ಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕು
ಮಂಡ್ಯ, ಜುಲೈ 06 : ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. "ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಪಟ್ಟಿದ್ದೀನಿ" ಎಂದು ಅವರು ಹೇಳಿದ್ದಾರೆ.
ಸೋಮವಾರ ಸುಮಲತಾ ಅಂಬರೀಶ್ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಜುಲೈ 4ರ ಶನಿವಾರ ಸುಮಲತಾ ಅವರಿಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ಇಂದು ಪರೀಕ್ಷೆಯ ವರದಿ ಬಂದಿತ್ತು.
ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!
"ರೋಗ ನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ" ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಕರ್ನಾಟಕ; ಹೋಂ ಐಸೋಲೇಷನ್ ಮಾರ್ಗಸೂಚಿಗಳು
ಬೆಂಗಳೂರಿನಲ್ಲಿರುವ ಸುಮಲತಾ
ಮಂಡ್ಯ ಸಂಸದೆ ಸುಮಲತಾ ಬೆಂಗಳೂರಿನ ಜೆ. ಪಿ. ನಗರದ ನಿವಾಸದಲ್ಲಿದ್ದಾರೆ. ವೈದ್ಯರ ಸೂಚನೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಮೊದಲನೇ ಮಹಡಿಯಲ್ಲಿ ಸುಮಲತಾ ವಾಸ್ತವ್ಯ ಹೂಡಿದ್ದಾರೆ.
ಅಭಿಷೇಕ್ಗೂ ಪರೀಕ್ಷೆ
ಸುಮಲತಾಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾದ ಹಿನ್ನಲೆಯಲ್ಲಿ ಪುತ್ರ ಅಭಿಷೇಕ್ಗೂ ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಮನೆಯ 3ನೇ ಮಹಡಿಯಲ್ಲಿ ಅಭಿಷೇಕ್ ಕ್ವಾರಂಟೈನ್ನಲ್ಲಿದ್ದಾರೆ. ಮನೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಪರೀಕ್ಷೆಯನ್ನು ನಡೆಸಲಾಗಿದೆ.
ಮುಖ್ಯಮಂತ್ರಿಗಳ ಭೇಟಿ
ಕಳೆದ ವಾರ ಸುಮಲತಾ ಅಂಬರೀಶ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಅಂಬರೀಶ್ ಸ್ಮಾರಕ ನಿರ್ಮಾಣದ ಕುರಿತು ಮಾತುಕತೆ ನಡೆಸಿದ್ದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪುತ್ರ ಅಭಿಷೇಕ್ ಜೊತೆ ಸುಮಲತಾ ಪಾಲ್ಗೊಂಡಿದ್ದರು.
|
ಕೊರೊನಾ ಸೋಂಕು ತಗುಲಿದೆ
ಸುಮಲತಾ ಅಂಬರೀಶ್ ಕೊರೊನಾ ಸೋಂಕು ತಗುಲಿರುವ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.