ಮಂಡ್ಯ ಉಳಿಸಿಕೊಳ್ಳಲು ದಾಳ ಉರುಳಿಸಿದ ದೇವೇಗೌಡರು!
Recommended Video
ಬೆಂಗಳೂರು, ಫೆಬ್ರವರಿ 21 : ಸುಮಲತಾ ಅಂಬರೀಶ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮಂಡ್ಯದಿಂದ ಅವರು 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಗುರುವಾರ ಭೇಟಿಯಾಗಿ ಸುಧೀರ್ಘ ಮಾತುಕತೆ ನಡೆಸಿದರು. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದು, ದೇವೇಗೌಡರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ?
ಮಂಡ್ಯ ಜೆಡಿಎಸ್ ಭದ್ರಕೋಟೆ, ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದು ದೇವೇಗೌಡರು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದರೆ ಜೆಡಿಎಸ್ ಅಭ್ಯರ್ಥಿಯೇ ಆಗಬೇಕು, ಪಕ್ಷೇತರ ಅಭ್ಯರ್ಥಿ ಆಗಬಾರದು ಎಂದು ಹೇಳಿದ್ದಾರೆ.
ಸುಮಲತಾ ಅಂಬರೀಶ್, ಸಿದ್ದರಾಮಯ್ಯ ಭೇಟಿ: ಮಂಡ್ಯ ಟಿಕೆಟ್ ಚರ್ಚೆ
ಜೆಡಿಎಸ್ನಲ್ಲೂ ಮಂಡ್ಯದಿಂದ ಅಭ್ಯರ್ಥಿ ಯಾರು? ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ, ಅಶ್ವಿನ್ ಗೌಡ, ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಹೆಸರುಗಳು ಕೇಳಿಬರುತ್ತಿವೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ...
ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ
ಸುಮಲತಾ ಅಂಬರೀಶ್ ಜೊತೆ ಮಾತುಕತೆ
'ಮಂಡ್ಯದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಬಾರದು. ಮೊದಲು ಸುಮಲತಾ ಅಂಬರೀಶ್ ಅವರ ಜೊತೆಗೆ ಮಾತುಕತೆ ನಡೆಸು. ಯಾವುದೇ ಕಾರಣಕ್ಕೂ ಮಂಡ್ಯ ಜೆಡಿಎಸ್ ಕೈ ತಪ್ಪಬಾರದು. ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡುವುದಾದರೆ ಜೆಡಿಎಸ್ನಿಂದ ಕಣಕ್ಕಿಳಿಯಬೇಕು' ಎಂದು ದೇವೇಗೌಡರು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ.
ಪಕ್ಷೇತರರಾಗಿ ಕಣಕ್ಕಿಳಿಯಬಾರದು
ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ನಿಂದ ಅಥವ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಾರದು. ಪಕ್ಷೇತರ ಅಭ್ಯರ್ಥಿಯಾದರೆ ಕ್ಷೇತ್ರ ಕೈತಪ್ಪಿ ಹೋಗಲಿದೆ. 'ಸುಮಮತಾ ಅಂಬರೀಶ್ ಅವರು ಜೆಡಿಎಸ್ನಿಂದ ಕಣಕ್ಕಿಯಲು ಬಯಸಿದರೆ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಜೊತೆಗೂ ಮಾತುಕತೆ ನಡೆಸಬೇಕು' ಎಂದು ದೇವೇಗೌಡರು ಸೂಚಿಸಿದ್ದಾರೆ.
ಸಚಿವ ಸ್ಥಾನದ ಆಫರ್
'ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯದಂತೆ ಮನವೊಲಿಸಬೇಕು. ಅಗತ್ಯವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡೋಣ. ಮೊದಲು ಅವರ ಜೊತೆ ಮಾತುಕತೆ ನಡೆಸು' ಎಂದು ದೇವೇಗೌಡರು ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.
ಯಾವ ತೀರ್ಮಾನವನ್ನು ಮಾಡಿಲ್ಲ
ಮಂಡ್ಯದಲ್ಲಿ ಗುರುವಾರ ಮಾತನಾಡಿದ ಸುಮಲತಾ ಅಂಬರೀಶ್ ಅವರು, 'ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕು ಎಂದು ನಾನು ತೀರ್ಮಾನಿಸಿರಲಿಲ್ಲ. ಜನರ ಇಷ್ಟಪಡುವಾಗ ಆಲೋಚನೆ ಮಾಡಿದೆ. ಅಂಬಿಯ ಪ್ರೀತಿಯ ಋಣ ತೀರಿಸಲು ಅವಕಾಶ ಸಿಕ್ಕರೆ ಖಂಡಿತ ತೀರಿಸುವೆ. ಚುನಾವಣೆಗೆ ಸ್ಪರ್ಧೆ ಮಾಡಿದರೆ ಮಂಡ್ಯದಿಂದ ಮಾತ್ರ' ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮೊದಲ ಆದ್ಯತೆ
'ಅಂಬರೀಶ್ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ, ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಆಸಕ್ತಿ ಇದೆ. ಅದು ಸಾಧ್ಯವಿಲ್ಲ ಎನ್ನುವುದಾದದರೆ ಅಭಿಮಾನಿಗಳ ನಿರ್ಧಾರಕ್ಕೆ ಬದ್ಧ. ಮೊದಲು ಕಾಂಗ್ರೆಸ್ ಪಕ್ಷಕ್ಕೆ ನನ್ನ ಆದ್ಯತೆ' ಎಂದು ಸುಮಲತಾ ಅಂಬರೀಶ್ ಹೇಳಿದರು.