ಒಂದೇ ಪಕ್ಷದಲ್ಲಿ ಅಪ್ಪ, ಮಗ; ಬದಲಾಯಿತು ಮಂಡ್ಯ ರಾಜಕೀಯದ ಲೆಕ್ಕ!
ಮಂಡ್ಯ, ಸೆಪ್ಟೆಂಬರ್ 06; ಅಪ್ಪ ಮತ್ತು ಮಗ ಬೇರೆ ಬೇರೆ ರಾಜಕೀಯ ಪಕ್ಷದಲ್ಲಿದ್ದಾರೆ ಎಂಬ ಆರೋಪಕ್ಕೆ ತೆರೆ ಬಿದ್ದಿದೆ. ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಪುತ್ರ ಎಲ್. ಎಸ್. ಚೇತನ್ ಗೌಡ ಜೆಡಿಎಸ್ ಸೇರಲಿದ್ದಾರೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ರಾಜಕೀಯ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಇದೆ.
ಯುವ ಕಾಂಗ್ರೆಸ್ ಮುಖಂಡ, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಚೇತನ್ ಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ. ಇದರಿಂದಾಗಿ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಕೆಲವು ಬದಲಾವಣೆ ನಡೆಯಬಹುದು.
ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ ವಿಧಾನ ಪರಿಷತ್ ಸದಸ್ಯ!
ಪುತ್ರ ಪಕ್ಷ ಸೇರ್ಪಡೆ ಆಗುತ್ತಿರುವ ಕುರಿತು ಮಾತನಾಡಿರುವ ಎಲ್. ಆರ್. ಶಿವರಾಮೇಗೌಡ, "ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚೇತನ್ ರಾಜೀನಾಮೆ ನೀಡಿದ್ದಾನೆ. ಈಗಾಗಲೇ ಜೆಡಿಎಸ್ ಪಕ್ಷ ಸೇರ್ಪಡೆಗೆ ವರಿಷ್ಠರ ಸಮ್ಮತಿ ಸಿಕ್ಕಿದೆ. ಕೆಲವು ದಿನಗಳಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾನೆ" ಎಂದು ಹೇಳಿದ್ದಾರೆ.
ಜಿಟಿ ಹರೀಶ್ ಸ್ಪರ್ಧೆಗೆ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರೋಧ!
ವಿಧಾನಸಭೆ ಚುನಾವಣೆ ಕಣಕ್ಕಿಳಿದು ಸೋಲು ಕಂಡಿದ್ದ ಚೇತನ್ ಗೌಡ ಜಿಲ್ಲಾ ಪಂಚಾಯಿತಿ ಮೂಲಕ ಪುನಃ ರಾಜಕೀಯ ಆರಂಭಿಸಲು ತೀರ್ಮಾನಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಡುವ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಜಿಟಿಡಿ ಪಕ್ಷಕ್ಕೆ ಸ್ವಾಗತಿಸಿ ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್ ಮಾಜಿ ಶಾಸಕ!
ಪದ್ಮನಾಭನಗರದಲ್ಲಿ ಸೋಲು
ಕಾಂಗ್ರೆಸ್ ಪಕ್ಷದಲ್ಲಿದ್ದ ಎಲ್. ಎಸ್. ಚೇತನ್ ಗೌಡ 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 33,557 ಮತಗಳನ್ನು ಪಡೆದು ಬಿಜೆಪಿಯ ಆರ್. ಅಶೋಕ ವಿರುದ್ಧ ಸೋತಿದ್ದರು.
2018ರ ಚುನಾವಣೆಯಲ್ಲಿ ಎಲ್. ಎಸ್. ಚೇತನ್ ಗೌಡಗೆ ಟಿಕೆಟ್ ಸಿಕ್ಕಿರಲಿಲ್ಲ. ಕಾಂಗ್ರೆಸ್ನಿಂದ ಎಂ. ಶ್ರೀನಿವಾಸ್ ಕಣಕ್ಕಿಳಿದಿದ್ದರು. ಆರ್. ಅಶೋಕ ವಿರುದ್ಧ ಸೋಲು ಕಂಡಿದ್ದರು. ಈಗ ಎಲ್. ಎಸ್. ಚೇತನ್ ಗೌಡ ಕಾಂಗ್ರೆಸ್ ತೊರೆದಿದ್ದಾರೆ.
ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ
ಎಲ್. ಎಸ್. ಚೇತನ್ ಗೌಡ ಮಂಡ್ಯ ಜಿಲ್ಲೆಯ ನಾಗಮಂಗಲದ ಬಿಂಡಿಗನವಿಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. "ಕಾರ್ಯಕರ್ತರು, ಅಭಿಯಾನಿಗಳ ಒತ್ತಾಯದಂತೆ ಸ್ಪರ್ಧಿಸುತ್ತಿದ್ದಾರೆ" ಎಂದು ಎಲ್. ಆರ್. ಶಿವರಾಮೇಗೌಡ ಹೇಳಿದ್ದಾರೆ.
ಆದರೆ ಎಲ್. ಎಸ್. ಚೇತನ್ ಗೌಡ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರಕ್ಕೆ ಬಂದಿರುವುದು ಮಂಡ್ಯ ಜೆಡಿಎಸ್ನಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕಿದೆ. ಎಲ್. ಆರ್. ಶಿವರಾಮೇಗೌಡ ನಾಗಮಂಗಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಲ್. ಆರ್. ಶಿವರಾಮೇಗೌಡ ಹೇಳಿಕೆ
ನಾಗಮಂಗಲ ಕ್ಷೇತ್ರ ಸದ್ಯ ಜೆಡಿಎಸ್ ವಶದಲ್ಲಿಯೇ ಇದೆ, ಸುರೇಶ್ ಗೌಡ ಶಾಸಕರು. ಆದರೆ 2023ರಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಎಲ್. ಆರ್. ಶಿವರಾಮೇಗೌಡ ಬಯಸಿದ್ದಾರೆ. ಈ ಕುರಿತು ಈಗಾಗಲೇ ಅವರು ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಾರೆ.
"ನಾನು 9 ಎಲೆಕ್ಷನ್ ಎದುರಿಸಿ 4 ರಲ್ಲಿ ಗೆದ್ದಿದ್ದೇನೆ. ನಾನು ಜೆಡಿಎಸ್ನಲ್ಲಿಯೇ ಇದ್ದು, ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ. ಹಾಲಿ ಶಾಸಕ ಸುರೇಶ್ ಗೌಡರನ್ನು ಲೋಕಸಭೆಗೆ ಕಳಿಸೋಣ. ಅವರು ಚೆನ್ನಾಗಿ ಇಂಗ್ಲಿಶ್, ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡಗೆ ಟಿಕೆಟ್ ಎಂದು ದೇವೇಗೌಡರು, ಕುಮಾರಸ್ವಾಮಿ ಮಾತುಕೊಟ್ಟಿಲ್ಲ" ಎಂದು ಶಿವರಾಮೇಗೌಡ ಹೇಳಿದ್ದಾರೆ.
Recommended Video
ಎಲ್. ಎಸ್. ಚೇತನ್ ಗೌಡ ಪ್ರತಿಕ್ರಿಯೆ
ಜೆಡಿಎಸ್ ಸೇರುವ ಕುರಿತು ಪ್ರತಿಕ್ರಿಯೆ ನೀಡಿರುವ ಎಲ್. ಎಸ್. ಚೇತನ್ ಗೌಡ, "ತಂದೆ, ಮಗ ಬೇರೆ ಬೇರೆ ಪಕ್ಷ ಎಂಬ ಟೀಕೆಗಳಿದ್ದವು. ತಂದೆಯ ಮಾರ್ಗದರ್ಶನದಂತೆ ಜೆಡಿಎಸ್ ಸೇರಲು ತೀರ್ಮಾನಿಸಿದ್ದೇನೆ. ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ.
ಎಲ್. ಆರ್. ಶಿವರಾಮೇಗೌಡರು ಪುತ್ರನನ್ನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿ ನಾಗಮಂಗಲ ಕ್ಷೇತ್ರದ ಟಿಕೆಟ್ ಗಟ್ಟಿ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.