ಮಂಡ್ಯದ ಭಗೀರಥ ಕಾಮೇಗೌಡರ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿ
ಮಂಡ್ಯ, ಸೆಪ್ಟೆಂಬರ್ 13 : ಮಂಡ್ಯದ ಭಗೀರಥ, ಪ್ರಕೃತಿ ಸಂರಕ್ಷಕ ಕಾಮೇಗೌಡರನ್ನು ಜಿಲ್ಲಾಧಿಕಾರಿಗಳು ಭೇಟಿ ಮಾಡಿದರು. "ಕೆರೆಗಳ ಅಭಿವೃದ್ಧಿ, ಪ್ರಕೃತಿ ಸಂರಕ್ಷಣೆಗೆ ಕಾಮೇಗೌಡರು ಮಾಡುತ್ತಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು" ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದನಿ ಪರ್ವತದ ಮೇಲೆ ಕೆರೆ ಕಟ್ಟಿರುವ ಕಾಮೇಗೌಡರನ್ನು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಭೇಟಿ ಮಾಡಿದರು. ಕಾಮೇಗೌಡರು ಮಾಡಿರುವ ಕೆಲಸಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು.
ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "82 ವರ್ಷದ ಕಾಮೇಗೌಡರು ಸುಮಾರು 15 ಕೆರೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲೂ ಅದರಲ್ಲಿ ನೀರು ಉಳಿಯುವ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕೆರೆಗಳ ನಿರ್ವಹಣೆ ಮಾಡುತ್ತಿದ್ದಾರೆ" ಎಂದು ಶ್ಲಾಘಿಸಿದರು.
ಬೆಂಗಳೂರು: ಬಿದ್ದ ಮರಗಳು ಹೇಳುತ್ತಿವೆ ಮನುಷ್ಯನ ಭವಿಷ್ಯ
"ಪ್ರಶಸ್ತಿಗಳಿಂದ ಬಂದ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ಇವರನ್ನು ಅನುಸರಿಸಿ ಪ್ರಕೃತಿಯ ಸಂರಕ್ಷಣೆ ಮುಂದಾಗಬೇಕು" ಎಂದು ಎಂ. ವಿ. ವೆಂಕಟೇಶ್ ಕರೆ ನೀಡಿದರು.
ಮಂಡ್ಯದ ಕಾಮೇಗೌಡರಿಗೆ 'ಪ್ರಣಾಮ್' ಎಂದ ಮಾಜಿ ಕ್ರಿಕೆಟರ್ ಲಕ್ಷ್ಮಣ್
ಯಾರು ಈ ಕಾಮೇಗೌಡ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು ಕಾಮೇಗೌಡ. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗಳು ಕಾಮೇಗೌಡರ ಆಸ್ತಿ.
ನೀರಿನ ದಾಹ ಕಂಡು ಕೆರೆ ನಿರ್ಮಾಣ
ಕಾಮೇಗೌಡರು ಕೆರೆಯನ್ನು ಕಟ್ಟುವ ಕಾಯಕ ಕೈಗೊಳ್ಳಲು ಪ್ರಾಣಿಗಳ ನೀರಿನ ದಾಹವೇ ಕಾರಣ. ಸುಮಾರು 12 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿಗಳನ್ನು ಮೇಯಿಸಲು ಹೋದಾಗ ವಿಪರೀತ ದಾಹವಾಗಿತ್ತು. ಎಲ್ಲಿ ಹುಡುಕಿದರೂ ಒಂದು ಹನಿ ನೀರು ಸಿಗಲಿಲ್ಲ. ತುಸು ದೂರದಲ್ಲಿದ್ದ ಮನೆಗೆ ಹೋಗಿ ಅವರು ದಾಹ ಇಂಗಿಸಿಕೊಂಡರು. ಆಗ ಅವರು ನಮ್ಮ ದಾಹ ತೀರಿತು ಪ್ರಾಣಿಗಳ ಕಥೆ ಏನು ಎಂದು ಚಿಂತಿಸಿದರು. ಅದರ ಫಲವಾಗಿಯೇ 14ಕ್ಕೂ ಹೆಚ್ಚು ಕೆರೆ ಕಟ್ಟಿಸಿದ್ದಾರೆ.
ಪ್ರಶಸ್ತಿಯಲ್ಲಿ ಬಂದ ಹಣವೂ ಬಳಕೆ
ಕಾಮೇಗೌಡರು ಇದುವರೆಗೂ ಸುಮಾರು 14 ಕೆರೆಗಳನ್ನು ಕಟ್ಟಿಸಿದ್ದಾರೆ. ಅವುಗಳಲ್ಲಿ 12ರಲ್ಲಿ ನೀರಿದೆ. ವಿವಿಧ ಸಂಘಟನೆಗಳು ಇವರ ಕಾರ್ಯವನ್ನು ನೋಡಿ ಹಲವಾರು ಪ್ರಶಸ್ತಿಗಳನ್ನು ನೀಡಿವೆ. ಪ್ರಶಸ್ತಿಗಳ ಜೊತೆಗೆ ಬಂದ ಹಣವನ್ನು ಕೆರೆಗಳ ನಿರ್ಮಾಣಕ್ಕೆ ಅವರು ಬಳಕೆ ಮಾಡಿದ್ದಾರೆ. "ಜೀವದಲ್ಲಿ ಕೊನೆಯ ಉಸಿರು ಇರುವ ತನಕ ಇದೇ ಕಾಯಕ ಮಾಡುವುದಾಗಿ" ಅವರು ಪಣ ತೊಟ್ಟಿದ್ದಾರೆ.
ಹುಚ್ಚ ಎಂದು ಜರಿದಿದ್ದರು
ಕುರಿ ಮೇಯಿಸುವ ಜೊತೆಗೆ ಕರೆ ನಿರ್ಮಾಣ ಮಾಡುವೆ ಎಂದು ಗುದ್ದಲಿ ಹಿಡಿದು ಕೆಲಸ ಮಾಡುವ ಕಾಮೇಗೌಡರನ್ನು ನೋಡಿ ಜನರು, ಸಂಬಂಧಿಕರು ಹುಚ್ಚ ಎಂದು ಜರಿದಿದ್ದರು. ರಾತ್ರಿ ಚಂದ್ರ, ದೀಪದ ಬೆಳಕಿನಲ್ಲಿಯೂ ಗುಡ್ಡದಲ್ಲಿ ಕೆರೆ ನಿರ್ಮಾಣ ಮಾಡಲು ಕಾಮೇಗೌಡರು ಕೆಲಸ ಮಾಡಿದ ಉದಾಹರಣೆಗಳಿವೆ.
ನನ್ನ ಪ್ರಪಂಚ ಕೆರೆ, ಬೆಟ್ಟ
"ಚಿಕ್ಕವನಾಗಿದ್ದಾಗಿನಿಂದಲ ಕೆರೆ, ಬೆಟ್ಟವೇ ನನ್ನ ಪ್ರಪಂಚ. ಕೆರೆ, ಗಿಡ ಬಿಟ್ಟರೆ ನನಗೇನು ಗೊತ್ತಿಲ್ಲ. ಆರಂಭದಿಂದ ನಾನೊಬ್ಬನೇ ಇದನ್ನು ಮಾಡುತ್ತಿದ್ದೇನೆ. ಇನ್ನೊಬ್ಬರನ್ನು ನಂಬಿಕೊಂಡರೆ ನಾನು ಕೆರೆ ಕಟ್ಟಲು ಆಗುತ್ತಿರಲಿಲ್ಲ" ಎಂದು ಕಾಮೇಗೌಡರು ಹೇಳಿದರು.