ಅಮ್ಮನಿಗಾಗಿ ಕಾವೇರಿ ನದಿಗೆ BMW ಕಾರನ್ನೇ ತರ್ಪಣ ಬಿಟ್ಟ ಮಗ!
ಮಂಡ್ಯ, ಮೇ27: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿಯ ಮಡಿಲಲ್ಲೇ ಅದೆಷ್ಟೋ ಮಂದಿ ಪಿಂಡ ಪ್ರದಾನ ಮಾಡಿ ಹಿರಿಯರ ಆತ್ಮಕ್ಕೆ ಶಾಂತಿಯನ್ನು ಕೋರಿ ಆಶೀರ್ವಾದವನ್ನು ಪಡೆಯುತ್ತಾರೆ. ಕಾವೇರಿಯ ನದಿಯ ತಟದಲ್ಲೇ ನಿಮಿಷಾಂಭೆಯು ನೆಲೆ ನಿಂತಿದ್ದಾಳೆ. ಈ ನದಿಯಲ್ಲಿ ಜನರು ಬಟ್ಟೆ ಬಿಡುತ್ತಾರೆ, ಸತ್ತವರ ಬೂದಿ , ದೇವರ ಹರಿಕೆ, ಕಾಯಿ, ಪಿಂಡವನ್ನು ಪ್ರದಾನ ಮಾಡುತ್ತಾರೆ. ವಿಚಿತ್ರವೆನಂದರೇ ವ್ಯಕ್ತಿಯೊಬ್ಬ ಬಿಎಂಡ್ಲ್ಯೂ ಕಾರನ್ನೇ ನದಿಯಲ್ಲಿ ಬಿಟ್ಟಿದ್ದಾನೆ. ಅಚ್ಚರಿಯಾದರು ಇದು ಸತ್ಯ..
ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿಯಲ್ಲಿ ಐಷಾರಾಮಿ ಕಾರು ಕಾಣಿಸಿದೆ. ಕಾರೊಂದು ನದಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಶ್ರೀರಂಗ ಪಟ್ಟಣ ಪೊಲೀಸರು ಕಾರನ್ನು ನದಿಯಿಂದ ಹೊರ ತೆಗೆೆದು ಕಾರಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ಪರೀಕ್ಷಿಸಿದ್ದಾರೆ. ಆದರೆ ಕಾರಿನಲ್ಲಿಯಾರ ಶವ ಕೂಡ ಪತ್ತೆಯಾಗಿಲ್ಲ. ಯಾರೋ ಕದ್ದ ಕಾರನ್ನೋ ನೀರಿನಲ್ಲಿ ಬಿಟ್ಟು ಹೋಗಿರಬೇಕು ಎಂದು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ತಾಯಿಗೆ ಇಷ್ಟವಾಗಿದ್ದ ಕಾರು:
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ಎಂಬುವವರಿಗೆ ಬಿಎಂಡಬ್ಲ್ಯೂ ಕಾರು ಸೇರಿದ್ದಾಗಿತ್ತು. ರೂಪೇಶ್ನ ವಿಳಾಸ ಮತ್ತು ನಂಬರ್ ಪತ್ತೆ ಹಚ್ಚಿದ ಪೊಲೀಸರಿಗೆ ಅಚ್ಚರಿಯಾಗಿತ್ತು. ತನ್ನ ತಾಯಿಯ ಸಾವನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ತನ್ನ ತಾಯಿ ಬಹುವಾಗಿ ಇಷ್ಟಪಡುತ್ತಿದ್ದ ಕಾರನ್ನು ನೀರಿನಲ್ಲಿ ಬಿಟ್ಟು ಅಮ್ಮ ಆತ್ಮಕ್ಕೆ ಶಾಂತಿಕೊರಿದ್ದನಂತೆ ರೂಪೇಶ್.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೂಪೇಶ್
ಬಿಎಂಡಬ್ಲ್ಯೂ ಕಾರಿನ ಮಾಲೀಕ ರೂಪೇಶ್ ನನ್ನು ಪೊಲೀಸರು ಪ್ರಶ್ನೆ ಮಾಡಿದಾಗ ಬೇರೆೆಬೇರೆ ಉತ್ತರವನ್ನು ನೀಡುತ್ತಿದ್ದ. ಗೊಂದಲಕರ ಹೇಳಿಕೆಯನ್ನು ನೀಡುತ್ತಿದ್ದ. ಶ್ರೀರಂಗ ಪಟ್ಟಣ ಪೊಲೀಸರು ರೂಪೇಶ್ ಚಲನವಲನ ಮಾತನ್ನು ಗಮನಿಸಿ ಆತ ಮಾನಸಿಕ ಖಿನ್ನತೆಗೆ ಒಳಗಾಗಿರುವುದನ್ನು ಖಚಿತಪಡಿಸಿಕೊಂಡು ರೂಪೇಶ್ ಕುಟುಂಬಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಹರ್ಯಾಣ ರಿಜಿಸ್ಟ್ರೇಷನ್ ಹೊಂದಿರುವ ಕಾರು.
ಬಿಎಂಡಬ್ಲ್ಯೂ ಕಾರು ಹರ್ಯಾಣ ರಿಜಿಸ್ಟ್ರೇಷನ್ ಹೊಂದಿದ್ದು, ಕಾರಿನ ದಾಖಲೆಯನ್ನು ಒದಗಿಸುವಂತೆ ಕುಟುಂಬಸ್ಥರಿಗೆ ಶ್ರೀರಂಗಪಟ್ಟಣ ಪೊಲೀಸರು ಸೂಚಿಸಿದ್ದಾರೆ. ಸದ್ಯ ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರನ್ನು ಕಾವೇರಿ ನದಿಯಲ್ಲಿ ಬಿಡಲು ತಾಯಿ ಸಾವಿನ ಮಾನಸಿಕ ಖಿನ್ನತೆಯೇ ಕಾರಣವೇ..? ಅಥವಾ ಬೇರೆ ಕಾರಣದಿಂದ ಕಾರನ್ನು ನದಿಯಲ್ಲಿ ಬಿಡಲಾಗಿದೆಯೇ ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಲಿದೆ.