ಸಾವಿನಲ್ಲೂ ನೇತ್ರದಾನದ ಪಾಠ ಮಾಡಿದ ಟೀಚರ್
ಮಂಡ್ಯ, ಸೆಪ್ಟೆಂಬರ್ 15: ನಗರದ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಸ್ಥಾಪಿಸಿರುವ ಡಾ.ರಾಜಕುಮಾರ್ ನೇತ್ರ ಸಂಗ್ರಹಣಾ ಘಟಕ್ಕೆ ಶಿಕ್ಷಕಿಯೊಬ್ಬರು ನೇತ್ರ ದಾನ ಮಾಡುವ ಮೂಲಕ, ತಮ್ಮ ನಂತರವೂ ಬೇರೆಯವರಿಗೆ ಬೆಳಕಾಗಿದ್ದಾರೆ.
ಕಾರ್ಮಲ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಕೇರಳ ಮೂಲದ ಶಾಂತಕುಮಾರಿ (61) ತೀರಿಕೊಂಡ ನಂತರವೂ ನೇತ್ರದಾನದ ಪಾಠ ಮಾಡಿ, ಬೇರೆಯವರಿಗೆ ಬೆಳಕಾದವರು.[ಅಂಧರ ಬಾಳಿನ ಬೆಳಕು 'ದೃಷ್ಟಿದೇವತೆ' ಮೈಸೂರಿನ ಮಧುರ]
ರಕ್ತದೊತ್ತಡ, ಮಧುಮೇಹ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು, ಆಗಾಗ ಡಯಾಲಿಸಿಸ್ ಮಾಡಿಸುತ್ತಿದ್ದರು. ತಮ್ಮ ಸಾವಿನ ಮುನ್ನ ನೇತ್ರಗಳನ್ನು ದಾನ ಮಾಡುವ ಬಯಕೆಯನ್ನು ಕುಟುಂಬದವರ ಎದುರು ವ್ಯಕ್ತಪಡಿಸಿದ್ದರು. ಅವರ ಸಾವಿನ ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು, ಡಾ.ಯಾಶಿಕಾ ಅನಿಲ್ ನೇತ್ರ ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿದರು.[ಭೈರಪ್ಪ, ಮಧುರ ಅವರಿಗೆ ಮೈಸೂರಿನಲ್ಲಿ ಸನ್ಮಾನ]
ಕೆಲವೇ ಗಂಟೆಗಳಲ್ಲಿ ಮೃತ ಶಾಂತಕುಮಾರಿ ಅವರಿಂದ ಸಂಗ್ರಹಿಸಲಾದ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದವು. ನೇತ್ರ ಸಂಗ್ರಹ ವೇಳೆ ಮೃತ ಶಾಂತಕುಮಾರಿ ಪತಿ ಕೆ.ವಿ.ಶೇಖರನ್, ಪುತ್ರ ಎನ್.ವಿ.ಶೈಲೇಶ್, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಪದಾಧಿಕಾರಿಗಳಾದ ಮರಿಲಿಂಗೇಗೌಡ, ವಿನಯ್ ಇನ್ನಿತರರು ಇದ್ದರು.