KRS ಡ್ಯಾಂ ಮೇಲೆ ಪೊಲೀಸ್ ವಾಹನ ಚಲಾಯಿಸಿದ ಯುವಕ: ಸಾಥ್ ನೀಡಿದ ಪೊಲೀಸ್ ಪೇದೆ
ಮಂಡ್ಯ, ಫೆಬ್ರವರಿ 27: ಸಾರ್ವಜನಿಕ ನಿಷೇಧಿತ ಹಾಗೂ ಅತಿ ಸೂಕ್ಷ್ಮ ಪ್ರದೇಶವಾಗಿರುವ ಕೃಷ್ಣಸಾಗರ ಜಲಾಶಯದ (KRS ಡ್ಯಾಂ) ಮೇಲೆ ಯುವಕನೊಬ್ಬ ಪೊಲೀಸ್ ವಾಹನ ಚಲಾಯಿಸಿ ಅಂಧಾ ದರ್ಬಾರ್ ನಡೆಸಿದ್ದು, ಇದಕ್ಕೆ ಪೊಲೀಸ್ ಪೇದೆಯೇ ಸಾಥ್ ನೀಡಿದ್ದಾನೆ.
KRS ಡ್ಯಾಂ ಮೇಲೆ ಪೋಲಿಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ಯುವಕನೊಬ್ಬ ಚಿತ್ರೀಕರಣ ಮಾಡಿದ್ದಾನೆ. ಕಾನೂನು ಪಾಲಿಸಬೇಕಿದ್ದ ಪೋಲಿಸಪ್ಪನಿಂದಲೇ ಯುವಕನ ಅಂಧಾ ದರ್ಬಾರ್ ಗೆ ಸಾಥ್ ನೀಡಿದ್ದಾನೆ.
ಯುವಕ ಜೀಪ್ ಚಲಾಯಿಸುತ್ತಿದ್ದರೆ ಪಕ್ಕದಲ್ಲಿ ಕೂತು ಮೊಬೈಲ್ ನಲ್ಲಿ ಪೊಲೀಸ್ ಪೇದೆ ಶೂಟ್ ಮಾಡಿದ್ದಾನೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯಿಂದ ನಿಯಮ ಉಲ್ಲಂಘನೆ ಆಗಿದೆ.
ಭದ್ರತೆ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೂ ಯುವಕನಿಗೆ ಅಂಧ ದರ್ಬಾರ್ ಮಾಡಲು ಅವಕಾಶ ಮಾಡಲಾಗಿದೆ. ಮಂಡ್ಯದಲ್ಲಿ ಸಾಮಾನ್ಯ ಜನರಿಗೊಂದು ನಿಯಮ, ಅಧಿಕಾರಿ ಕಡೆಯವರಿಗೊಂದು ನಿಯಮ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಯುವಕ ಪೊಲೀಸ್ ಜೀಪ್ ಚಲಾಯಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡ್ಯಾಂ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ಆಗಿದೆ. ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹಿಸಿದ್ದಾರೆ.