ಹುತಾತ್ಮ ಯೋಧ ಗುರು ಅಂತ್ಯಸಂಸ್ಕಾರ ಜಾಗ ಬದಲು
Recommended Video
ಮಂಡ್ಯ, ಫೆಬ್ರವರಿ 16 : ಯೋಧ ಗುರುವಿನ ಅಂತ್ಯಸಂಸ್ಕಾರದ ಜಾಗ ದಿಢೀರ್ ಬದಲಾಗಿದೆ. ಗುರು ಕುಟುಂಬಕ್ಕೆ ಸಂಬಂಧಿಸಿದಂತೆ ಒಂದಿಂಚೂ ಜಮೀನಿಲ್ಲ. ಹೀಗಾಗಿ ಗ್ರಾಮದ ಎಳನೀರು ಮಾರುಕಟ್ಟೆ ಎದುರಿನ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುವುದಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಈ ಹಿಂದೆ ತಿಳಿಸಿದ್ದರು.
ಈ ಜಾಗವನ್ನು ಗುಡಿಗೆರೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಒಪ್ಪಿರಲಿಲ್ಲ. ಕಾರಣಕ್ಕಾ ವೀರ ಯೋಧ ಗುಡಿಗೆರೆ ಗುರು ಅಂತ್ಯಕ್ರಿಯೆ ಜಾಗ ಬದಲಿಸಲಾಗಿದೆ. ಮೊದಲು ಗುಡಿಗೆರೆ ಸರ್ವೆ ನಂ 54 ರ ಜಾಗ ನಿಗದಿಗೊಂಡಿತ್ತು. ಕುಟುಂಬಸ್ಥರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ, ಮದ್ದೂರು ಮಳವಳ್ಳಿ ರಸ್ತೆಯ ಹೆದ್ದಾರಿ ಬಳಿಯ ಕೆಎಂ ದೊಡ್ಡಿಯಲ್ಲಿ ಜಾಗ ನಿಗದಿ ಮಾಡಿದೆ.
ಸುಮಾರು 35 ಗುಂಟೆ ಸರ್ಕಾರಿ ಜಾಗದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ಇದರೊಟ್ಟಿಗೆ .ಯೋಧ ಗುರುವಿನ ಸ್ಮಾರಕ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸ್ವಯಂಪ್ರೇರಿತ ಬಂದ್ ಗೆ ಕರೆ : ಕೆಎಂ ದೊಡ್ಡಿಯಲ್ಲಿ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದು, ಸ್ವಗ್ರಾಮದ ಯೋಧನಿಗೆ ಅಂತಿಮ ಗೌರವ ಸಲ್ಲಿಸಲು ಜನರೇ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆದಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷ ಕೆಂಪೇಗೌಡ ತಿಳಿಸಿದ್ದಾರೆ. ಇದರೊಟ್ಟಿಗೆ ವೀರ ಯೋಧ ಗುರು ಓದಿದ್ದ ಶಾಲೆಗೆ ರಜೆ ನೀಡಲಾಗಿದೆ. ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿಗೆ ರಜೆ ಘೋಷಣೆ ಮಾಡಿ ನಮನ ಸಲ್ಲಿಸಿದ್ದಾರೆ.