ಮಾ. 25ರ ರಾತ್ರಿಯಿಂದ 26ರ ಬೆಳಗ್ಗೆವರೆಗೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯ, ಮಾರ್ಚ್ 25: ಮೇಲುಕೋಟೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಚೆಲುವನಾರಾಯಣಸ್ವಾಮಿಯ ವಜ್ರ ಖಚಿತ ವೈರಮುಡಿ ಕಿರೀಟ ಧಾರಣಾ ಮಹೋತ್ಸವದ ನಡೆಯುತ್ತಿದ್ದು, ಭಾನುವಾರ (ಮಾ.25) ಮಧ್ಯರಾತ್ರಿ ನಡೆಯಲಿರುವ ವೈರಮುಡಿ ಮಹೋತ್ಸವಕ್ಕೆ ಸರ್ವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ಎಲ್ಲೆಡೆಯೂ ಭಕ್ತಸಾಗರವೇ ಕಂಡು ಬರುತ್ತಿದೆ. ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು, ಈ ಬಾರಿಯ ವೈರಮುಡಿ ಉತ್ಸವಕ್ಕೆ ಸುಮಾರು ಎರಡು ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಮೇಲುಕೋಟೆ ವೈರಮುಡಿ ಜಾತ್ರೆಯ ವೇಳೆ ನಡೆಯಿತೊಂದು ಪವಾಡ!
ವೈರಮುಡಿ ಉತ್ಸವ ರಾತ್ರಿ 8 ಗಂಟೆ ವೇಳೆಗೆ ಆರಂಭವಾಗಲಿದ್ದು, ಮಂಗಳವಾರ ಮುಂಜಾನೆ 3.30ರವರೆಗೆ ನಡೆಯಲಿದ್ದು, ರಾತ್ರಿ ಪೂರ್ತಿ ಮೇಲುಕೋಟೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ರಾಜಮುಡಿ ಕಿರೀಟಗಳನ್ನು ತಂದು ಸ್ಥಾನೀಕರು, ಅರ್ಚಕರು, ಪರಿಚಾರಕರ ಸಮಕ್ಷಮ ಪರಿಶೀಲಿಸಿದ ನಂತರ ರಾತ್ರಿ 8 ಗಂಟೆಗೆ ವೈರಮುಡಿ ಕಿರೀಟ ಧಾರಣೆ ನಡೆಯಲಿದೆ. ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ರಾಜಮುಡಿ ಉತ್ಸವ ನೆರವೇರಲಿದೆ.
ಈ ಬಾರಿ ವೈರಮುಡಿ ಉತ್ಸವದ ವೇಳೆ ಭಕ್ತರು ನಾಣ್ಯ ಎಸೆಯದಂತೆ ಸೂಚಿಸಲಾಗಿದೆ. ಏಕೆಂದರೆ ನಾಣ್ಯ ಎಸೆಯುವುದರಿಂದ ಆಭರಣಗಳಿಗೆ ತೊಂದರೆಯಾಗುತ್ತದೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ. ಮೇಲುಕೋಟೆಗೆ ಬರುವ ಭಕ್ತರು ಮುಡಿ ಹರಕೆ ತೀರಿಸಲು ಇದೇ ಪ್ರಥಮ ಬಾರಿಗೆ ಸ್ವಚ್ಛತೆಗೆ ಆದ್ಯತೆ ನೀಡಿ ನಾಲ್ಕು ಕಡೆ ಮುಡಿ ಕಟ್ಟೆ ತೆಗೆಯುವ ಸ್ಥಳ ಗುರುತು ಮಾಡಲಾಗಿದ್ದು, ದೇವಾಲಯದ ವತಿಯಿಂದಲೇ ಟಿಕೆಟ್ ವಿತರಿಸಲಾಗುತ್ತದೆ.
ಕುಡಿಯುವ ನೀರಿನ ಪೂರೈಕೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ವ್ಯವಸ್ಥಿತ ದೇವರ ದರ್ಶನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಶಾಂತಿ ಸುವ್ಯವಸ್ಥೆಗಾಗಿ ಜಿಲ್ಲಾಡಳಿತದಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.