ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ಉಳಿವಿಗೆ 1 ರೂ ಸಂಗ್ರಹ
ಮಂಡ್ಯ, ಮಾರ್ಚ್ 11: ಮೈಸೂರು ಮಹಾರಾಜರಿಂದ ಆರಂಭವಾದ ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಸರ್ಕಾರದ ಸ್ವಾಮ್ಯದಲ್ಲಿದ್ದು ಅದನ್ನು ಖಾಸಗೀಕರಣ ಮಾಡುವುದಕ್ಕೆ ಮಂಡ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಕಾರ್ಖಾನೆಯನ್ನು ಉಳಿಸುವಂತೆ ಒತ್ತಾಯಿಸಿ ರೈತ ಜಾಗೃತಿ ಯಾತ್ರೆ ನಡೆಸುತ್ತಿರುವ ಕಾರ್ಯಕರ್ತರು, ವರ್ತಕರು, ಇದೀಗ ಸಾರ್ವಜನಿಕರಿಂದ ಒಂದು ರೂ. ನಾಣ್ಯ ಸ್ವೀಕರಿಸುತ್ತಿದ್ದು, ಅದನ್ನು ಸರ್ಕಾರಕ್ಕೆ ನೀಡಿ ಸರ್ಕಾರಿ ಸ್ವಾಮ್ಯದಲ್ಲೇ ಸಮರ್ಥವಾಗಿ ಮುನ್ನಡೆಸಿ ಎಂಬ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು
ಸರ್ಕಾರದ ಒಡೆತನದಲ್ಲಿರುವ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಅವು ಇತಿಹಾಸದ ಪುಟ ಸೇರುವುದು ನಿಶ್ಚಿತ. ಈಗಾಗಲೇ ಹಲವು ಕಾರ್ಖಾನೆಗಳು ಮುಚ್ಚಿಹೋಗಿವೆ. ಹೀಗಾಗಿ ಖಾಸಗೀಯವರ ಹುನ್ನಾರಕ್ಕೆ ಒಳಗಾಗದೆ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಸುವಂತೆ ಆಗ್ರಹಿಸಿ ನಗರದಲ್ಲಿ ಜಾಗೃತಿ ಯಾತ್ರೆಯನ್ನು ನಡೆಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮೈಷುಗರ್ ಕಾರ್ಖಾನೆಯನ್ನು ನಿರ್ವಹಿಸಲಾಗದ ಸರ್ಕಾರ, ಖಾಸಗೀಕರಣ ಮಾಡಲು ಹೊರಟಿರುವುದನ್ನು ವಿರೋಧಿಸಿ ಜಿಲ್ಲೆಯ ಪ್ರತಿಯೊಬ್ಬರಿಂದಲೂ ಒಂದು ರೂ. ಸಂಗ್ರಹಿಸಿ ಸರ್ಕಾರಕ್ಕೆ ದೇಣಿಗೆ ನೀಡಿ ಕಾರ್ಖಾನೆ ಪ್ರಾರಂಭಿಸುವಂತೆ ಒತ್ತಾಯಿಸಲಾಗುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈಗಾಗಲೇ ರೈತ ಜಾಗೃತಿ ಯಾತ್ರೆ ಕಾಳಿಕಾಂಬ ದೇವಾಲಯ, ಕಾಮನ ವೃತ್ತ, ಜೈನರ ಬೀದಿ, ಮಾರುಕಟ್ಟೆ ರಸ್ತೆ, ಹೊಳಲು ವೃತ್ತ, ಬೀಡಿ ಕಾಲೋನಿ, ಕೆರೆಯಂಗಳ, ಮುಸ್ಲಿಂ ಬ್ಲಾಕ್, ಶಂಕರನಗರ, ಆರ್.ಪಿ. ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಇದನ್ನು ಪ್ರತಿಭಟನಾಕಾರರು ಮುಂದುವರಿಸಲಿದ್ದಾರೆ.