ಮಂಡ್ಯ: ಕೊರೊನಾ ಸೋಂಕು ತಗುಲಿದ್ದ ಫ್ರಂಟ್ ಲೈನ್ ವಾರಿಯರ್ಸ್ ಗುಣಮುಖ
ಮಂಡ್ಯ, ಜೂನ್ 5: ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿ ಚಿಕಿತ್ಸೆಗೆ ದಾಖಲಾಗಿದ್ದ ಮಂಡ್ಯದ ಫ್ರಂಟ್ ಲೈನ್ ವಾರಿಯರ್ಸ್ ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಹೊಂದಿದ್ದಾರೆ.
ಕೊರೊನಾ ಮುಕ್ತರಾಗಿ ಮಿಮ್ಸ್ ನಿಂದ ವಾರಿಯರ್ಸ್ ಗಳಾದ ಮಳವಳ್ಳಿಯು ಸಿಡಿಪಿಒ ಕುಮಾರ್, ಕೆ.ಆರ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೆಬಲ್ ವಿ.ನಾಗರಾಜು ಅವರು ಕೇವಲ 14 ದಿನಗಳಲ್ಲಿ ಕೊರೊನಾ ಮುಕ್ತರಾಗಿ ಬಿಡುಗಡೆ ಹೊಂದಿದ್ದು, ಇವರಿಗೆ ಪೊಲೀಸರು ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದರು. ಇವರೊಂದಿಗೆ ಇತರೆ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ವಿಶೇಷವಾಗಿದೆ.
ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭ
ಈ ಸಂಬಂಧ ಮಿಮ್ಸ್ ನ ವೈದ್ಯಕೀಯ ಅಧೀಕ್ಷಕರ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಅವರು, ""ಕೊರೊನಾ ವೈರಸ್ ಮಹಾಮಾರಿಯನ್ನು ಹೋಗಲಾಡಿಸುವಲ್ಲಿ ಕೇವಲ ವೈದ್ಯರು, ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಸ್ವಚ್ಛತೆ ಕಾಪಾಡುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವೈರಸ್ ನ್ನು ದೇಶದಿಂದ ತೊಲಗಿಸಬೇಕಾಗಿದೆ'' ಎಂದರು.
ಕೊರೊನಾ ವಾರಿಯರ್ಸ್ ಗಳಾಗಿ ಶ್ರಮಿಸಿದ ಮಳವಳ್ಳಿಯ ಸಿಡಿಪಿಒ ಕುಮಾರ್ ಹಾಗೂ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೆಬಲ್ ವಿ.ನಾಗರಾಜು ಅವರಿಗೂ ಈ ಸೋಂಕು ತಗುಲಿದ್ದರಿಂದಾಗಿ ಅಧಿಕಾರಿ ವರ್ಗ ಬಹಳ ಆತಂಕಕ್ಕೀಡಾಗಿದ್ದರು. ಆದರೆ ಅವರು ಗುಣಮುಖರಾಗಲು ಕಾರಣರಾದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮಾತನಾಡಿ, ಕೊರೊನಾ ವಾರಿಯರ್ಸ್ ಗಳಾದ ಮಳವಳ್ಳಿಯ ಸಿಡಿಪಿಒ ಕುಮಾರ್ ಹಾಗೂ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಪೇದೆ ವಿ.ನಾಗರಾಜು ಅವರು ಒಬ್ಬ ಶತ್ರುವಿನ ವಿರುದ್ಧ ಹೋರಾಟ ಮಾಡಿ ಗೆದ್ದು ಬಂದಿದ್ದಾರೆ. ಇಬ್ಬರೂ ಶೀಘ್ರ ಗುಣಮುಖರಾಗಿರುವುದು ಬಹಳ ಸಂತಸ ತಂದಿದೆ ಎಂದರು.
ಕೊರೊನಾವೈರಸ್ ಏರಿಕೆ ನಡುವೆ ಮಂಡ್ಯ ಜಿಲ್ಲಾಡಳಿತದ್ದು ಮೆಚ್ಚುಗೆಯ ಕೆಲಸ
ಈ ರೋಗದ ಬಗ್ಗೆ ಉದಾಸೀನ ತೋರದೆ ಬಹಳ ಎಚ್ಚರಿಕೆ ವಹಿಸಬೇಕು. ಇದನ್ನು ಹೊರತುಪಡಿಸಿ ಬೇರಾವುದೇ ದಾರಿಯಿಲ್ಲ. ಮುಖಗವಸು, ಸ್ಯಾನಿಟೈಸರ್ ಬಳಸುವ ಮೂಲಕ ದಿನನಿತ್ಯದ ಕಾಯಕದಲ್ಲಿ ತೊಡಗುವಂತೆ ಸಲಹೆ ನೀಡಿದರು.