ಮನ್ ಕೀ ಬಾತ್; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ
ಮಂಡ್ಯ, ಜೂನ್ 28 : ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮಳೆ ನೀರು ಸಂಗ್ರಹದ ಬಗ್ಗೆ ಮಾತನಾಡಿದ ಅವರು ಕರ್ನಾಟಕದ ಮಂಡ್ಯದ ಕಾಮೇಗೌಡರ ಕೆಲಸಗಳನ್ನು ಹೊಗಳಿದರು.
ಮಂಡ್ಯದ ಭಗೀರಥ ಎಂದೇ ಖ್ಯಾತಿ ಪಡೆದಿರುವ ಕಾಮೇಗೌಡರು ಮಳೆ ನೀರನ್ನು ಸಂಗ್ರಹ ಮಾಡಲು ಕೆರೆಗಳನ್ನು ನಿರ್ಮಿಸಿರುವುದಕ್ಕೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ಇಂದು ಸಾವಿರಾರು ಪ್ರಾಣಿ-ಪಕ್ಷಿಗಳಿಗೆ ಈ ಕೆರೆಗಳ ನೀರು ಆಧಾರವಾಗಿದೆ.
ಮಂಡ್ಯದ ಭಗೀರಥ ಕಾಮೇಗೌಡರ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿ
83 ವರ್ಷದ ಕಾಮೇಗೌಡರು ಪ್ರಶಸ್ತಿ, ಪ್ರಶಂಸೆಗಳನ್ನು ಮೆಚ್ಚಿಕೊಂಡು ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಮಾಡುತ್ತಿಲ್ಲ. ಸ್ವಂತ ಪರಿಶ್ರಮದಿಂದ 16 ಕೆರೆಗಳನ್ನು ನಿರ್ಮಾಣ ಮಾಡಿರುವ ಕಾಮೇಗೌಡರು, ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಮಂಡ್ಯದ ಕಾಮೇಗೌಡರಿಗೆ 'ಪ್ರಣಾಮ್' ಎಂದ ಮಾಜಿ ಕ್ರಿಕೆಟರ್ ಲಕ್ಷ್ಮಣ್
ಕಾಮೇಗೌಡರ ಪರಿಸರ ಸಂರಕ್ಷಣೆ ಕೆಲಸಗಳನ್ನು ನೋಡಿ ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿವೆ, ಸನ್ಮಾನಿಸಿವೆ. ಸನ್ಮಾನದಿಂದ ಬಂದ ಹಣವನ್ನು ಸಹ ಕಾಮೇಗೌಡರು ಕೆರೆಗಳಿಗಾಗಿ ವೆಚ್ಚ ಮಾಡುತ್ತಿದ್ದಾರೆ.
ನಿಗೂಢರೀತಿಯಲ್ಲಿ ಬಣ್ಣ ಬದಲಾಯಿಸಿ ಆತಂಕ ಮೂಡಿಸಿದ ಕೆರೆ
ಯಾರು ಈ ಕಾಮೇಗೌಡ?
ಕಾಮೇಗೌಡ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆ-ಕಾಲೇಜು ಮೆಟ್ಟಿಲು ಹತ್ತಿ ಪದವಿ ಪಡೆಯದ ಕಾಮೇಗೌಡರು ತಮ್ಮ ಪರಿಸರ ಕಾಳಜಿಯಿಂದ ದೇಶದ ಗಮನ ಸೆಳೆದಿದ್ದಾರೆ.
ಕೆರೆಗಳನ್ನು ನಿರ್ಮಿಸುವುದೇ ಕಾಯಕ
ಸುಮಾರು 12 ವರ್ಷಗಳ ಹಿಂದೆ ಕಾಮೇಗೌಡರು ಕುಂದೂರು ಬೆಟ್ಟಕ್ಕೆ ಹೋದಾಗ ವಿಪರೀತ ದಾಹವಾಗಿತ್ತು. ಬೆಟ್ಟದಲ್ಲಿ ಎಲ್ಲಿ ಹುಡುಕಿದರೂ ಹನಿ ನೀರು ಸಿಗಲಿಲ್ಲ. ದೂರದಲ್ಲಿದ್ದ ಮನೆಗೆ ಹೋಗಿ ನೀರು ಬೇಡಿ ಕುಡಿದರು. ಪ್ರಾಣಿಗಳ ಕಥೆ ಏನು? ಎಂದು ಚಿಂತಿಸಿದರು.
16 ಕೆರೆ ನಿರ್ಮಾಣ
ತಮ್ಮ ಊರಿನ ಸುತ್ತಮುತ್ತಲ ಗುಡ್ಡಗಳಲ್ಲಿ ಕಾಮೇಗೌಡರು ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿ ಎಂಬ ಆಶಯದಿಂದ 16 ಕೆರೆ ನಿರ್ಮಾಣ ಮಾಡಿದ್ದಾರೆ. ಮಳೆ ನೀರು ಇದರಲ್ಲಿ ತುಂಬಿ ಪ್ರಾಣಿಗಳಿಗೂ ನೀರು ಆಗುತ್ತದೆ. ಮಳೆ ನೀರು ಸಹ ಇಂಗುತ್ತದೆ.
ಜನರು ಹುಚ್ಚ ಎಂದಿದ್ದರು
ಕಾಮೇಗೌಡರು ಕೆರೆ ನಿರ್ಮಾಣ ಮಾಡುವೆ ಎಂದು ಗುದ್ದಲಿ ಹಿಡಿದು ಗುಡ್ಡ ಅಗೆಯುವಾಗ ಜನರು, ಸಂಬಂಧಿಕರು ಹುಚ್ಚ ಎಂದಿದ್ದರು. ಛಲ ಬಿಡಿದ ಗೌಡರು ಕಟ್ಟಿದ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ರಾಷ್ಟ್ರಮಟ್ಟದಲ್ಲಿ ಗೌಡರ ಕೆಲಸಗಳನ್ನು ಗುರುತಿಸಲಾಗುತ್ತಿದೆ.