ಕೊಡಲಾಗಿತ್ತು. ಮೂರು ಆಸ್ಪತ್ರೆಗಳನ್ನು ಸ್ಯಾನಿಟೈಸ್ ಮಾಡಿಸಿ ಒಂದು ದಿನದ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದ್ದು ನಾಳೆಯಿಂದ (ಜು.04) ರಿಂದ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸ್ಯಾನಿಟೈಶನ್ ಮಾಡಿದ ಬಳಿಕ ಒಂದು ದಿನ ಬಿಟ್ಟು ಮತ್ತೆ ಆಸ್ಪತ್ರೆಗಳು ಮತ್ತೆ ಕಾರ್ಯ ಮುಂದುವರೆಸಲಿವೆ. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಜನರಲ್ಲಿ ಕೊರೊನಾ ವೈರಸ್ ಕುರಿತು ಇದ್ದ ಅನಗತ್ಯ ಭಯವನ್ನು ಹೋಗಲಾಡಿಸುತ್ತಿದ್ದಾರೆ. ಅದಕ್ಕೆ ತಾವೇ ಮಾದರಿಯಾಗಿ ಮುಂದೆ ನಿಂತಿರುವುದು ಶ್ಲಾಘನೀಯ. ನಿಜವಾದ ಕೊರೊನಾ ವಾರಿಯರ್ಸ್ ನಮ್ಮ ಮಂಡ್ಯ ಜಿಲ್ಲೆಯ ವೈದ್ಯರು ಎನ್ನುತ್ತಿದ್ದಾರೆ ಅಲ್ಲಿನ ಸ್ಥಳೀಯರು.