ಮಂಡ್ಯದಲ್ಲಿ ಹಲವು ಕುರಿಗಳ ಸಾವು: ರೈತರಲ್ಲಿ ಆತಂಕ
ಮಂಡ್ಯ, ಅಕ್ಟೋಬರ್ 11: ಮಂಡ್ಯದ ಭಾರತೀನಗರ ಸಮೀಪದ ಅಣ್ಣೂರು ಗ್ರಾಮ ವ್ಯಾಪ್ತಿಯಲ್ಲಿ ಕುರಿಗಳು ವಾಂತಿ ಬೇಧಿಯಿಂದ ಸಾವನ್ನಪ್ಪುತ್ತಿರುವುದರಿಂದ ಅವುಗಳನ್ನೇ ನಂಬಿದ್ದ ರೈತರು ಆತಂಕಗೊಂಡಿದ್ದಾರೆ.
ಬಹಳಷ್ಟು ಬಡ ವರ್ಗದ ಜನತೆಗೆ ಈ ಕುರಿಗಳೇ ಆಧಾರವಾಗಿದ್ದು, ಅವುಗಳಿಂದಲೇ ಜೀವನ ಸಾಗುತ್ತಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಕುರಿಗಳು ವಾಂತಿಬೇಧಿಯಿಂದ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಣ್ಣೂರು ಗ್ರಾಮದಲ್ಲಿ ಮೂರು ದಿನಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಕುರಿಗಳು ವಾಂತಿಬೇಧಿಯಿಂದ ಸಾವನ್ನಪ್ಪಿವೆ ಎನ್ನಲಾಗುತ್ತಿದ್ದು, ಇದು ಕುರಿ ಸಾಕಣೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಗ್ರಾಮದ ರೈತ ಮಹಿಳೆ ಕಾರ್ಕಹಳ್ಳಿತಾಯಮ್ಮ ಅವರಿಗೆ ಸೇರಿದ 19 ಕುರಿಗಳು ಕಳೆದ ಮೂರು ದಿನಗಳಿಂದ ಸಾವನಪ್ಪಿವೆ. ಗುಡಿಸಲಿನಲ್ಲಿ ವಾಸವಿರುವ ಮಹಿಳೆ ಮನೆ ಕಟ್ಟಲು ಅಡಿಪಾಯ ಹಾಕಿಸಿದ್ದು ಕುರಿಗಳನ್ನು ಮಾರಾಟ ಮಾಡಿ ದೀಪಾವಳಿಗೆ ಮನೆ ಕಟ್ಟಲು ಆರಂಭಿಸುವ ತೀರ್ಮಾನ ಮಾಡಿದ್ದರು ಈಗ ಕುರಿಗಳು ಸಾವನ್ನಪ್ಪಿರುವುದು ಅವರ ಕನಸಿಗೆ ತಣ್ಣೀರೆರೆಚಿದಂತಾಗಿದ್ದು, ಮುಂದೇನು ಮಾಡುವುದು ಎಂಬ ಚಿಂತೆ ಅವರದ್ದಾಗಿದೆ.
ಇನ್ನು ದೊಡ್ಡತಮ್ಮಯ್ಯರವರ 6, ಬೇಕರಿ ಪುಟ್ಟಮಾದುರವರ 5, ಚೌಡಯ್ಯರವರ 3, ಮಹದೇವು ಅವರ 3 ಕುರಿಗಳು ಕೂಡ ವಾಂತಿಬೇಧಿಯಿಂದ ಸಾವನ್ನಪ್ಪಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ದಿನಕ್ಕೆ ಐದಾರು ಕುರಿಗಳು ಸಾವನಪ್ಪುತ್ತಿದ್ದು ಈ ವ್ಯಾಪ್ತಿಯಲ್ಲಿ ಮಾರಣಾಂತಿಕ ಪಿಪಿಆರ್ (ಬೇಧಿ ರೋಗ) ಕಾಯಿಲೆ ಕಾಣಿಸಿ ಕೊಂಡಿರುದು ಭಯ ಹುಟ್ಟಿಸಿದೆ. ಆರೋಗ್ಯವಾಗಿದ್ದ ಇದ್ದಕ್ಕಿದ್ದಂತೆ ಅಸ್ವಸ್ಥವಾಗಿ ಸಾಯುವುದು ಮಾಮೂಲಿಯಾಗಿದೆ. ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದರೂ ಪ್ರಯೋಜನಾವಾಗದೆ ಕೆಲವು ಕುರಿ ಮೃತಪಟ್ಟಿವೆ ಎನ್ನಲಾಗಿದೆ
ತಾಯಮ್ಮ ಎಂಬುವರ 3 ಕುರಿ ಸಾವನಪ್ಪಿದ್ದ ಬೆನ್ನಲ್ಲೇ ಸುಮಾರು 10 ಕುರಿಗಳಷ್ಟು ಅಸ್ವಸ್ಥಗೊಂಡಿದ್ದು, ಈ ರೀತಿಯ ಕುರಿಗಳ ಸಾವಿಗೆ ವೈರಲ್ ಜ್ವರವೇ ಕಾರಣ ಎಂಬುದು ಬಹಿರಂಗವಾಗಿದೆ. ಕೆಲವರು ಕುರಿಗಳು ಸಾವನಪ್ಪುತ್ತಿದಂತೆ ಪಶು ಇಲಾಖೆ ಮಾಹಿತಿ ನೀಡದೆ ಮಣ್ಣಿನಲ್ಲಿ ಹೂತಿದ್ದಾರೆ. ಕುರಿಗಳ ಸಾವಿನಿಂದ ಕಂಗಾಲಾಗಿರುವ ಗ್ರಾಮಸ್ಥರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಸಂಬಂಧಿಸಿದವರು ಸ್ಥಳಕ್ಕೆ ತೆರಳಿ ಕುರಿಗಳಿಗೆ ಬಂದಿರುವ ರೋಗಕ್ಕೆ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಬೇಕಾಗಿದೆ. ಇಲ್ಲದೆ ಹೋದರೆ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.