ಮಂಡ್ಯ: ಎಚ್ಡಿಕೆ ಸಿಎಂ ಆಗಿದ್ದಕ್ಕೆ ಹರಕೆ ತೀರಿಸುತ್ತಿರುವ ಅಭಿಮಾನಿಗಳು
Recommended Video
ಮಂಡ್ಯ, ಜೂನ್ 19: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಿದೆ. ಚುನಾವಣೆಗೆ ಮುನ್ನ ಮಾಡಿದ ಸಂಕಲ್ಪ ಕೈಗೂಡಿ ಸದ್ಯ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯೂ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳು ಹರಕೆ ತೀರಿಸುವ ಕಾಯಕದಲ್ಲಿ ನಿರತರಾಗಿರುವುದು ಕಂಡು ಬರತೊಡಗಿದೆ.
ಈ ಬಾರಿ ಮಂಡ್ಯ ಜಿಲ್ಲೆಯ ಎಲ್ಲ ಏಳು ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಜೆಡಿಎಸ್ ಇದು ತನ್ನ ಭದ್ರಕೋಟೆ ಎಂಬುದನ್ನು ನಿರೂಪಿಸಿದೆ. ಜತೆಗೆ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕೆಂಬ ಬಯಕೆಯೂ ಕೈಗೂಡಿದೆ.
ಹಾಗೆನೋಡಿದರೆ ಸ್ವತಃ ಎಚ್.ಡಿ.ಕುಮಾರಸ್ವಾಮಿಯವರೇ ಚುನಾವಣೆಗೆ ಮುನ್ನ ಹೋಗದ ದೇವಾಲಯಗಳಿಲ್ಲ. ಮಾಡದ ಸಂಕಲ್ಪವಿಲ್ಲ. ಹುಣ್ಣಿಮೆಗೆ ನಂಜನಗೂಡು, ಅಮವಾಸ್ಯೆಗೆ ಆದಿಚುಂಚನಗಿರಿ ಕಾಳಬೈರವೇಶ್ವರ ದೇಗುಲ ಹೀಗೆ ಹಲವು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಲ್ಲದೆ, ಹಲವು ಹರಕೆಗಳನ್ನು ಹೊತ್ತು ಪೂಜೆ ನೆರವೇರಿಸಿದ್ದರು.
ಇನ್ನು ಮಂಡ್ಯದ ಜಿಲ್ಲೆಯ ವಿವಿಧ ವಿಧಾನಸಭಾಕ್ಷೇತ್ರದಲ್ಲಿ ಅಭಿಮಾನಿಗಳು ಸ್ಥಳೀಯ ಶಾಸಕರು ಗೆದ್ದು, ಕುಮಾರಸ್ವಾಮಿ ಅವರ ಕೈಭದ್ರಪಡಿಸಿ ಸಿಎಂ ಆಗುವಂತಾಗಬೇಕು ಎಂದು ದೇಗುಲಗಳಲ್ಲಿ ಉರುಳುಸೇವೆ, ಮುಡಿಸೇವೆ, ಪಾದಯಾತ್ರೆ ಹೀಗೆ ವಿವಿಧ ಸೇವೆಗಳನ್ನು ಮಾಡುವುದಾಗಿ ಹೇಳಿದ್ದರು.
ಕೆಲವು ಅಭಿಮಾನಿಗಳು ತಾವು ಮಾಡಿದ ಹರಕೆಯನ್ನು ಸದ್ದಿಲ್ಲದೆ, ತೀರಿಸಿದ್ದರೆ ಮತ್ತೆ ಕೆಲವರು ಅದ್ಧೂರಿ ಪ್ರಚಾರದೊಂದಿಗೆ ಹರಕೆ ತೀರಿಸುತ್ತಿದ್ದಾರೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹರಕೆ ಹೊತ್ತವರ ಸಂಖ್ಯೆ ಜಾಸ್ತಿಯಿದ್ದು, ಅಲ್ಲಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಾ.ಕೆ.ಅನ್ನದಾನಿ ಅವರ ಗೆಲುವಿಗಾಗಿ ಹಗಲು ರಾತ್ರಿಶ್ರಮಿಸಿದ ಕಾರ್ಯಕರ್ತರು ಒಂದೆಡೆಯಿದ್ದರೆ, ಮತ್ತೊಂದೆಡೆ ಹರಕೆ ಹೊತ್ತ ಕಾರ್ಯಕರ್ತರೂ ಇದ್ದಾರೆ.
ಈಗ ಹರಕೆ ಹೊತ್ತ ಕಾರ್ಯಕರ್ತರೆಲ್ಲ ಅದನ್ನು ತೀರಿಸುವುದರಲ್ಲಿ ಮಗ್ನರಾಗಿದ್ದಾರೆ. ಈಗಾಗಲೇ ಮಳವಳ್ಳಿ ತಾಲೂಕಿನ ಬಸವನಪುರ ಗ್ರಾಮದ 25 ತಾವು ಹೊತ್ತಿದ್ದ ಹರಕೆಯನ್ನು ತೀರಿಸುವ ಸಲುವಾಗಿ ಅಯ್ಯಪ್ಪಸ್ವಾಮಿ ಯಾತ್ರೆಗೆ ತೆರಳಿದ್ದಾರೆ.
ಅಭಿಪ್ರಾಯ : ತೂಗುಕತ್ತಿಯ ಅಡಿಯಲ್ಲಿ ಕುಮಾರಸ್ವಾಮಿ ಸರಕಾರ
ಇನ್ನೊಂದೆಡೆ ಮಲೆಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡುವುದಾಗಿ ಮಳವಳ್ಳಿ ಪಟ್ಟಣದ ಒಕ್ಕಲಿಗರ ಬೀದಿಯ ನಿವಾಸಿಗಳು, ವಿಶ್ವೇಶ್ವರಯ ಸಂಘದ ಪದಾಧಿಕಾರಿಗಳಾದ ಸುಮಾರು ಇಪ್ಪತ್ತು ಮಂದಿ ಹರಕೆ ಹೊತ್ತಿದ್ದರು. ಇದೀಗ ಅವರು ಮಳವಳ್ಳಿಯಿಂದ ಹೊರಟು ಮಲೆನಹದೇಶ್ವರನ ಸನ್ನಿಧಿಯನ್ನು ತಲುಪಿ ಪೂಜೆ ಸಲ್ಲಿಸಿದ್ದಾರೆ.
ಈ ಪಾದಯಾತ್ರೆಯಲ್ಲಿ ವೇಳೆ ಅಭಿಮಾನಿಯೊಬ್ಬ ಹಸಿರು ಮತ್ತು ಬಿಳಿಬಣ್ಣ ಹೊಂದಿರುವ ಜೆಡಿಎಸ್ ನ ಬಾವುಟವನ್ನು ಹೋಲುವ ಪೈಜಾಮ ಧರಿಸಿದ್ದು ಎಡಭಾಗ ಪೂರ್ತಿ ಹಸಿರು ಬಣ್ಣವಾಗಿದ್ದರೆ, ಬಲ ಭಾಗ ಬಿಳಿಯ ಬಣ್ಣ ಹೊಂದಿದ್ದು ಇದರಲ್ಲಿ ಪಕ್ಷದ ಚಿಹ್ನೆಯಿದೆ.
ಇನ್ನು ಬೃಹತ್ ಬಾವುಟವನ್ನು ಹಿಡಿದು ನಡೆಯುವುದು ನೋಡುಗರ ಗಮನಸೆಳೆಯುತ್ತಿದೆ. ಒಟ್ಟಾರೆಯಾಗಿ ಈಗ ಅಭಿಮಾನಿಗಳು ಮಂಡ್ಯ ಮಾತ್ರವಲ್ಲದೆ ರಾಜ್ಯದಾದ್ಯಂತ ತಮ್ಮ ನೆಚ್ಚಿನ ನಾಯಕರ ಗೆಲುವಿಗಾಗಿ ಮಾಡಿಕೊಂಡ ಸಂಕಲ್ಪವನ್ನು ಈಡೇರಿಸುವುದರಲ್ಲಿ ನಿರತರಾಗಿದ್ದಾರೆ.