ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್ ಬೆಂಬಲ?
ಮಂಡ್ಯ, ಫೆಬ್ರವರಿ 23: ಮಂಡ್ಯ ರಾಜಕೀಯ ಮತ್ತೆ ಕಳೆಗಟ್ಟುತ್ತಿದೆ. ಸುಮಲತಾ ಅಂಬರೀಶ್ ಅವರು ರಾಜಕೀಯ ಪ್ರವೇಶದ ನಿರ್ಧಾರ ಮಾಡಂದಿನಿಂದಲೂ ರಾಜ್ಯದ ಚಿತ್ರ ಮಂಡ್ಯದ ಮೇಲೆ ನೆಟ್ಟಿದೆ.
ಸುಮಲತಾ ಅಂಬರೀಶ್ ಅವರಿಗೆ ಉತ್ತಮ ಜನಬೆಂಬಲ ದೊರಕುತ್ತದೆ. ಇದೇ ಅವರಿಗೆ ರಾಜಕೀಯಕ್ಕೆ ಬರಲು ಪ್ರೇರಣೆ, ಕಾಂಗ್ರೆಸ್ ಸಹ ಸುಮಲತಾ ಅವರ ರಾಜಕೀಯ ಪ್ರವೇಶವನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದೆ, ಆದರೆ ಜೆಡಿಎಸ್ಗೆ ಮಾತ್ರ ಬಿಸಿ ನೀರು ಮೈಮೇಲೆ ಸುರಿದಂತೆ ಭಾಸವಾಗಿದೆ.
ಹೌದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಕುಮಾರಸ್ವಾಮಿ ಅವರ ಮಹದಾಸೆಯಾಗಿತ್ತು. ಆದರೆ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶ ನಿಖಿಲ್ ಅವರ ಹಾದಿಗೆ ಮುಳ್ಳಾಗಿದೆ. ಇದು ಕುಮಾರಸ್ವಾಮಿ ಅವರಿಗೆ ಸಿಟ್ಟು ತರಿಸಿದೆ.
ಸುಮಲತಾ ಅಂಬರೀಶ್, ಸಿದ್ದರಾಮಯ್ಯ ಭೇಟಿ: ಮಂಡ್ಯ ಟಿಕೆಟ್ ಚರ್ಚೆ
ಅಂಬರೀಶ್ ಅವರ ಅಂತ್ಯಸಂಸ್ಕಾರದ ವೇಳೆ ತಾವೇ ಮುಂದೆನಿಂತು ಸಹೋದರನಂತೆ ಕಾರ್ಯನಿರ್ವಹಿಸಿದ್ದ, ಸುಮಲತಾ ಅವರಿಗೆ ಅಭಯ ನೀಡಿದ್ದ ಕುಮಾರಸ್ವಾಮಿ ಅವರು ಈಗ ಹಠಾತ್ತನೆ ಸುಮಲತಾ ವಿರುದ್ಧ ಗರಂ ಆಗಿದ್ದಾರೆ. ಮಗನ ಹಾದಿಗೆ ಅಡ್ಡಗಾಲಾಗಿದ್ದೇ ಇದಕ್ಕೆ ಕಾರಣ.
ಸುಮಲತಾ-ಸಿದ್ದರಾಮಯ್ಯ ಭೇಟಿ
ಸುಮಲತಾ ಅವರು ಮೊನ್ನೆಯಷ್ಟೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ಗೆ ಉಳಿಸಿಕೊಳ್ಳಬೇಕು, ಹಾಗೂ ಆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಮಂಡ್ಯ ಜನರ, ಅಂಬಿ ಅಭಿಮಾನಿಗಳ ಒತ್ತಾಸೆಯಂತೆ ನನಗೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮಗನ ರಾಜಕೀಯ ಪ್ರವೇಶಕ್ಕೆ ತೊಡಕಾದ ಸುಮಲತಾ ವಿರುದ್ಧ ಎಚ್ಡಿಕೆ ಗರಂ
ಸುಮಲತಾಗೆ ಸಿದ್ದರಾಮಯ್ಯ ಬೆಂಬಲ
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಸಹ ಸುಮಲತಾ ಅವರ ರಾಜಕೀಯ ಪ್ರವೇಶದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಹಾಲಿ ಇರುವ ಸಂಸದರ ಕ್ಷೇತ್ರದಲ್ಲಿ ಬದಲಾವಣೆ ಇಲ್ಲ ಎಂಬ ಕಾಂಗ್ರೆಸ್ನ ಮೈತ್ರಿ ಸೂತ್ರಗದನ್ವಯ ಮಂಡ್ಯ ಕ್ಷೇತ್ರವು ಕಾಂಗ್ರೆಸ್ ಸಿಗುವುದಿಲ್ಲ ಎನ್ನಲಾಗುತ್ತಿದೆ. ಇದು ಕಾಂಗ್ರೆಸ್ ನಾಯಕರನ್ನು ಪೀಕಲಾಟಕ್ಕೆ ತಳ್ಳಿದೆ.
ಸುಮಲತಾ ಅಂಬರೀಶ್ ಪರ ರೈತಸಂಘ ನಿಲ್ಲುತ್ತಾ?
ಸುಮಲತಾ ಪಕ್ಷೇತರವಾಗಿ ಸ್ಪರ್ಧೆ?
ಹಾಗೊಂದು ವೇಳೆ ಮಂಡ್ಯ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿಲ್ಲವೆಂದಾದರೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೂ ಮಾಹಿತಿ ನೀಡಿದ್ದಾರೆ. ಹಾಗೊಂದು ವೇಳೆ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದರೂ ಸಹ ಕಾಂಗ್ರೆಸ್ ಅವರಿಗೆ ಪರೋಕ್ಷ ಬೆಂಬಲ ನೀಡುತ್ತದೆ ಎಂದು ಮೂಲಗಳು ಹೇಳುತ್ತಿವೆ.
ಮಂಡ್ಯ ಉಳಿಸಿಕೊಳ್ಳಲು ದಾಳ ಉರುಳಿಸಿದ ದೇವೇಗೌಡರು!
ಬಿಜೆಪಿಯಿಂದಲೂ ಆಫರ್
ಸುಮಲತಾ ಅವರಿಗೆ ಬಿಜೆಪಿಯಿಂದಲೂ ಆಫರ್ ಬಂದಿದೆ ಎನ್ನಲಾಗಿದೆ, ಆದರೆ ಬಿಜೆಪಿಯಿಂದ ಸ್ಪರ್ಧಿಸಿದರೆ ಕಾಂಗ್ರೆಸ್ನ ಬೆಂಬಲ ಸಿಗದು ಎಂಬ ಅಳುಕು ಸುಮಲತಾ ಅವರಿಗೆ ಕಾಡುತ್ತಿದೆ. ಅಲ್ಲದೆ ಮಂಡ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಇಲ್ಲ, ಹಾಗಾಗಿ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ನಿಖಿಲ್ಗೆ ಬೇರೆ ಲೋಕಸಭಾ ಕ್ಷೇತ್ರ?
ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರುಗಳು ಗಂಭೀರ ಪ್ರಯತ್ನ ಮಾಡುವರಿದ್ದಾರೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಥವಾ ಬೇರೆ ಇನ್ನಾವುದೇ ಲೋಕಸಭಾ ಕ್ಷೇತ್ರವನ್ನು ಮಂಡ್ಯ ಬದಲಿಗೆ ಬಿಟ್ಟುಕೊಡುವ ಮಾತುಕತೆ ಸಹ ನಡೆಯಲಿದೆ.