ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ, ದರ್ಶನ್ ಪ್ರಚಾರದ 'ಸಾರಥಿ'
Recommended Video
ಮಂಡ್ಯ, ಫೆಬ್ರವರಿ 04: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯಾವ ಪಕ್ಷದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಯಲ್ಲಿ ಈಗ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಅನಿವಾರ್ಯವಾಗಿ ಜೆಡಿಎಸ್ ಕಣದಿಂದ ಹಿಂದೆ ಸರಿಯುವ ಪರಿಸ್ಥಿತಿ ಉಂಟಾಗಿದೆ.
ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅವರು 'ಚುನಾವಣೆಗೆ ಸ್ಪರ್ಧಿಸಿದರೆ ಅದು ಮಂಡ್ಯದಿಂದ ಮಾತ್ರ' ಎಂದು ಘೋಷಿಸಿದ ಬಳಿಕ ಕ್ಷೇತ್ರದಲ್ಲಿ ಚಟುವಟಿಕೆ ಹೆಚ್ಚಾಗಿದೆ.
ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ಜೆಡಿಎಸ್ ನಿಂದ ಹಾಲಿ ಸಂಸದ ಶಿವರಾಮೇಗೌಡ ಅವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ಅವರನ್ನು ಕಣಕ್ಕಿಳಿಸುವ ಸುದ್ದಿಯೂ ಹರಿದಾಡುತ್ತಿದೆ. ಲಕ್ಷ್ಮಿ ಅಶ್ವಿನ್ ಗೌಡ ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸದ್ಯ ಜೆಡಿಎಸ್ ನಿಂದ ಯಾರು ಸ್ಪರ್ಧಿಸಿದರೂ ಸುಲಭವಾಗಿ ಗೆಲುವು ಸಾಧಿಸಬಲ್ಲರು ಎಂಬಂಥ ಪರಿಸ್ಥಿತಿ ಇದೆ. ಆದರೆ, ಇದು ಈ ಹಿಂದಿನಿಂದ ಕಾಂಗ್ರೆಸ್ ಅಧಿಪತ್ಯವಿದ್ದ ಕ್ಷೇತ್ರ ಹಾಗಾಗಿ, ಕಾಂಗ್ರೆಸ್ ತನ್ನ ಪ್ರತಿಷ್ಠೆಗಾಗಿ ಈ ಕ್ಷೇತ್ರಕ್ಕಾಗಿ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚು.
ದರ್ಶನ್ ತೂಗುದೀಪ ಬೆಂಬಲ ಸೂಚನೆ
ಈ ನಡುವೆ ಸುಮಲತಾ ಅಂಬರೀಶ್ ಅವರಿಗೆ ನಟ ದರ್ಶನ್ ತೂಗುದೀಪ ಅವರು ಬೆಂಬಲ ಸೂಚಿಸಿದ್ದು, ಈ ಕುರಿತಾಗಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಸುತ್ತೂರು ಜಾತ್ರೆಯಲ್ಲಿ ಸಿದ್ದರಾಮಯ್ಯ ಅವರ ಜತೆ ಕಾಣಿಸಿಕೊಂಡ ದರ್ಶನ್ ಅವರು ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ, ಚುನಾವಣೆ ಪ್ರಚಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಗೆಲುವು ಸಾಧಿಸುವಂತೆ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.
ಚುನಾವಣೆ 2018: 'ಅನುಕಂಪದ ಅಲೆ' ಎಂಬ ಥಿಯರಿ ಒಡೆದ ಮತದಾರ
ಮೈತ್ರಿ ಸರ್ಕಾರಕ್ಕೆ ಟಿಕೆಟ್ ಹಂಚಿಕೆ ಗೊಂದಲ
ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ಹಂಚಿಕೆ ಮಾಡುವುದೇ ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಕಾಂಗ್ರೆಸ್ಸಿಗರು ಸಿದ್ಧರಿಲ್ಲ. ಹಾಲಿ ಜೆಡಿಎಸ್ ಸಂಸದರೇ ಇರುವುದರಿಂದ ಈ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ವಾದ ಶುರುವಾಗಿದೆ. ಆದರೆ, ಯಾರೊಬ್ಬರೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲ. ಶಿವರಾಮೇಗೌಡರು ಮಾತ್ರ ಈ ಬಾರಿ ಸ್ಪರ್ಧಿಸಲು ಸಿದ್ದ ಎಂದಿದ್ದಾರೆ. ಆದರೆ, ಅವರ ಸ್ಪರ್ಧೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಕಡೆಯಿಂದ ಅಡ್ಡಿಯುಂಟಾಗುವ ಪರಿಸ್ಥಿತಿಯಿದೆ.
ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ?
ಅಭಿಮಾನಿಗಳ ಒತ್ತಡಕ್ಕೆ ಮಣಿದ ಸುಮಲತಾ
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಂಬರೀಶ್ ಅಭಿಮಾನಿಗಳು ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸುಮಲತಾ ಅಂಬರೀಶ್ ಅವರಿಗೆ ಮನವಿ ಮಾಡಿದ್ದಾರೆ. ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಸುಮಲತಾ ಅವರು ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಂಬರೀಷ್ ಅವರು ಬದುಕಿದ್ದಾಗಲೇ ಸುಮಲತಾರನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಯತ್ನಗಳು ನಡೆದಿತ್ತು. ಆದರೆ, ಅಂಬರೀಷ್ ಅವರು ಇದನ್ನು ಅಲ್ಲಗೆಳೆದಿದ್ದರು.
ಸಂಸತ್ನಲ್ಲಿ ಅಂಬರೀಶ್ಗೆ ಅವಮಾನ?: ಬುಧವಾರವೂ ಸಂತಾಪ ಸೂಚನೆಯಿಲ್ಲ
ಜೆಡಿಎಸ್ ಹತೋಟಿಯಲ್ಲಿರುವ ಮಂಡ್ಯ ಜಿಲ್ಲೆ
ಸದ್ಯ ಮಂಡ್ಯ ಜಿಲ್ಲೆ ಸಂಪೂರ್ಣ ಜೆಡಿಎಸ್ ಮಯವಾಗಿದೆ. ಏಳು ಶಾಸಕರು, ಒಬ್ಬ ಸಂಸದರು ಹೀಗೆ ಎಲ್ಲರೂ ಜೆಡಿಎಸ್ನವರೇ ಆಗಿದ್ದಾರೆ. ಇಲ್ಲಿ ಜೆಡಿಎಸ್ನಿಂದ ಯಾರೇ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಚಾರವಿದೆ. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನಿಂದ ದೂರ ಉಳಿದಿದ್ದ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ನಿರಾಕರಿಸಿದ್ದರು. ಅಂತಿಮವಾಗಿ ಗಾಣಿಗ ರವಿ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಅಂಬರೀಷ್ ಅವರೇ ಕಾರಣ ಎಂಬ ಸುದ್ದಿಯೂ ಹರಡಿತ್ತು. ಈಗ ಕ್ಷೇತ್ರದಲ್ಲಿ ಅಂಬರೀಷ್ ಕುಟುಂಬಸ್ಥರ ಪರ ಅಲೆ ಇದೆ. ಹೀಗಾಗಿ, ಜೆಡಿಎಸ್ ಕೂಡಾ ಕಣಕ್ಕಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ.