ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?
Recommended Video
ಸುಮಲತಾ ಅಂಬರೀಶ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಅವರು ಈ ನಿರ್ಧಾರ ಘೋಷಣೆ ಮಾಡುವ ಮುಂಚಿನವರೆಗೆ ಜೆಡಿಎಸ್ ಪಾಲಿಗೆ ಮಂಡ್ಯದಲ್ಲಿ ಕೇಕ್ ವಾಕ್ ಅಂತಲೇ ಭಾವಿಸಲಾಗಿತ್ತು. ಆದರೆ ಯಾವಾಗ ತಮ್ಮ ಸ್ಪರ್ಧೆಯನ್ನು ಖಚಿತ ಪಡಿಸಿದರೋ ಆಗಿನಿಂದ ಸನ್ನಿವೇಶ ವಿಭಿನ್ನವಾಯಿತು.
ಕಾಂಗ್ರೆಸ್ ಜತೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದು ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಈಗಾಗಲೇ ಘೋಷಿಸಿಯಾಗಿದೆ. ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆಯೇ ನೇರವಾದ ಸ್ಪರ್ಧೆ ಇರುವಂತೆ ಗೋಚರಿಸುತ್ತಿದೆ.
ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?
ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಮಂಡ್ಯ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಂಬುವವರನ್ನು ಅಖಾಡಕ್ಕೆ ಇಳಿಸಿದ್ದ ಬಿಜೆಪಿಯು ಕಾಂಗ್ರೆಸ್ ಬೆಂಬಲದ ಜತೆಗೆ ಸ್ಪರ್ಧೆ ಮಾಡಿದ್ದ ಜೆಡಿಎಸ್ ನ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಎರಡು ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು.
ಆದರೆ, ಇಂದಿನ ಸನ್ನಿವೇಶದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಹಾಗೂ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಅವರ ಬಲ ಹಾಗೂ ದೌರ್ಬಲ್ಯಗಳು ಏನು ಎಂಬುದರ ಪಟ್ಟಿ ಇಲ್ಲಿದೆ.
ಸುಮಲತಾ ಅವರ ಪಾಲಿನ ಬಲ
* ಮಂಡ್ಯದೊಂದಿಗೆ ಪತಿ ಅಂಬರೀಶ್ ಗೆ ಗಾಢ ಬಾಂಧವ್ಯ ಇತ್ತು. ಆ ಕ್ಷೇತ್ರದಿಂದಲೇ ಸಂಸದರಾಗಿ, ಶಾಸಕರಾಗಿ ಸೇವೆ ಸಲ್ಲಿಸಿರುವ ಅಂಬರೀಶ್ ಬಗ್ಗೆ ಜಿಲ್ಲೆ ಜನರಿಗೆ ಅಪಾರವಾದ ಅಭಿಮಾನ ಇದೆ. ಅಂಬರೀಶ್ ಆವರ ನಿಧನದ ನಂತರ ಸ್ಪರ್ಧೆ ಮಾಡುತ್ತಿರುವುದರಿಂದ ಸುಮಲತಾ ಅವರಿಗೆ ಜನರ ಅನುಕಂಪ ದೊರೆಯುವ ಸಾಧ್ಯತೆ ಇದೆ.
* ಅಂಬರೀಶ್ ಅವರು ಪ್ರತಿನಿಧಿಸುತ್ತಿದ್ದ ಪಕ್ಷ ಕಾಂಗ್ರೆಸ್. ಈ ಬಾರಿ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕುತ್ತಿಲ್ಲ. ಏಕೆಂದರೆ, ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಈ ಬಗ್ಗೆ ಅಸಮಾಧಾನ ಇರುವ ಕೈ ಪಕ್ಷದ ನಿಷ್ಠರು ಸುಮಲತಾ ಅವರ ಪರವಾಗಿ ಕೆಲಸ ಮಾಡುವ, ಮತ ಹಾಕುವ ಸಾಧ್ಯತೆ ಇದೆ.
* ಇನ್ನು ಬಿಜೆಪಿಯು ಸುಮಲತಾ ಅವರನ್ನು ತನ್ನ ಪಕ್ಷಕ್ಕೆ ಆಹ್ವಾನಿಸಿತ್ತು. ಅದಕ್ಕೆ ಅವರು ಒಪ್ಪಲಿಲ್ಲ. ಈಗಾಗಲೇ ಬಿಜೆಪಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಸುಮಲತಾಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಬೆಂಬಲ ನೀಡಬಹುದು.
* ಚಿತ್ರರಂಗದ ನಟರು ಹಾಗೂ ಮಂಡ್ಯ ಜಿಲ್ಲೆಯ ಜತೆಗೆ ಉತ್ತಮ ನಂಟು ಹಾಗೂ ಪ್ರಭಾವ ಹೊಂದಿರುವ ದರ್ಶನ್ ಮತ್ತು ಯಶ್ ಬೆಂಬಲ ಘೋಷಿಸಿದ್ದಾರೆ. ತಾವೇ ಮುಂದೆ ನಿಂತು ಪ್ರಚಾರ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಸ್ವತಃ ಸುಮಲತಾ ಅವರಿಗೆ ಇರುವ ತಾರಾ ವರ್ಚಸ್ಸಿನ ಜತೆಗೆ ದರ್ಶನ್, ಯಶ್ ರ ವರ್ಚಸ್ಸು ಸೇರಿ ಸಹಾಯ ಆಗಬಹುದು.
* ಸಚಿವರಾದ ಎಚ್.ಡಿ.ರೇವಣ್ಣ, ಡಿ.ಸಿ.ತಮ್ಮಣ್ಣ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಮಲತಾ ಸ್ಪರ್ಧೆ ಬಗ್ಗೆ ನೀಡಿದ ವೈಯಕ್ತಿಕ ಟೀಕೆ ಹೇಳಿಕೆಗಳು ಮತಗಳಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ.
ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್ ಹಾದಿ ಸುಲಭವಲ್ಲ!
ಸುಮಲತಾ ಅವರ ಪಾಲಿನ ದೌರ್ಬಲ್ಯ
* ಅಂಬರೀಶ್ ಅವರು ತಾವು ಬದುಕಿದ್ದಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿ, ನನ್ನ ತಲೆಗೆ ರಾಜಕಾರಣ ಕೊನೆಯಾಗುತ್ತದೆ. ನನ್ನ ಕುಟುಂಬದಿಂದ ಬೇರೆ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರು. ಅಂಬರೀಶ್ ಅವರ ಇಚ್ಛೆಗೆ ವಿರುದ್ಧವಾಗಿ ಸುಮಲತಾ ನಡೆದುಕೊಳ್ಳುತ್ತಿದ್ದಾರೆ ಎಂಬ ಅಂಶ ಮುನ್ನೆಲೆಗೆ ಬರಬಹುದು.
* ಸುಮಲತಾ ಅವರಿಗೆ ತಮ್ಮ ಪ್ರಬಲ ಪ್ರತಿಸ್ಪರ್ಧಿ, ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಇರುವಂತೆ ಸಂಘಟನೆಯ, ಕಾರ್ಯಕರ್ತರ ಪ್ರಬಲ ಪಡೆ ಇಲ್ಲ. ಮಂಡ್ಯದಲ್ಲಿ ಜೆಡಿಎಸ್ ಗೆ ಪ್ರಬಲ ಕಾರ್ಯಕರ್ತರ ಬೆಂಬಲ ಇದ್ದು, ಅದರ ಜತೆಗೆ ಕಾಂಗ್ರೆಸ್ ನ ಕಾರ್ಯಕರ್ತರು ಸೇರ್ಪಡೆ ಆಗುವ ಸಾಧ್ಯತೆ ಇದೆ. ಆ ಅನುಕೂಲ ಸುಮಲತಾ ಅವರಿಗೆ ಇಲ್ಲ. ಜತೆಗೆ ರಾಜಕೀಯದ ಅನುಭವವಂತೂ ಇಲ್ಲವೇ ಇಲ್ಲ.
* ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲಿದ್ದು, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಸಾವಿರಾರು ಕೋಟಿ ರುಪಾಯಿಯ ಯೋಜನೆಗಳನ್ನು ಜಿಲ್ಲೆಗೆ ಘೋಷಿಸಿದ್ದಾರೆ. ಈಗ ಅವರ ಮಗನೇ ಚುನಾವಣೆಗೆ ನಿಂತಿರುವುದರಿಂದ ಸುಮಲತಾ ಅವರಿಗೆ ಮತ ಯಾಚನೆ ಕಷ್ಟ ಆಗಲಿದೆ.
ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!
ನಿಖಿಲ್ ಕುಮಾರಸ್ವಾಮಿ ಬಲ
* ಯುವಕರಾಗಿರುವ ನಿಖಿಲ್ ಗೆ ಯುವ ಮತದಾರರನ್ನು ಸೆಳೆಯುವ ಶಕ್ತಿ ಇದೆ. ಇದರ ಜತೆಗೆ ತಂದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ತಾತ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪ್ರಭಾ ವಲಯ ಚೆನ್ನಾಗಿ ಕೆಲಸ ಮಾಡಲಿದೆ. ಅವರ ಪಾಲಿಗೆ ಮಂಡ್ಯ ಕ್ಷೇತ್ರವು ಸ್ಥಳೀಯ ಮುಖಂಡರ ಬೆಂಬಲದಿಂದ ಅಂಗೈ ಗೆರೆಯಷ್ಟೇ ಸಲೀಸಾದ ಪರಿಚಯ ಆಗಲಿದೆ.
* ಈಗಾಗಲೇ ಎರಡು ಸಿನಿಮಾಗಳಲ್ಲಿ ಅಭಿನಯಿಸಿ, ಆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಂಡ್ಯದಲ್ಲಿ ನಡೆಸಿ, ಜನರ ಪಾಲಿಗೆ ಪರಿಚಿತ ಮುಖವೇ ಆಗಿಹೋಗಿದ್ದಾರೆ ನಿಖಿಲ್. ಸ್ವತಃ ಅವರಿಗೆ ರಾಜಕೀಯ ಅನುಭವ ಬರಲಿ ಎಂಬ ಕಾರಣಕ್ಕೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಲವು ಕ್ಷೇತ್ರದಲ್ಲಿ ಕುಮಾರಸ್ವಾಮಿ ಜತೆಗೆ ಸುತ್ತಾಡಿದ್ದಾರೆ.
* ಮಂಡ್ಯದಲ್ಲಿ ಈ ವರೆಗೆ ಜೆಡಿಎಸ್ ಗೆ ಪೈಪೋಟಿ ಒಡ್ಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದೊಂದಿಗೇ ಮೈತ್ರಿಯಾಗಿರುವುದರಿಂದ ಪ್ರಬಲ ಪೈಪೋಟಿ ಎಂಬುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆಗೆ ಇಳಿದಿರುವುದರಿಂದ ಕಾಂಗ್ರೆಸ್ ಮುಖಂಡರೂ ಅವರ ಪರವಾಗಿ ಕೆಲಸ ಮಾಡಲಿದ್ದಾರೆ.
* ಒಕ್ಕಲಿಗ ಸಮುದಾಯದ ವಿಚಾರಕ್ಕೆ ಬಂದರೆ ದೇವೇಗೌಡರು ಪರಮೋಚ್ಚ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಮಂಡ್ಯದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳು ಸಾಲಿಡ್ ಆಗಿ ನಿಖಿಲ್ ಪಾಲಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ.
* ಈ ವರೆಗೆ ಹಲವು ಚುನಾವಣೆಗಳನ್ನು ನಡೆಸಿದ ಅನುಭವ ಇರುವ ನಾಯಕರೆಲ್ಲ ನಿಖಿಲ್ ಬೆನ್ನಿಗಿದ್ದಾರೆ. ಅದರಲ್ಲೂ ಕಾಂಗ್ರೆಸ್- ಜೆಡಿಎಸ್ ನ ಚಾಣಾಕ್ಷ ಮುಖಂಡರು ನಿಖಿಲ್ ಪರವಾಗಿ ಕೆಲಸ ಮಾಡುವುದರಿಂದ ದೊಡ್ಡ ಮಟ್ಟದ ಬಲ ದೊರೆತಂತಾಗುತ್ತದೆ. ಇದರ ಅನುಕೂಲ ದೊರೆಯಲಿದೆ.
ನಿಖಿಲ್ ಬೆಂಬಲಕ್ಕೆ ಜೆಡಿಎಸ್ ಭದ್ರಕೋಟೆ ಮಂಡ್ಯದ ತುಂಬ ಬಲಿಷ್ಠ 'ಸೈನಿಕರು'!
ನಿಖಿಲ್ ಕುಮಾರಸ್ವಾಮಿ ದೌರ್ಬಲ್ಯ
* ಈ ಬಾರಿ ಮಂಡ್ಯ ಕಣದಿಂದ ನಿಖಿಲ್ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದ ಸ್ಥಳೀಯವಾಗಿ ಜೆಡಿಎಸ್, ಕಾಂಗ್ರೆಸ್ ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇದು ಸವಾಲಾಗಿ ಪರಿಣಮಿಸಬಹುದು. ದೇವೇಗೌಡರ ಕುಟುಂಬ ರಾಜಕಾರಣ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
* ನಿಖಿಲ್ ಅವರ ವಯಸ್ಸು ಮೂವತ್ತರೊಳಗೆ ಇದ್ದು, ಅವರಿಗೆ ಸ್ಪರ್ಧಿಸಲು ಆತುರ ಏನಿತ್ತು ಎಂಬ ಮಾತು ಕೂಡ ಕೇಳಿಬಂದಿದೆ. ಜೆಡಿಎಸ್ ಪಕ್ಷಕ್ಕಾಗಿ ಇನ್ನೂ ಸ್ವಲ್ಪ ಕಾಲ ಕೆಲಸ ಮಾಡಿ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಆ ನಂತರ ಸ್ಪರ್ಧಿಸಲಿ ಎಂಬ ಸಲಹೆ ಹಾಗೂ ಆಕ್ಷೇಪ ಕೇಳಿಬಂದಿರುವುದರಿಂದ ಮತದಾರರ ಮನಸಿನ ಮೇಲೆ ಈ ವಿಚಾರ ಪರಿಣಾಮ ಬೀರಬಹುದು.
* ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದಕ್ಕೆ ಹಲವಾರು ಮಂದಿ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದರು. ಉದಾಹರಣೆಗೆ ಲಕ್ಷ್ಮೀ ಅಶ್ವಿನ್ ಗೌಡ. ಇನ್ನು ಮಂಡ್ಯ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಕೂಡ ಇದ್ದಾರೆ. ಆದರೂ ನಿಖಿಲ್ ಗೆ ಟಿಕೆಟ್ ಗೆ ಘೋಷಣೆ ಮಾಡಿರುವುದರಿಂದ ಪಕ್ಷದ ತಳ ಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ.