ಮಂಡ್ಯ: ಕೆ.ಆರ್.ಪೇಟೆಯಲ್ಲಿ ತಂದೆಯನ್ನೇ ಕೊಂದ ಮಗ
ಮಂಡ್ಯ, ಜುಲೈ 24: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಜುಲೈ 23 ರಂದು ನಡೆದಿದೆ.
ಕೆ.ಆರ್.ಪೇಟೆಯಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಮಾದಾಪುರ ಗ್ರಾಮದ ಮರೀಗೌಡ ಅವರ ಪುತ್ರ ಬೊಮ್ಮೇಗೌಡ(54) ಮಗನಿಂದಲೇ ಕೊಲೆಯಾದ ದುರ್ದೈವಿ. ಇವರ ಪುತ್ರ ಮಂಜೇಗೌಡ(24) ಹತ್ಯೆ ಮಾಡಿದ ಆರೋಪಿ.
ಮದಾಪುರ ಗ್ರಾಮದಲ್ಲಿ ಜಮೀನು ಹೊಂದಿದ್ದು, ತೆಂಗಿನ ಕಾಯಿ ಕೀಳುವ ಸಂದರ್ಭ ತಂದೆ ಬೊಮ್ಮೇಗೌಡ ಮತ್ತು ಮಗ ಮಂಜೇಗೌಡನ ನಡುವೆ ಜಗಳ ಆರಂಭವಾಗಿದೆ. ಇದು ವಿಕೋಪಕ್ಕೆ ತೆರಳಿದ್ದು ಅದು ಕ್ರಮೇಣ ಆಸ್ತಿ ಹಂಚಿಕೆ ವಿಚಾರಕ್ಕೆ ತಿರುಗಿ ಆಸ್ತಿಯಲ್ಲಿ ಪಾಲುಕೊಡುವಂತೆ ಒತ್ತಾಯಿಸಿದ್ದು, ಇದು ವಿಕೋಪಕ್ಕೆ ತಿರುಗಿ ಕೊಡಲಿ ತಂದು ತಲೆ ಭಾಗಕ್ಕೆ ಹೊಡೆದಿದ್ದಾನೆ.
ಈ ವೇಳೆ ಬೊಮ್ಮೇಗೌಡ ಮಗನಿಂದ ತಪ್ಪಿಸಿಕೊಳ್ಳಲು ಪಕ್ಕದ ಜಮೀನಿಗೆ ಓಡಿದರೂ ಬಿಡದೆ ಮಗ ತಂದೆಯನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರ ಸಂಬಂಧಿ ಶಂಕರ್ ಅವರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ನಾಗಮಂಗಲ ಡಿವೈಎಸ್ ಪಿ ಚಂದ್ರಶೇಖರ್, ಸಿಪಿಐ ವೆಂಕಟೇಶಯ್ಯ, ಪಿಎಸ್ ಐ ಆರ್.ಸಿದ್ದರಾಜು ಭೇಟಿ ನೀಡಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.