ಕೊರೊನಾವೈರಸ್ ಏರಿಕೆ ನಡುವೆ ಮಂಡ್ಯ ಜಿಲ್ಲಾಡಳಿತದ್ದು ಮೆಚ್ಚುಗೆಯ ಕೆಲಸ
ಮಂಡ್ಯ, ಮೇ 25: ಮುಂಬೈ ಸಂಪರ್ಕದಿಂದಾಗಿ ಸಕ್ಕರೆನಾಡು ಮಂಡ್ಯ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಪ್ರತಿದಿನವೂ ಬರುತ್ತಿರುವ ಸೋಂಕಿತರ ವರದಿಗಳು ಬೆಚ್ಚಿ ಬೀಳಿಸುತ್ತಿದೆ.
ಇದೇ ರೀತಿ ಪ್ರಕರಣಗಳು ಹೆಚ್ಚುತ್ತಿದ್ದರೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಎಂಬ ಕುಖ್ಯಾತಿಗೆ ಮಂಡ್ಯ ಪಾತ್ರವಾದರೂ ಅಚ್ಚರಿಪಡಬೇಕಾಗಿಲ್ಲ. ಈ ನಡುವೆ ಮಂಡ್ಯ ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕೆಲವು ಕ್ರಮಗಳು ಅನುಕರಣೀಯವಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣ ಮಾಡಲು ಈ ಹಿಂದೆ ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮಗಳು ಹಾಗೂ ಈಗ ತೆಗೆದುಕೊಳ್ಳುತ್ತಿರುವ ಕ್ರಮಗಳು ಮೆಚ್ಚುಗೆಗೆ ಕಾರಣವಾಗಿವೆ.
ಮಂಡ್ಯಕ್ಕೆ ಮುಂಬೈ ಜನರ ಪ್ರವೇಶ ನಿಷೇಧ
ಈಗಾಗಲೇ ಮಂಡ್ಯಕ್ಕೆ ಮುಂಬೈನಿಂದ ಬರುವವರ ಪ್ರವೇಶವನ್ನು ನಿಷೇಧಿಸಲಾಗಿದೆ. ಆ ಮೂಲಕ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಸೋಂಕು ಕಾಣಿಸಿಕೊಂಡವರು ಕ್ವಾರಂಟೈನಲ್ಲಿದ್ದವರೇ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಜತೆಗೆ ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮವೂ ಮಂಡ್ಯ ಜನದ ನೆಮ್ಮದಿಯುಸಿರು ಬಿಡುವಂತೆ ಮಾಡಿದೆ.
ಮುಂಬೈನಿಂದ ಮಂಡ್ಯಕ್ಕೆ ಬರುವವರಿಗೆ ಪ್ರವೇಶ ಬಂದ್
ಎಲ್ಲ ಕಡೆಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿದ್ದ ಸಮಯದಲ್ಲಿ ಯಾವುದೇ ಪ್ರಕರಣವಿಲ್ಲದೆ, ಹಸಿರು ವಲಯದಲ್ಲಿದ್ದ ಮಂಡ್ಯ ಜಿಲ್ಲೆ ಮುಂದೊಂದು ದಿನ ಸುಮಾರು 254ಕ್ಕೂ ಹೆಚ್ಚು ಸೋಂಕಿತರನ್ನು ಹೊಂದುತ್ತದೆ ಎಂದು ಯಾರೂ ನಂಬಿರಲಿಲ್ಲ. ಪಕ್ಕದ ಮೈಸೂರು ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದ ಕಾಲದಲ್ಲಿಯೂ ಮಂಡ್ಯ ಸುರಕ್ಷಿತವಾಗಿತ್ತು. ಆದರೆ ನಂಜನಗೂಡು ಜುಬಿಲಿಯಂಟ್ ನಂಜು ಮತ್ತು ದೆಹಲಿಯ ತಬ್ಲಿಘಿ ಜಮಾತ್ ಗೆ ತೆರಳಿ ಮರಳಿದವರಿಂದ ಆರಂಭವಾದ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಇದರ ನಡುವೆ ಯಾವಾಗ ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಜನರು ಬರಲು ಆರಂಭಿಸಿದರೋ ಆಗಿನಿಂದಲೇ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.
ಮುಂಬೈನಲ್ಲಿದ್ದವರು ಮರಳಿ ಬಂದರು
ಮಂಡ್ಯದ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ಜನರು ಹಲವು ವರ್ಷಗಳಿಂದ ಮುಂಬೈನ ತಾನಾಜಿನಗರ, ಮಲದಿಈಸ್ಟ್, ಸಾಂತಾಕ್ರೂಜ್, ಉಲ್ಲಾಸ್ನಗರ, ಥಾಣೆ, ಹನೀಫ್ನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಾಸವಾಗಿದ್ದರು. ಈ ಪೈಕಿ ಕೆಲವರು ಹೊಟೇಲ್ ನಲ್ಲಿ ಸಹಾಯಕರಾಗಿ ಗೆಸ್ಟ್ ಹೌಸ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದರೆ, ಇನ್ನು ಕೆಲವರು ಚಾಲಕರಾಗಿ ವೃತ್ತಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಮುಂಬೈನಲ್ಲಿ ಸೋಂಕು ಉಲ್ಬಣಗೊಂಡ ಕಾರಣ ಲಾಕ್ ಡೌನ್ ಮಾಡಿರುವುದರಿಂದ ಕೆಲಸಗಾರರಿಗೆ ಕೆಲಸವೇ ಇಲ್ಲದಂತಾಗಿ ಸಾವಿರಾರು ಜನರು ನಿರುದ್ಯೋಗಿಗಳಾಗಿ ಅಲ್ಲಿ ಜೀವನ ನಿರ್ವಹಣೆ ಮಾಡಲಾಗದೆ ಊರಿಗೆ ಬಂದರೆ ಸಾಕಪ್ಪಾ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ
ಮುಂಬೈನಿಂದ ಬಂದಿದ್ದ 1400ಕ್ಕೂ ಹೆಚ್ಚು ಮಂದಿಯನ್ನು ಮೊದಲು ಹಾಗೂ ಎರಡನೇ ದಿನವೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸೋಂಕಿತರ ವರದಿಗಳು ಈಗಾಗಲೇ ಬಂದಿದ್ದು, ಇನ್ನು 60 ರಿಂದ 80 ಮಂದಿಯ ಪರೀಕ್ಷಾ ಫಲಿತಾಂಶ ಬರಬೇಕಾಗಿದೆ. ಮುಂಬೈನಿಂದ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡದೆ, ಗ್ರಾಮಕ್ಕೆ ಭೇಟಿ ನೀಡಿದ್ದರೆ ದೊಡ್ಡ ಸಮಸ್ಯೆಯಾಗುತ್ತಿತ್ತು. ಇದನ್ನು ಜಿಲ್ಲಾಡಳಿತ, ತಾಲೂಕು ಆಡಳಿತ, ಆರೋಗ್ಯಾಧಿಕಾರಿಗಳು ತಕ್ಷಣ ಅವರನ್ನು ಗುರುತಿಸಿ ಗಂಟಲ ದ್ರವ ಪರೀಕ್ಷೆ ಮಾಡಿಸಿ ಫಲಿತಾಂಶ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದುವರೆಗೆ ಒಟ್ಟು 26 ಮಂದಿ ಬಿಡುಗಡೆಗೊಂಡಿದ್ದು, 14 ಹಾಗೂ 28 ದಿನಗಳ ಕಾಲ ಕ್ವಾರಂಟೈನ್ ಮುಗಿಸಿದ್ದವರು ನೂರಕ್ಕೆ ನೂರರಷ್ಟು ಗುಣಮುಖರಾಗಿದ್ದಾರೆ. ಇದು ಕರ್ನಾಟಕವಷ್ಟೇ ಅಲ್ಲದೆ, ಭಾರತದಲ್ಲೇ ಇಷ್ಟು ಪ್ರಮಾಣದಲ್ಲಿ ಗುಣಮುಖರಾದವರು ಮಂಡ್ಯ ಜಿಲ್ಲೆಯವರಾಗಿರುವುದು ನಿಜಕ್ಕೂ ಹೆಮ್ಮೆ ಪಡುವಂತಾಗಿದೆ. ಇದಕ್ಕೆ ಆರೋಗ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸತತವಾಗಿ ತಮ್ಮ ಕುಟುಂಬ, ಪ್ರಾಣದ ಹಂಗನ್ನೂ ತೊರೆದು ಕೆಲಸ ಮಾಡುತ್ತಿರುವುದೇ ಸಾಕ್ಷಿಯಾಗಿದೆ.
ಜಿಲ್ಲೆಗೆ ಬರಲಿದ್ದಾರೆ ಸಾವಿರಾರು ಮಂದಿ; ಮಂಡ್ಯಕ್ಕೆ ಮುಂದಿರುವುದೇ ನಿಜವಾದ ಸವಾಲ್
ಜಿಲ್ಲಾಧಿಕಾರಿಯಿಂದ ಜನತೆಗೆ ಸಲಹೆ
ಈ ನಡುವೆ ಪ್ರತಿದಿನವೂ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು, ಕೊರೊನಾ ಸೋಂಕು ತಡೆಯುವಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಕ್ವಾರಂಟೈನ್ ನಲ್ಲಿರುವವರು ಅಧಿಕಾರಿಗಳಿಗೆ, ಸಿಬ್ಬಂದಿಗೆ ಕಿರುಕುಳ ನೀಡಬಾರದು. ಸೋಂಕು ಹರಡದಂತೆ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರು ಜಿಲ್ಲಾಡಳಿತ, ತಾಲೂಕು ಆಡಳಿತದೊಂದಿಗೆ ಸಹಕಾರ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು, ಆಗಾಗ್ಗೆ ಸ್ಯಾನಿಟೈಜರ್ ಬಳಸಬೇಕು ಎಂದು ಸಲಹೆ ನೀಡುತ್ತಲೇ ಇದ್ದಾರೆ.