ವಾಕ್ಸಮರದಲ್ಲಿ ಮತ್ತೆ ಸುಮಲತಾ ಹೆಸರು ಎಳೆದು ತಂದ ಮಂಡ್ಯ ನಾಯಕರು
ಮಂಡ್ಯ, ಮೇ.15: ಮಂಡ್ಯದಲ್ಲಿ ಆರೋಪ ಪ್ರತ್ಯಾರೋಪಗಳು ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸ್ಥಳೀಯ ನಾಯಕರು ತಮ್ಮ ಬಾಯಿಚಪಲವನ್ನು ವಾಗ್ದಾಳಿ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆಯಾದರೂ ಮಧ್ಯೆ ಸುಮಲತಾ ಅವರನ್ನು ಎಳೆದು ತರುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.
ಇದೀಗ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡರ ಅವರನ್ನು ಜರಿಯುವ ಭರದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಎಳೆದು ತಂದಿದ್ದಾರೆ. ಗಂಡನನ್ನು ಕಳೆದುಕೊಂಡು ಅಘಾತದಲ್ಲಿರುವ ಹೆಣ್ಣುಮಗಳನ್ನು ನಿಲ್ಲಿಸಿ ಚುನಾವಣೆ ನಡೆಸಿರುವುದೇ ದೊಡ್ಡ ಸಾಧನೆಯಾ ಎಂದು ಪ್ರಶ್ನಿಸಿರುವುದು ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯದಲ್ಲಿ ರಾಜಕೀಯದ ದಿಕ್ಕು ಬದಲಿಸುತ್ತಿರುವ ಕೈ-ತೆನೆ ನಾಯಕರ ಕಚ್ಚಾಟ
ಮುಂದುವರೆದು ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಜಕೀಯ ಅಸಮಾಧಾನಿತರು, ಪಕ್ಷಕ್ಕೆ ದ್ರೋಹ ಮಾಡಿದವರು, ಪಕ್ಷದಿಂದ ತಿರಸ್ಕೃತರಾದವರು ಮುಖ್ಯಮಂತ್ರಿ ಮಗನ ವಿರುದ್ಧ ನಿಂತು ಒಬ್ಬ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಂಬರೀಶ್ ಅವರ ನಿಧನದ ಬಳಿಕ ಅವರ ಸಾವನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಅವರ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ದೊಡ್ಡ ಸಾಧನೆ ಮಾಡಿದವರ ತರ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗ ಅನುಕಂಪದ ಲಾಭ ಪಡೆದು ಮತ್ತೆ ರಸ್ತೆಗೆ ಬರುವ ಪ್ರಯತ್ನ ಮಾಡುತ್ತಿದ್ದಾರೆ ಎಂದ ರವೀಂದ್ರ ಶ್ರೀಕಂಠಯ್ಯ, ನೀವೆಲ್ಲಾ ರಸ್ತೆಗೆ ಬರಬೇಕು. ನೀವು ಯಾರ ಮನೆಯಲ್ಲೂ ಕೂರಬಾರದು. ನೀವು ಮಾಡಿರುವ ದ್ರೋಹ ನಿಮ್ಮನ್ನು ಸದಾ ಕಾಡಬೇಕು. ಸದಾ ನೀವು ರಸ್ತೆಯಲ್ಲೇ ಇರಬೇಕು ಎಂದು ಚಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಪರೋಕ್ಷವಾಗಿಯೇ ಆಕ್ರೋಶದ ಮಳೆಗೆರೆದಿದ್ದಾರೆ.