ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ರಥೋತ್ಸವಕ್ಕೆ ಜನವೋ ಜನ
ಮೇಲುಕೋಟೆ, ಮೇ 8: ಭಗವದ್ ರಾಮಾನುಜಾಚಾರ್ಯರ ಮಹಾರಥೋತ್ಸವ ಬುಧವಾರ ಸಡಗರ- ಸಂಭ್ರಮ, ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಕರ್ನಾಟಕದ ವಿವಿಧ ಭಾಗಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಯತಿರಾಜ -ರಾಮಾನುಜ ಎಂದು ಜಯಘೋಷ ಮೊಳಗಿಸುತ್ತಾ ರಾಮಾನುಜರ ತೇರನ್ನು ಎಳೆದು ಕೈಂಕರ್ಯ ಪೂರೈಸಿ, ಪುನೀತರಾದರು. 1002ನೇ ಜಯಂತ್ಯುತ್ಸವದ ಅಂಗವಾಗಿ ನಡೆಯುತ್ತಿರುವ 9ನೇ ದಿನದ ಧಾರ್ಮಿಕ ಕೈಂಕರ್ಯದಲ್ಲಿ ಆಚಾರ್ಯರ ಮಹಾರಥೋತ್ಸವ ಪ್ರಮುಖವಾಗಿದ್ದು, ಚತುರ್ವೀಥಿಗಳಲ್ಲಿ ವೈಭವದಿಂದ ನೆರವೇರಿತು.
ಬೆಳಗ್ಗೆ 8 ಗಂಟೆಗೆ ರಾಮಾನುಜಾಚಾರ್ಯರಿಗೆ ಯಾತ್ರಾದಾನ ನೆರವೇರಿತು. ರಥಬಲಿಯ ನಂತರ ಚೆಲುವನಾರಾಯಣಸ್ವಾಮಿಯ ಮಾಲೆ ಮರ್ಯಾದೆಯೊಂದಿಗೆ ರಥೋತ್ಸವದ ಪೂರ್ವಭಾವಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಆಚಾರ್ಯರ ಉತ್ಸವ ರಥಮಂಟಪಕ್ಕೆ ಪ್ರದಕ್ಷಿಣೆ ಬಂದ ನಂತರ ಮಹೂರ್ತ ಪಠಣೆಯೊಂದಿಗೆ ರಥಾರೋಹಣ ನೆರವೇರಿಸಲಾಯಿತು.
ಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವ
ಆ ನಂತರ 11 ಗಂಟೆಗೆ ಆರಂಭವಾದ ಮಹಾರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಧ್ಯಾಹ್ನ 1.30ರ ವೇಳೆಗೆ ರಥಮಂಟಪಕ್ಕೆ ಮರಳಿತು. ಮಧ್ಯಾಹ್ನ ಯತಿರಾಜ ಮಠದಲ್ಲಿ ರಾಮಾನುಜರಿಗೆ ಅಭಿಷೇಕ ನೆರವೇರಿಸಲಾಯಿತು. ಯತಿರಾಜ ಜೀಯರ್ ಸೇರಿದಂತೆ ದೇವಾಲಯ ಕೈಂಕರ್ಯ ಪರರು ಮತ್ತು ಗೋಷ್ಠಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಮಾನುಜರು ಸ್ಥಾನೀಕರ ಮನೆಯಲ್ಲಿ ಭಿಕ್ಷೆ ಸ್ವೀಕರಿಸಿದ ಪ್ರತೀಕವಾಗಿ ನಡೆಯುವ ಭಿಕ್ಷಾಕೈಂಕರ್ಯದ ಮೂರನೇ ದಿನ ಕಾರ್ಯಕ್ರಮ ಶ್ರದ್ಧಾ- ಭಕ್ತಿಯಿಂದ ನೆರವೇರಿತು. 4ನೇ ಸ್ಥಾನಿಕ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬ ಅನೂಚಾನ ಸಂಪ್ರದಾಯದಂತೆ ಫಲ, ಪುಷ್ಪ ಸಿಹಿ ನಿವೇದನೆ ಸಮರ್ಪಿಸಿ, ಭಿಕ್ಷಾ ಕೈಂಕರ್ಯ ನೆರವೇರಿಸಿತು. ಇದಕ್ಕೂ ಮುನ್ನಾ ದಿನಗಳಂದು ಪ್ರಥಮ ಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್, ಮೂರನೇ ಸ್ಥಾನಿಕ ಪ್ರಸನ್ನ ಮುಕುಂದನ್ ಭಿಕ್ಷಾ ಕೈಂಕರ್ಯ ನೆರವೇರಿಸಿದರು.