ಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚು
Recommended Video
ಮಂಡ್ಯ, ಅಕ್ಟೋಬರ್ 16: ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಲ್.ಆರ್. ಶಿವರಾಮೇಗೌಡ ಸೋಮವಾರ ನಾಮಪತ್ರ ಹಾಗೂ ಆಸ್ತಿ ವಿವರ ಸಲ್ಲಿಸಿದರು.
ಮಾಜಿ ಶಾಸಕರೂ ಆಗಿರುವ ಶಿವರಾಮೇಗೌಡ 60 ಕೋಟಿ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದು, ಅದರಲ್ಲಿ 40 ಕೋಟಿ ರೂಪಾಯಿ ಆಸ್ತಿ ಅವರ ಪತ್ನಿಯ ಹೆಸರಿನಲ್ಲಿಯೇ ಇದೆ.
ಮಂಡ್ಯ ಲೋಕಸಭೆ ಕ್ಷೇತ್ರವು ಜೆಡಿಎಸ್ ನಾಯಕ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿತ್ತು. ಸಂಸತ್ ಸದಸ್ಯರಾಗಿದ್ದ ಪುಟ್ಟರಾಜು ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಗೆದ್ದು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!
ವಿಧಾನಸಭೆಗೆ ಆಯ್ಕೆಯಾದ ಬಳಿಕ ಅವರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಇಳಿಸುವ ಬಗ್ಗೆ ಗೊಂದಲಗಳಿದ್ದವು. ಅಲ್ಲದೆ, ಜೆಡಿಎಸ್ನಲ್ಲಿಯೂ ಲಕ್ಷ್ಮಿ ಅಶ್ವಿನ್ ಗೌಡ ಮತ್ತು ಶಿವರಾಮೇಗೌಡ ಅವರ ನಡುವೆ ಪೈಪೋಟಿ ಇತ್ತು. ಅಂತಿಮವಾಗಿ ಶಿವರಾಮೇಗೌಡ ಅವರನ್ನು ಆಯ್ಕೆ ಮಾಡಿದ್ದು, ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಇಬ್ಬರ ಬಳಿ ಆರು ಕಾರುಗಳು
ಶಿವರಾಮೇಗೌಡ ಮತ್ತು ಅವರ ಪತ್ನಿ ಸುಧಾ ತಲಾ ಮೂರು ಕಾರುಗಳನ್ನು ಹೊಂದಿದ್ದು, ಇವುಗಳ ಮೌಲ್ಯ 50 ಲಕ್ಷ ರೂ. ಮಾರುತಿ ಸ್ವಿಫ್ಟ್, ಇನ್ನೋವಾ ಮತ್ತು ಸ್ಕಾರ್ಪಿಯೋ ಕಾರುಗಳು ಶಿವರಾಮೇಗೌಡ ಅವರ ಬಳಿ ಇವೆ. ಸುಧಾರ ಅವರ ಬಳಿ ಡಸ್ಟರ್, ಇಕೋಸ್ಪೋರ್ಟ್ಸ್, ನಿಸ್ಸಾನ್ ಕಾರುಗಳಿವೆ.
ಶಿವರಾಮೇಗೌಡ ಅವರ ಬಳಿ 3.5 ಲಕ್ಷ ರೂ ಮೌಲ್ಯದ 112 ಗ್ರಾಂ. ಚಿನ್ನವಿದ್ದರೆ, ಅವರ ಪತ್ನಿ ಹೆಸರಿನಲ್ಲಿ 35 ಲಕ್ಷ ರೂ. ಮೌಲ್ಯದ 1.12 ಕೆ.ಜಿ. ಚಿನ್ನವಿದೆ ಎಂದು ತೋರಿಸಿದ್ದಾರೆ.
ಏಳು ಲಕ್ಷ ರೂ. ಆದಾಯ
ಶಿವರಾಮೇಗೌಡ ಏಳು ಲಕ್ಷ ರೂ. ಆದಾಯ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಪತ್ನಿಗೆ 21 ಲಕ್ಷ ರೂ ಆದಾಯವಿದೆ. ಇಬ್ಬರ ಕೈಯಲ್ಲಿಯೂ ಇರುವ ನಗದು ಹಣ 1.50 ಲಕ್ಷ ರೂ. ಮಾತ್ರ. ವಿವಿಧೆಡೆ 30 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 9 ಕೋಟಿ ರೂ. ಮೌಲ್ಯದ ಎರಡು ಮನೆಗಳಿವೆ. ಪತ್ನಿ ಸುಧಾ ಅವರ ಹೆಸರಿನಲ್ಲಿ 7.5 ಕೋಟಿ ಮೌಲ್ಯದ ಮನೆ ಇದೆ.
ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ
30 ಲಕ್ಷ ರೂ ಸಾಲ
15 ಕೋಟಿ ರೂ ಬೆಲೆಬಾಳುವ ಕೃಷಿ ಜಮೀನನ್ನು ಶಿವರಾಮೇಗೌಡ ಹೊಂದಿದ್ದಾರೆ. 30 ಲಕ್ಷ ರೂ ಸಾಲ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸುಧಾ ಅವರ ಹೆಸರಿನಲ್ಲಿ 24 ಲಕ್ಷ ರೂ. ಸಾಲವಿದೆ. 2018-19ನೇ ಸಾಲಿನಲ್ಲಿ ಶಿವರಾಮೇಗೌಡ 7 ಲಕ್ಷ ರೂ. ತೆರಿಗೆ ಪಾವತಿಸಿದ್ದರೆ, ಸುಧಾ 20 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ.
ಶಿವರಾಮೇಗೌಡ ವಿರುದ್ಧ ಐದು ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆ ಹಂತದಲ್ಲಿವೆ.
ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ!
ಲಕ್ಷ್ಮಿಗೆ ಟಿಕೆಟ್ ಕೈತಪ್ಪಿಸಿದ್ದೇಕೆ?
ಮಂಡ್ಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್ನಿಂದ ಲಕ್ಷ್ಮಿ ಅಶ್ವಿನ್ ಗೌಡ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಇದೇ ಸಮಯಕ್ಕೆ ಮಾಜಿ ಶಾಸಕ ಎಲ್. ಆರ್. ಶಿವರಾಮೇಗೌಡ ಅವರೂ ಕಣಕ್ಕಿಳಿಯುವ ಆಸಕ್ತಿ ತೋರಿಸಿದ್ದರು. ಆದರೆ, ದೇವೇಗೌಡರ ನೇತೃತ್ವದಲ್ಲಿ ಸತತ ಸಮಾಲೋಚನೆ ನಡೆಸಿದ ನಾಯಕರು ಲಕ್ಷ್ಮಿ ಅವರ ಬದಲು ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಲಕ್ಷ್ಮಿ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ, ಮುಂದಿನ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಸ್ಥಾನ ಬಿಟ್ಟುಕೊಡುವಂತೆ ಅವರ ಮನವೊಲಿಸುವುದು ಕಷ್ಟ. ಶಿವರಾಮೇಗೌಡ ಅವರ ಮನವೊಲಿಸುವುದು ಸುಲಭ. ಹೀಗಾಗಿ ಈ ಚುನಾವಣೆಯಲ್ಲಿ ಲಕ್ಷ್ಮಿ ಅವರ ಬದಲು ಶಿವರಾಮೇಗೌಡ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ.
ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿ