ಮಂಡ್ಯದಲ್ಲಿ ನಿಖಿಲ್, ಸುಮಲತಾ ಗೆಲುವಿಗೆ ಪೂಜೆ, ಜೋರಾದ ಬೆಟ್ಟಿಂಗ್ ದಂಧೆ
Recommended Video
ಮಂಡ್ಯ, ಮೇ 21: ಲೋಕಸಭೆ ಚುನಾವಣಾ ಫಲಿತಾಂಶಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಯಾರು ಗೆಲ್ಲಬಹುದು, ಯಾರಿಗೆ ಎಷ್ಟು ಮತಗಳು ಸಿಗಬಹುದು ಎಂಬ ಲೆಕ್ಕಾಚಾರ ತೀವ್ರಗೊಂಡಿದೆ. ಅದರಲ್ಲಿಯೂ ಇಡೀ ದೇಶದ ಗಮನ ಸೆಳೆದಿರುವ ಮಂಡ್ಯದಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಪೂಜೆ, ಹೋಮ ಕಾರ್ಯಗಳು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಟ್ಟಿಂಗ್ ದಂಧೆ ಜೋರಾಗಿದೆ.
ಭಾನುವಾರ ಪ್ರಕಟಗೊಂಡ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಂಡ್ಯದಲ್ಲಿ ಏಕಪಕ್ಷೀಯ ಫಲಿತಾಂಶ ಬರುವುದು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ನಿಕಟವಾದ ಪೈಪೋಟಿ ಇರಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವೆ ನೇರ ಹಣಾಹಣಿ ಇದೆ.
ಮಂಡ್ಯ ಎಕ್ಸಿಟ್ ಪೋಲ್: 4 ರಲ್ಲಿ ಸುಮಲತಾ, 6 ರಲ್ಲಿ ನಿಖಿಲ್ ಗೆಲುವು!
ಸಮೀಕ್ಷೆಗಳ ಪೈಕಿ ಆರು ಸಮೀಕ್ಷೆಗಳು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಸುಮಲತಾ ಅವರ ಪರವಾಗಿ ನಾಲ್ಕು ಸಮೀಕ್ಷೆಗಳಿವೆ. ಇಲ್ಲಿ ಲೆಕ್ಕಾಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೇ ಮೇಲುಗೈ ಸಾಧಿಸಿದರೂ ಅವರ ಗೆಲುವು ಸುಲಭವಾಗಿಲ್ಲ. ಸುಮಲತಾ ಅವರು ಗೆದ್ದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ನಿಖಿಲ್ ಅವರಿಗೆ ಮೂಲ ಜೆಡಿಎಸ್ ಬೆಂಬಲಿಗರು ಇರುವಂತೆಯೇ, ಸುಮಲತಾ ಅವರು ಅಂಬರೀಷ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜತೆಗೆ ಕಾಂಗ್ರೆಸ್ನ ಅತೃಪ್ತ ಮುಖಂಡರು ಸೇರಿಕೊಂಡಿದ್ದಾರೆ. ಬಿಜೆಪಿ ಬೆಂಬಲಿಗರೂ ಸಹ ಸುಮಲತಾ ಅವರಿಗೆ ಜೈ ಎಂದಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ಅಷ್ಟು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ.
ಈ ಕಾರಣಕ್ಕಾಗಿಯೇ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ನೆಚ್ಚಿನ ಅಭ್ಯರ್ಥಿಯ ಗೆಲುವಿಗಾಗಿ ಪೂಜೆ, ಪ್ರಾರ್ಥನೆಗಳ ಮೊರೆ ಹೋಗಿದ್ದಾರೆ
ಸುಮಲತಾ ಪರ ಅಭಿಮಾನಿಗಳ ಪೂಜೆ
ಸುಮಲತಾ ಅಂಬರೀಷ್ ಅವರ ಅಭಿಮಾನಿಗಳು ಶ್ರೀರಂಗಪಟ್ಟಣದ ಶಿವ ದೇವಾಲಯದಲ್ಲಿ ಸೋಮವಾರ ಪೂಜೆ ಸಲ್ಲಿಸಿದರು. ಸುಮಲತಾ ಅವರ ಗೆಲುವಿಗಾಗಿ ಪ್ರಾರ್ಥಿಸಿದರು. ಇದಲ್ಲದೆ ಮಂಡ್ಯದ ಅನೇಕ ಕಡೆಗಳಲ್ಲಿ ಅಂಬರೀಷ್ ಹಾಗೂ ಸುಮಲತಾ ಅವರ ಅಭಿಮಾನಿಗಳು, ಬೆಂಬಲಿಗರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅಹಲ್ಯದೇವಿಗೆ ಪೂಜೆ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಪ್ರಾರ್ಥಿಸಿ ಅವರ ಅಭಿಮಾನಿಗಳು ಶ್ರೀರಂಗಪಟ್ಟಣದ ಆರತಿ ಉಕ್ಕಡದ ಅಹಲ್ಯದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಿಖಿಲ್ ಗೆಲ್ಲಲಿ ಎಂದು ಹರಕೆ ಹೊತ್ತು ಸುಮಾರು 35 ಜೆಡಿಎಸ್ ಕಾರ್ಯಕರ್ತರು ಇತ್ತೀಚೆಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು.
ಸಿವೋಟರ್ ಸಮೀಕ್ಷೆ: ಮಂಡ್ಯದಲ್ಲಿ ನಿಖಿಲ್ಗೆ ಸೋಲು?
ಜೋರಾದ ಬೆಟ್ಟಿಂಗ್
ಇದುವರೆಗೂ ಬೆಟ್ಟಿಂಗ್ನಲ್ಲಿ ನಿಖಿಲ್ ಪರ ಹೆಚ್ಚು ಹಣ ಹೂಡಿಕೆ ಆಗುತ್ತಿತ್ತು. ಆದರೆ, ಎಕ್ಸಿಟ್ ಪೋಲ್ಗಳಲ್ಲಿ ಸುಮಲತಾ ಅವರ ಗೆಲುವು ಸಾಧ್ಯವಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಸುಮಲತಾ ಅವರ ಪರ ಹಣ ಹೂಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಹಣದ ಮೊತ್ತವೂ ಹೆಚ್ಚಾಗಿದೆ. ಈ ಮೊದಲು ಸುಮಲತಾ ಪರ 80 ಸಾವಿರ ರೂ.ವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು. ನಿಖಿಲ್ ಪರ 1 ಲಕ್ಷ ರೂ.ವರೆಗೂ ಚಾಲ್ತಿಯಲ್ಲಿತ್ತು. ಈಗ ಸುಮಲತಾ ಅವರ ಪರವೂ ಒಂದು ಲಕ್ಷ ರೂ. ನಡೆಯುತ್ತಿದೆ. ಅಂದರೆ, ಬೆಟ್ಟಿಂಗ್ನಲ್ಲಿಯೂ ಸಮಬಲದ ಜಿದ್ದಾಜಿದ್ದಿ ನಡೆದಿದೆ.
ಸುಮಲತಾಗೆ ಒಲಿದಿದ್ದ ದೇವರು
ಮಂಡ್ಯದ ಹೊನ್ನಾದೇವಿ ದೇವಾಲಯದಲ್ಲಿ ಸುಮಲತಾ ಅಂಬರೀಷ್ ಗೆಲ್ಲುವುದಾದರೆ ಬಲಭಾಗದ ಪ್ರಸಾದ ಕೊಡು ಎಂದು ಅರ್ಚಕರು ಕೇಳಿದಾಗ ಬಲಭಾಗದಿಂದ ಹೂ ಬಿದ್ದಿತ್ತು. ಅದೇ ರೀತಿ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಅವರು ಸುಮಲತಾ ಅಂಬರೀಷ್ ಅವರು ಗೆದ್ದು ಕೇಂದ್ರ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯಗಳು ನಿಜವಾಗುತ್ತವೆಯೇ ಅಥವಾ ಸುಳ್ಳಾಗಲಿವೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಎರಡು ದಿನ ಕಾಯಬೇಕಿದೆ.