ಇಂದಿನಿಂದ ಮಂಡ್ಯದಲ್ಲಿ ಫಲಫುಷ್ಪಗಳ ಮಾಘ ಸಂಭ್ರಮ
ಮಂಡ್ಯ, ಜನವರಿ 26: ಮಾಘ ಸಂಭ್ರಮಕ್ಕೆ ಮಂಡ್ಯ ತಯಾರಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಇಂದಿನಿಂದ ಫೆಬ್ರುವರಿ 2ರವರೆಗೆ ಫಲಪುಷ್ಪ ಪ್ರದರ್ಶನದೊಂದಿಗೆ ಮಾಘ ಸಂಭ್ರಮ ನಡೆಯುತ್ತಿದೆ.
ನಗರದ ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ವಿವಿಧ ಬಗೆಯ ಹೂಗಳಿಂದ ಕಲಾಕೃತಿಗಳು, ವಿವಿಧ ತರಕಾರಿಗಳು, ಹೂಕುಂಡಗಳನ್ನು ಜೋಡಿಸಿಡಲಾಗಿದೆ. ತರಕಾರಿಗಳನ್ನು ಬಳಸಿ ವಿವಿಧ ಕಲಾಕೃತಿಗಳ ಕೆತ್ತನೆಗಳು, ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮೇಳ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷತೆ ನಡೆಯಲಿದೆ.
ಹೂವಿನಿಂದ ಕೆಆರ್ ಎಸ್ ಮಾದರಿ
ಮೀನುಗಾರಿಕೆ ಇಲಾಖೆಯಿಂದ ವಿವಿಧ ಆಲಂಕಾರಿಕ ಮೀನುಗಳ ಪ್ರದರ್ಶನ, ಪಶುಪಾಲನಾ ಇಲಾಖೆಯಿಂದ ಬನ್ನೂರು ಕುರಿಗಳ ಪ್ರದರ್ಶನ, ಜಿಲ್ಲಾ ವ್ಯಾಪ್ತಿಯ ತಾಲೂಕುಗಳಲ್ಲಿ ರೈತರು ಬೆಳೆದಿರುವ ವಿವಿಧ ಹಣ್ಣು, ತರಕಾರಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲಾಗುವುದು. ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಕೆಆರ್ ಎಸ್ ಡ್ಯಾಂ, ಮೈಸೂರು ಅರಮನೆ, ಚಂದ್ರಯಾನ, ಡೊನಾಲ್ಡ್ ಡಕ್ ಮಾದರಿಗಳನ್ನು ರೂಪಿಸಲಾಗಿದೆ.
'ಲಾಲ್ಬಾಗ್ನಲ್ಲಿ ಕಣ್ಮನ ಸೆಳೆಯುತ್ತಿದೆ ವಿವೇಕ ಪುಷ್ಪ ಪ್ರದರ್ಶನ'
ಹೂವಿನಲ್ಲಿ ಅರಳಿದ ಮನಸೆಳೆಯುವ ಕಲಾಕೃತಿಗಳು
ಹೂವಿನಿಂದ ಅಲಂಕೃತಗೊಂಡಿರುವ ಚಿಟ್ಟೆ, ಆನೆ, ಗಿಟಾರ್, ತಬಲ, ಹೂವಿನ ಕುಂಡ, ಹೂವಿನ ಪಿರಮಿಡ್ಗಳು, ವಿವಿಧ ಬಗೆಯ ತರಕಾರಿ, ಹೂ ಗಿಡಗಳ ಪ್ರದರ್ಶನ, ಊಟಿ ತೋಟಗಾರಿಕೆ ಇಲಾಖೆಯಿಂದ ಊಟಿ ಹೂ ಪ್ರದರ್ಶನ, ತರಕಾರಿ ಕೆತ್ತನೆ, ಡಾ. ಎಂ.ಎಚ್. ಮರೀಗೌಡ ಹಾಗೂ ತಾಯಿ ಮಗುವಿನ ಕಲಾಕೃತಿ, ಯೋಗ ನರಸಿಂಹಸ್ವಾಮಿಯ ಮರಳು ಕಲಾಕೃತಿ ರಚನೆ, ತರಕಾರಿ ಕೆತ್ತನೆ, ಬೊನ್ಸಾಯ್ ಪ್ರದರ್ಶನ, ಇಕೆಬನಾ ಪ್ರದಶನ, ಟೋಪಿಯರಿ ಪ್ರದರ್ಶನ, ಹ್ಯಾಂಗಿಂಗ್ ಬ್ಯಾಸ್ಕೆಟ್ಸ್ ಪ್ರದರ್ಶನ, ವರ್ಟಿಕಲ್ ಗಾರ್ಡನ್ ಪ್ರದರ್ಶನ, ಸಾವಯವ ಮೇಳ, ಮಾದರಿ ಕೈತೋಟ, ತೋಟಗಾರಿಕೆ ಇಲಾಖೆ ವತಿಯಿಂದ ಸಸ್ಯಸಂತೆ ಹಾಗೂ ವಿವಿಧ ಇಲಾಖೆಗಳಿಂದ ಮಳಿಗೆಗಳ ನಿರ್ಮಾಣ ಮಾಡಲಾಗುತ್ತಿದೆ.
ಪೌಷ್ಟಿಕಾಂಶ ಕೈ ತೋಟದ ಪರಿಕಲ್ಪನೆ
ಇದಲ್ಲದೆ ನಗರವಾಸಿ ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರು ತಮ್ಮ ಮನೆಯಂಗಳ ಅಥವಾ ಕೈ ತೋಟದ ಕಡಿಮೆ ಸ್ಥಳದಲ್ಲಿ ಕೆಲವು ಆಯ್ದ ತರಕಾರಿ ಗಿಡಗಳನ್ನು ಬೆಳೆದು ಉಪಯೋಗಿಸಲು ಪ್ರೋತ್ಸಾಹದ ನಿಟ್ಟಿನಲ್ಲಿ ವ್ಯವಸ್ಥಿತವಾದ ಮಾದರಿ ತರಕಾರಿ ಪೌಷ್ಟಿಕಾಂಶ ಕೈ ತೋಟವನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಪೂರಕ ಜ್ಞಾನವನ್ನು ನೀಡುವ ಪ್ರಾಯೋಗಿಕ ಪ್ರದರ್ಶನವೂ ಇರಲಿದೆ.
ಇನ್ನೇಕೆ ತಡ, ನಾಳೆಯೇ ಬನ್ನಿ ಮೈಸೂರಿನ ಮಾಗಿ ಉತ್ಸವಕ್ಕೆ...
ಸಾವಯವ, ಸಿರಿಧಾನ್ಯ ಮೇಳ
ಹೆಚ್ಚು ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಕೃಷಿ ಹಾಗೂ ಸಾವಯವ ಕೃಷಿಯ ಬಗ್ಗೆ ರೈತರಿಗೆ ಮತ್ತು ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಸಾವಯವ ಮತ್ತು ಸಿರಿಧಾನ್ಯಗಳ ಮೇಳ, ಜತೆಗೆ ತೋಟಗಾರಿಕೆ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರು ಮಾಡುವ ಆಹಾರ ಮತ್ತು ತಿನಿಸುಗಳನ್ನು ಸವಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಷ್ಟೇ ಅಲ್ಲದೆ ಪ್ರತಿ ದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಮನರಂಜನಾ ಕಾರ್ಯಕ್ರಮಗಳು ವೀಕ್ಷಕರ ಮನಸೆಳೆಯಲಿದೆ.