ನಿಖಿಲ್ ಸೋಲಿಸಲು 'ಕೈ' ನಾಯಕರ ಪಣ?: ಮುಖಂಡನ ಸ್ಫೋಟಕ ಹೇಳಿಕೆ
Recommended Video
ಮಂಡ್ಯ, ಮೇ 18: ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ನ ಅನೇಕ ಮುಖಂಡರು ಸುಮಲತಾ ಅವರ ಪರ ಗುಟ್ಟಾಗಿ ಕೆಲಸ ಮಾಡಿದ್ದಾರೆ ಎಂದಿದ್ದರೂ, ಅದನ್ನು ಮುಖಂಡರು ಅಲ್ಲಗಳೆದಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದ ಅನೇಕ ಸ್ಥಳೀಯ ಮುಖಂಡರು ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅವರ ಗೆಲುವಿಗೆ ಶ್ರಮಿಸಿದ್ದಾರೆ. ಸುಮಲತಾ ಅವರಿಗೆ ಮತ ನೀಡುವಂತೆ ಅವರ ಪರ ಹಣ ಹಂಚಲಾಗಿದೆ ಎಂದೂ ಆರೋಪಿಸಲಾಗಿದೆ. ಆದರೆ, ಅದನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎನ್ನಲಾಗಿತ್ತು.
ಮಂಡ್ಯ: ಸುಮಲತಾಗೆ ಬೆಂಬಲ ನೀಡಿದ ಕಾಂಗ್ರೆಸ್ಸಿಗರ ಉಚ್ಛಾಟನೆ
ಇತ್ತೀಚೆಗೆ ಕಾಂಗ್ರೆಸ್ ನಾಯಕ, ಸಿದ್ದರಾಮಯ್ಯ ಅವರ ಆಪ್ತ ಚಲುವರಾಯ ಸ್ವಾಮಿ ಸೇರಿದಂತೆ ಅನೇಕರು ಸುಮಲತಾ ಅಂಬರೀಷ್ ಏರ್ಪಡಿಸಿದ್ದ ಭೋಜನಕೂಟದಲ್ಲಿ ಕಾಣಿಸಿಕೊಂಡ ವಿಡಿಯೋ ಸಂಚಲನ ಮೂಡಿಸಿತ್ತು. ಆದರೆ, ಅದು ಸೌಹಾರ್ದ ಭೇಟಿ ಎಂದು ನಾಯಕರು ಅಲ್ಲಗಳೆದಿದ್ದರು. ಈಗ ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಮಂಡ್ಯ ಮುಖಂಡರೊಬ್ಬರು ನೀಡಿರುವ ಹೇಳಿಕೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ.
ಕಾಂಗ್ರೆಸ್ ನಾಯಕರ ಗಮನಕ್ಕೆ ತಂದೇ ಸುಮಲತಾ ಅವರ ಪ್ರಚಾರ ಮಾಡಿದ್ದೇವೆ ಎಂದು ಕಾಂಗ್ರೆಸ್ನ ಉಚ್ಚಾಟಿತ ಮುಖಂಡ ಸಚ್ಚಿದಾನಂದ ಹೇಳಿದ್ದಾರೆ.
ನಾಯಕರಿಗೆ ಹೇಳದೆ ಪ್ರಚಾರ ಮಾಡಿಲ್ಲ
ಸುಮಲತಾ ಅವರ ಪರ ಪ್ರಚಾರ ಮಾಡುವುದು ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿತ್ತು. ನಾಯಕರಿಗೆ ಹೇಳದೆ ಪಕ್ಷದ ಬೆಂಬಲಿಗರು ಸುಮಲತಾ ಪರ ಪ್ರಚಾರ ಮಾಡಿಲ್ಲ. ನೂರಕ್ಕೆ ನೂರರಷ್ಟು ಸುಮಲತಾ ಪರ ಪ್ರಚಾರ ಮಾಡಿದ್ದಾರೆ. ಮಾಜಿ ಸಚಿವ ಸಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಕೆಬಿ ಚಂದ್ರಶೇಖರ್ ಮುಂತಾದವರು ಸುಮಲತಾ ಪರ ಚುನಾವಣೆ ಎದುರಿಸಿದ್ದೇವೆ ಎಂದು ಸಚ್ಚಿದಾನಂದ ಹೇಳಿದ್ದಾರೆ.
ಸುಮಲತಾಗೆ ಜೈ ಎಂದ ಕೊತ್ತತ್ತಿ ಕಾಂಗ್ರೆಸ್ ಮುಖಂಡರು!
ಜೆಡಿಎಸ್ನವರೂ ನಮ್ಮ ಜತೆ ಇದ್ದಾರೆ
ಮಂಡ್ಯದ ಜನರು, ಕಾಂಗ್ರೆಸ್ ನಾಯಕರು ಎಲ್ಲರೂ ನಮ್ಮ ಜತೆಗಿದ್ದಾರೆ. ನಾನು ಹೆಸರು ಹೇಳುವುದಿಲ್ಲ, ಜಿಲ್ಲೆಯ ಜೆಡಿಎಸ್ನ ಕೆಲವು ನಾಯಕರು ಕೂಡ ನಮ್ಮೊಂದಿಗಿದ್ದಾರೆ. ಅವರು ನಮ್ಮನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ನಾಯಕರ ಆಶೀರ್ವಾದ ನಮಗಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು?
ಸ್ವಾಭಿಮಾನ ಎತ್ತಿ ಹಿಡಿಯುತ್ತಾರೆ
ಇಡೀ ದೇಶ ಮಂಡ್ಯದ ಕಡೆ ನೊಡುತ್ತಿದೆ. ಮೇ 23ರಂದು ಸುಮಲತಾ ಅಂಬರೀಷ್ ಅವರ ಗೆಲುವಿನ ಬಗ್ಗೆ ವಿಶ್ವಾಸವಿದೆ. ಮಂಡ್ಯದ ಜನರು ಸ್ವಾಭಿಮಾನಿಗಳು. ಆ ಸ್ವಾಭಿಮಾನ ಎತ್ತಿ ಹಿಡಿದು ಅಂಬರೀಷ್ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಸಾಬೀತುಪಡಿಸುತ್ತಾರೆ. ಸುಮಲತಾ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಆರೋಪಕ್ಕೆ ಪುಷ್ಟಿ
ಕೆಪಿಸಿಸಿ ಸದಸ್ಯರಾಗಿದ್ದ ಎಸ್. ಸಚ್ಚಿದಾನಂದ ಅವರು ಬಹಿರಂಗವಾಗಿಯೇ ಸುಮಲತಾ ಅಂಬರೀಷ್ ಅವರ ಪರ ಪ್ರಚಾರಕ್ಕೆ ಇಳಿದಿದ್ದರು. ಕಾಂಗ್ರೆಸ್ ನಾಯಕರ ಎಚ್ಚರಿಕೆಗೆ ಕಿವಿಗೊಡದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆ.ಬಿ. ಚಂದ್ರಶೇಖರ್, ಬಾಲಕೃಷ್ಣ ಮುಂತಾದ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿಗಳು ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪಣತೊಟ್ಟಿದ್ದರು. ಹೀಗಾಗಿ ಅವರು ಸುಮಲತಾ ಅವರ ಪ್ರಚಾರ ನಡೆಸಿದ್ದರು ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಅವರ ಆರೋಪಗಳಿಗೆ ಪುಷ್ಟಿ ನೀಡುವಂತೆ ಸಚ್ಚಿದಾನಂದ ಹೇಳಿಕೆ ನೀಡಿದ್ದಾರೆ.
ನಿಖಿಲ್ ಸೋಲಿಗೆ ಪಣ
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗಿಂತಲೂ ನಿಖಿಲ್ ಕುಮಾರಸ್ವಾಮಿ ಅವರ ಸೋಲು ಕಾಂಗ್ರೆಸ್ನ ಸ್ಥಳೀಯ ಮುಖಂಡರಿಗೆ ಮುಖ್ಯವಾಗಿದೆ. ಈ ಕಾರಣಕ್ಕಾಗಿ ಸುಮಲತಾ ಗೆಲುವಿಗಾಗಿ ಶತಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಜಗಳ ಹಿಂದಿನಿಂದಲೂ ಇದೆ. ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಎಲ್ಲ ಕ್ಷೇತ್ರಗಳೂ ಜೆಡಿಎಸ್ ಪಾಲಾಗಿದ್ದವು. ಇದರಿಂದ ಅಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಹಿಡಿತ ಪಡೆದುಕೊಳ್ಳಬೇಕೆಂಬ ಬಯಕೆಯಿತ್ತು. ಆದರೆ ಅಲ್ಲಿ ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಕಣಕ್ಕಿಳಿಸಿದ್ದು, ಹಾಗೂ ಕಾಂಗ್ರೆಸ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವುದು ಸ್ಥಳೀಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಅಸಮಾಧಾನ ಹೊಂದಿರುವ ನಾಯಕರು ನಿಖಿಲ್ ಸೋಲಿಗಾಗಿ ಸುಮಲತಾ ಅವರ ಪರ ಓಡಾಡಿದ್ದಾರೆ ಎನ್ನಲಾಗಿದೆ.