ಮಂಡ್ಯ; ಹಾವು, ಚೇಳುಗಳಿಗೆ ಮನೆಯಾದ ಮಳವಳ್ಳಿ ದೊಡ್ಡಕೆರೆ ಉದ್ಯಾನ
ಮಂಡ್ಯ, ಆಗಸ್ಟ್, 04: ಮಳವಳ್ಳಿ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ದೊಡ್ಡ ಕೆರೆಯ ಉದ್ಯಾನವನ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಅವನತಿಯತ್ತ ಸಾಗಿದೆ. ಉದ್ಯಾನದಲ್ಲಿ ಗಿಡ, ಗಂಟಿಗಳು ಬೆಳೆದಿದ್ದು, ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ಪಿ. ಎಂ. ನರೇಂದ್ರಸ್ವಾಮಿ ಪ್ರಯತ್ನದಿಂದ ದೊಡ್ಡ ಕೆರೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶದಿಂದ 4.5 ಕೋಟಿ ರೂಪಾಯಿ ವೆಚ್ಚ ಮಾಡಿ ವಿವಿಧ ಕಾಮಗಾರಿ ಮಾಡಲಾಗಿತ್ತು.
ಭಾರಿ ಮಳೆಗೆ ನಲುಗಿದ ಮಂಡ್ಯ: ಬೀಡಿ ಕಾರ್ಮಿಕರು ಅತಂತ್ರ
ಮದ್ದೂರಿನಿಂದ ಮಳವಳ್ಳಿಗೆ ಪ್ರವೇಶಿಸುವ ಮುನ್ನ ಬಲಗಡೆಗೆ ಕಾಣುವ ಸುಂದರ ತಾಣವೇ ದೊಡ್ಡಕೆರೆ. ಅಲ್ಲಿ ನಿರ್ಮಿಸಿರುವ ಉದ್ಯಾನ, ಮಧ್ಯಭಾಗದಲ್ಲಿ ನಿರ್ಮಿಸಿರುವ ದ್ವೀಪದ ವಿಶಾಲವಾದ ಪ್ರದೇಶ ನೋಡುಗರ ಗಮನವನ್ನು ತನ್ನತ್ತ ಸೆಳೆಯುತ್ತದೆ.
ಪ್ರತಿನಿತ್ಯ ಬೆಳಗ್ಗೆ ನೂರಾರು ವೃದ್ಧರು, ಮಹಿಳೆಯರು ಇಲ್ಲಿಗೆ ವಾಯು ವಿಹಾರಕ್ಕೆ ಬರುತ್ತಾರೆ. ಇನ್ನು ವಾರದ ಕೊನೆಯಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರು ಇಲ್ಲಿಗೆ ಬರುತ್ತಾರೆ. ಹೊರಗಡೆಯಿಂದ ಬರುವ ಪ್ರವಾಸಿಗರು ಕೆಲ ಕಾಲ ದೊಡ್ಡಕೆರೆ ಉದ್ಯಾನದ ಸುಂದರ ದೃಶ್ಯವನ್ನು ಸವಿದು ಹೋಗುತ್ತಿದ್ದರು. ದಿನ ಕಳೆದಂತೆ ನಿರ್ವಹಣೆ ಕೊರತೆಯಿಂದ ಈ ಉದ್ಯಾನ ಸೌಂದರ್ಯ ಕಳೆಗುಂದುತ್ತಿದೆ.
ಉದ್ಯಾನದ ವಾಯು ವಿಹಾರದ ರಸ್ತೆಯ ಎರಡು ಬದಿಯಲ್ಲೂ ಗಿಡ, ಗಂಟಿಗಳು ಬೆಳೆದು ಕಸದಂತೆ ರಾಶಿಯಾಗಿ ಅಡ್ಡಲಾಗಿವೆ. ಅಕ್ಕಪಕ್ಕದಲ್ಲಿರುವ ವಿಭಿನ್ನವಾದ ಹೂವಿನ ಗಿಡಗಳು ನಿರ್ವಹಣೆ ಕೊರತೆಯಿಂದ ನಶಿಸಿ ಹೋಗುತ್ತಿವೆ. ವಾಯು ವಿಹಾರಿಗಳು ಕೂರಲು ನಿರ್ಮಿಸಿರುವ ಅಸನಗಳು ಕಸ ಕಡ್ಡಿ, ಗಿಡ ಗಂಟಿಗಳಿಂದ ಮುಚ್ಚಿಹೋಗಿವೆ. ಉದ್ಯಾನ ನಿರ್ವಹಣೆಗೆ ಅಳವಡಿಸಿದ ಮೋಟಾರ್ ಪಂಪ್ಗಳು ಕೂಡ ತುಕ್ಕು ಹಿಡಿಯುತ್ತಿವೆ.
ಮುರಿದುಬಿದ್ದಿರುವ ಉದ್ಯಾನದ ಪಾರ್ಕಿಂಗ್ ಟೈಲ್ಸ್ಗಳು
ವಾಯು ವಿಹಾರಕ್ಕೆ ಹಾಕಿದ್ದ ಪಾರ್ಕಿಂಗ್ ಟೈಲ್ಸ್ಗಳು ಅಲ್ಲಲ್ಲಿ ಕಿತ್ತು ಹೋಗಿವೆ. ದಟ್ಟನೆಯ ಗಿಡಗಳು ಬೆಳೆದುಕೊಂಡಿವೆ. ಇದಲ್ಲದೇ ಸುತ್ತಲಿನ ತಂತಿ ಬೇಲಿಯೂ ಸಹ ಅಲ್ಲಲ್ಲಿ ಮುರಿದು ಕಳಚಿಕೊಂಡಿದ್ದು, ಕಳ್ಳರಿಗೆ ದಾರಿ ಮಾಡಿಕೊಟ್ಟಂತಿದೆ. ಗಿಡಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿರುವ ಕಾರಣ ಉದ್ಯಾನ ಹಾವು, ಚೇಳುಗಳ ವಾಸ ಸ್ಥಾನವಾಗಿದೆ. ಇದರಿಂದ ವಾಯುವಿಹಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತಿದೆ ಎಂಬುದಕ್ಕೆ ಈ ಉದ್ಯಾನವನದ ಅವನತಿ ಪ್ರಮುಖ ಉದಾಹರಣೆಯಾಗಿದೆ.
ದೊಡ್ಡಕೆರೆ ಉದ್ಯಾನ ಉಳಿವಿಗೆ ಪಟ್ಟು
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ವಹಣೆ ಮಾಡುವುದಕ್ಕೆ ಆಗುವುದಿಲ್ಲ ಎಂದರೆ ಕೂಡಲೇ ಖಾಸಗಿ ಸಂಘ ಸಂಸ್ಥೆಗೆ ಅಥವಾ ಪುರಸಭೆಗೆ ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಅಲ್ಲಿನ ಸ್ಥಳೀಯರ ಒತ್ತಾಯ. ಇನ್ನಾದರೂ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಜಿಲ್ಲೆಗೆ ಅಪಾರ ಕೂಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ರಂತಹ ಮಹನೀಯರ ಹೆಸರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಉದ್ಯಾನಕ್ಕೆ ಮರುಜೀವ ನೀಡಿ ಎಂದು ಒತ್ತಾಯ
"ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸಿ ಸಾರ್ವಜನಿಕರಿಗಾಗಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ದೊಡ್ಡಕೆರೆ ಉದ್ಯಾನವನ್ನು ಅಭಿವೃದ್ಧಿಪಡಿಸಿತ್ತು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನ ಹಾಳಾಗುತ್ತಿರುವುದು ಶೋಚನಿಯ ಸಂಗತಿಯಾಗಿದೆ. ಉದ್ಯಾನಕ್ಕೆ ಮರುಜೀವ ನೀಡಿ ವಾಯುವಿಹಾರಿಗಳಿಗೆ ಅನೂಕೂಲ ಮಾಡಿಕೊಡಿ. ಇಲ್ಲದಿದ್ದರೆ ಪ್ರತಿಭಟನೆ ನಡೆಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಹಿಸಾಸಕ್ತಿ ಮೊಕದ್ದಮೆ ದಾಖಲಿಸಬೇಕಾಗುತ್ತದೆ" ಎಂದು ವಕೀಲ ದ್ವಾರಕಾನಾಥ್ ಎಚ್ಚರಿಕೆ ನೀಡಿದರು.
"ಉದ್ಯಾನವನ್ನು ಮಾಜಿ ಸಚಿವ ಪಿ. ಎಂ. ನರೇಂದ್ರಸ್ವಾಮಿ ಅಧಿಕಾರದ ಅವಧಿಯಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಉದ್ಘಾಟಿಸಿ, ಲೋಕಾರ್ಪಣೆ ಮಾಡಿದ್ದರು. ಆರಂಭದಲ್ಲಿ ಇಬ್ಬರು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಂಡು ಇದನ್ನು ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಬರಲಾಗಿತ್ತು. ದಿನಕಳೆದಂತೆ ಗುತ್ತಿಗೆ ಆಧಾರಿತ ನೌಕರರಿಗೆ ಸಂಬಳ ಕೊಡದೇ ಅವರನ್ನು ಹೊರಗಟ್ಟಿದ ನಂತರ ಉದ್ಯಾನ ನಿರ್ವಹಣೆ ಅವನತಿ ಹಂತಕ್ಕೆ ತಲುಪಿದೆ" ಎಂದು ಸ್ಥಳೀಯರಾದ ಶಂಭುಗೌಡ ತಿಳಿಸಿದರು.
ಇನ್ನಾದರೂ ದೊಡ್ಡಕೆರೆ ಉದ್ಯಾನ ನಿರ್ವಹಣೆ ಆಗುತ್ತಾ?
"ಉದ್ಯಾನ ನಿರ್ವಹಣೆಗೆ ನಮ್ಮ ಇಲಾಖೆಗೆ ಯಾವುದೇ ಅನುದಾನ ಬರುವುದಿಲ್ಲ. ಆದ್ದರಿಂದ ಇದನ್ನು ಪುರಸಭೆ ವಹಿಸಿಕೊಂಡು ನಿರ್ವಹಣೆ ಮಾಡಬೇಕಾಗುತ್ತದೆ. ಹಿಂದೆ ಪುರಸಭೆಗೆ ಪತ್ರ ಬರೆಯಲಾಗಿದೆ. ಆದರೆ ಅವರು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಮತ್ತೆ ಉಪ ವಿಭಾಗಾಧಿಕಾರಿಗಳಿಗೆ ಮತ್ತು ಪುರಸಭೆಗೆ ಪತ್ರ ಬರೆಯುತ್ತೇನೆ. ಅವರು ನಿರ್ವಹಣೆ ಮಾಡಲು ಒಪ್ಪಿದರೆ ನಾವು ಅದನ್ನು ಹಸ್ತಾಂತರ ಮಾಡಲು ಸಿದ್ದರಿದ್ದೇವೆ" ಎಂದು ಕಾರ್ಯಪಾಲಕ ಅಭಿಯಂತರರಾದ ನಟೇಶ್ ತಿಳಿಸಿದರು
Recommended Video