ಮಾಜಿ ಶಾಸಕಿ ದಮಯಂತಿ ಬೋರೇಗೌಡ ವಿಧಿವಶ, ಸಿಎಂ ಸಂತಾಪ
ಮಂಡ್ಯ, ಫೆಬ್ರವರಿ 20: ಮಂಡ್ಯದ ಶ್ರೀರಂಗಪಟ್ಟಣ ಕ್ಷೇತ್ರದಿಂದ ಎರಡು ಬಾರಿ ಶಾಸಕಿ ಆಗಿದ್ದ ದಮಯಂತಿ ಬೋರೇಗೌಡ ಅವರು ಇಂದು ವಿಧಿವಶರಾಗಿದ್ದಾರೆ. 92 ವಯಸ್ಸಿನ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ದಮಯಂತಿ ಬೋರೇಗೌಡ ಅವರು 1972 ಮತ್ತು 1989ರಲ್ಲಿ ಎರಡು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಇವರು ಮಂಡ್ಯ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಸಹ ಆಗಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ದುಡಿದಿದ್ದ ದಮಯಂತಿ ಅವರು, ಲೋಕಪಾವನಿ ಮಹಿಳಾ ಬ್ಯಾಂಕ್ ಸ್ಥಾಪಿಸಿದ್ದರು, ರಂಗನಾಯಕಿ ಸ್ತ್ರೀ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಸಹ ಆಗಿದ್ದರು. ಭಾರತೀಯ ಮಹಿಳಾ ಸಂಘದ ಅಧ್ಯಕ್ಷೆಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ದಮಯಂತಿ ಅವರು ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರಿಗೆ 2001 ರಲ್ಲಿ ರಾಜ್ಯ ಸರ್ಕಾರವು ಕಿತ್ತೂರ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮಾಜಿ ಶಾಸಕಿ ದಮಯಂತಿ ಬೋರೇಗೌಡ ಅವರ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಅವರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದು, ಶಾಸಕಿಯಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಜನಪ್ರಿಯರಾಗಿದ್ದರು ಎಂದು ನೆನೆದಿದ್ದಾರೆ.