ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!
ಮಂಡ್ಯ, ಮಾರ್ಚ್ 20: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರು ಬುಧವಾರದಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ಜತೆಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರೋಡ್ ಶೋ ಮಾಡಿದ ಮಾಡಿದ ನಂತರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗಿದೆ.
ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ. ನಾನಾ ಭಾವಗಳು ತುಂಬಿದ್ದ ಈ ಭಾಷಣವನ್ನು ನಿಮ್ಮೆದುರು ಇಡಬೇಕು ಎಂಬ ಕಾರಣಕ್ಕೆ ಇಲ್ಲಿ ನೀಡಲಾಗುತ್ತಿದೆ.
ಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರ
"ಉಸಿರು ಉಸಿರಲ್ಲಿ, ಮನ ಮನದಲ್ಲಿ, ಮನೆಮನೆಯಲ್ಲಿ ಅಂಬರೀಶಣ್ಣ ಅಂಬರೀಶಣ್ಣ ಅಂಬರೀಶಣ್ಣ ಅಂತ ಪೂಜಿಸುತ್ತಿರುವ ಪ್ರೀತಿಯ ಮಂಡ್ಯದ ಜನತೆಗೆ, ಅಂಬರೀಶ್ ಅವರ ಅಭಿಮಾನಿಗಳೇ ಇವತ್ತಿನ ದಿನ ಇಷ್ಟೊಂದು ಅದ್ಧೂರಿಯಾದ ಪ್ರೀತಿಯ ಸ್ವಾಗತ ನಮಗೆ ತೋರಿಸಿದ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ನಮಸ್ಕಾರಗಳು.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
"ಇವತ್ತು ನಮ್ಮ ಕುಟುಂಬ ಸದಸ್ಯರಾಗಿ ಇಲ್ಲಿಗೆ ಬಂದಿರುವಂಥ ದರ್ಶನ್, ಯಶ್ ಅಭಿಮಾನಿಗಳಿಗೂ ನನ್ನ ನಮಸ್ಕಾರಗಳು. ಈ ಒಂದು ಹೋರಾಟದಲ್ಲಿ ನಮ್ಮ ಜತೇಲಿ ಸಹಕಾರ ನೀಡ್ತೀನಿ ಅಂತ ಬಂದಿದ್ದ ಅಖಿಲ ಕರ್ನಾಟಕ ರೈತ ಸಂಘದ ಪುಟ್ಟಣ್ಣಯ್ಯನವರ ಅಭಿಮಾನಿಗಳಿಗೂ ನನ್ನ ನಮಸ್ಕಾರ".
ನಾನು ನಿಮ್ಮ ಊರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ
ಮೊಟ್ಟ ಮೊದಲನೆಯದಾಗಿ ನಾನು ಇವತ್ತಿನ ದಿನ ನನ್ನನ್ನು ಪರಿಚಯ ಮಾಡಿಕೊಳ್ಳಬೇಕಾಗಿದೆ. ನಲವತ್ತು ವರ್ಷಗಳು ನಾನು ಈ ಚಿತ್ರರಂಗದಲ್ಲಿ ಇದ್ದೆ. ಕಳೆದ ಇಪ್ಪತ್ತೇಳು ವರ್ಷಗಳು ನಿಮ್ಮ ಪ್ರೀತಿಯ ಅಂಬರೀಶಣ್ಣನ ಪತ್ನಿಯಾಗಿ ಅವರ ಜತೆಯಲ್ಲಿದ್ದೆ. ಇವತ್ತು ನನ್ನ ಜೀವನದ ಅತ್ಯಂತ ಮಹತ್ವದ ದಿನ. ಒಂದು ಹೊಸ ಹೋರಾಟಕ್ಕೆ ಹಾಕುತ್ತಿರುವ ಮೊದಲ ಹೆಜ್ಜೆಯ ದಿನ. ನಾನ್ಯಾರು? ನಾನ್ಯಾಕೆ ಇಲ್ಲಿದ್ದೀನಿ? ನಿಮ್ಮ ಜತೆ ಒಂದಷ್ಟು ಹಂಚಿಕೊಳ್ಳಬೇಕಾದ ಸಮಯ ಇದು. ಯಾರು ನಾನು? ನಾನು ನಿಮ್ಮ ಊರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ. ಈ ಮಣ್ಣಿನ ಸೊಸೆ. ನಾನು ಅಭಿಷೇಕ್ ಗೌಡನ ತಾಯಿ. ಈ ಮಣ್ಣಿನ ತಾಯಿ. ನಾನು ನಿಮ್ಮ ಪ್ರೀತಿಯ ಅಂಬರೀಶ್ ಅವರ ಧರ್ಮ ಪತ್ನಿ. ಈ ಮಣ್ಣಿನ ಹೆಣ್ಣುಮಗಳು ನಾನು. ಈ ಮಣ್ಣಿನ ಹೆಣ್ಣುಮಗಳಾಗಿ, ಈ ಮಂಡ್ಯದ ಸೊಸೆಯಾಗಿ ನಾನಿಲ್ಲಿ ಯಾರು ಅಂತ ಕೇಳೋರಿಗೆ ನಿಮ್ಮೆಲ್ಲರ ಉತ್ತರ ಕಾದಿದೆ ಅಂತ ನನಗೆ ಗೊತ್ತಿದೆ.
ಇಪ್ಪತ್ತೈದು ವರ್ಷ ದುಡಿದಿದ್ದ ಪಕ್ಷ ಕಾಂಗ್ರೆಸ್
ಈ ಕಳೆದ ನಾಲ್ಕು ತಿಂಗಳಿಂದ ನಾನು ಯಾವ ಮನಸ್ಥಿತಿಯಲ್ಲಿದ್ದೆ, ನನ್ನ ಜೀವನದಲ್ಲಿ ಏನೇನು ಆಗ್ತಿತ್ತು, ಯಾವೊಂದು ಕತ್ತಲೆ ಸಮಯ ನನ್ನ ಜೀವನದಲ್ಲಿ ನೋಡಲೇ ಬಾರದು ಎಂದು ಆ ದೇವರನ್ನು ಪ್ರತಿ ಕ್ಷಣ ಬೇಡಿಕೊಳ್ತಿದ್ದೆನೋ ಆ ಸಮಯ ಬಂದಿತ್ತು. ಆ ಸಮಯದಲ್ಲಿ ನನ್ನ ಸ್ಥಿತಿಯಲ್ಲಿ ಯಾವುದೇ ಹೆಣ್ಣುಮಗಳಿದ್ದರೂ ಅರ್ಥ ಮಾಡಿಕೊಳ್ತಾಳೆ: ಯಾವೊಂದು ಮನಸ್ಥಿತಿ ನನ್ನದು ಇರಬಹುದು ಅಂತ. ಆ ಸಮಯದಲ್ಲಿ ನೀವು ಮಂಡ್ಯದಿಂದ ಒಬ್ಬೊಬ್ಬರಾಗಿ ನೂರಾರು ಜನ ಸಾವಿರಾರು ಜನ ನನ್ನ ಹತ್ತಿರ ಬಂದು, ನಿಮ್ಮ ಕಣ್ಣಲ್ಲಿ ನೀರು ನೋಡುವುದಕ್ಕೆ ನಮಗೆ ಇಷ್ಟ ಇಲ್ಲ. ನೀವು ಧೈರ್ಯವಾಗಿ ಇರಬೇಕು. ನಿಮ್ಮ ಜೊತೆಯಲ್ಲಿ ನಾವಿದ್ದೀವಿ ಆನ್ನೋ ಒಂದು ಮಾತುಗಳು ನನ್ನಲ್ಲಿ ಧೈರ್ಯ ತುಂಬಿಸಿತ್ತು. ಆ ಮಾತುಗಳು ಇಲ್ಲ ಅಂದರೆ ನನಗೆ ಏನೇನಾಗ್ತಿತ್ತೋ ನನಗೇ ಗೊತ್ತಿಲ್ಲ. ಅದೇ ರೀತಿ ಅಂಬರೀಶ್ ಅವರು ಇಪ್ಪತ್ತೈದು ವರ್ಷಗಳು ದುಡಿದಿದ್ದ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ಅವರೊಟ್ಟಿಗೆ, ಅವರಿಗೋಸ್ಕರ ಸಾವಿರಾರು ಜನ ಕಾರ್ಯಕರ್ತರು ದುಡಿದಿದ್ದಾರೆ. ಅವರೂ ನನ್ನ ಹತ್ತಿರ ಬಂದು, ಇವತ್ತಿನ ದಿನ ನಿಮ್ಮ ಜತೇಲಿ ನಾವಿದ್ದೀವಿ. ಇಷ್ಟೊಂದು ವರ್ಷಗಳು ನಾವು ಅಂಬರೀಶ್ ಅಣ್ಣನ್ನೇ ನಂಬಿಕೊಂಡಿದ್ದಿವಿ. ಈಗ ನೀವು ನಮ್ಮ ಪರ ಇರಬೇಕು. ನೀವು ನಮ್ಮ ಕೈ ಬಿಡಬಾರದು. ನೀವು ಬಿಟ್ಟರೆ ನೀವು ಮಂಡ್ಯದ ಸೊಸೆಯೇ ಅಲ್ಲ ಅನ್ನೋ ಮಾತುಗಳನ್ನು ನನಗೆ ಹೇಳಿದರು.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?
ರಾಜಕೀಯದಲ್ಲಿ ಎ ಬಿ ಸಿ ಡಿಯೂ ಗೊತ್ತಿಲ್ಲ
ನಾನೇ ಕೇಳಿದೆ: ನನಗೆ ರಾಜಕೀಯ ಗೊತ್ತಿಲ್ಲ. ನನಗೆ ನಿಜವಾಗಲೂ ರಾಜಕೀಯದಲ್ಲಿ ಎ ಬಿ ಸಿ ಡಿಯೂ ಗೊತ್ತಿಲ್ಲ. ನನಗೇನು ಅರ್ಹತೆ ಇದೆ? ನೀವು ನನ್ನನ್ನು ಏಕೆ ಒತ್ತಾಯ ಮಾಡುತ್ತಿದ್ದೀರಿ? ನನ್ನಲ್ಲಿ ಏನು ನೋಡಿ ಈ ಮಾತುಗಳನ್ನು ಹೇಳುತ್ತಿದ್ದೀರಿ ಅಂತ ಕೇಳಿದಾಗ, ಇಲ್ಲ ಅಂಬರೀಶ್ ಅವರು ಮಾಡಿರುವಂಥ ಒಂದಷ್ಟು ಒಳ್ಳೆ ಕೆಲಸಗಳು ನಿದರ್ಶನ ಇದೆ. ಆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗ್ತೀರಾ ಎಂಬ ನಂಬಿಕೆ ನಿಮ್ಮ ಮೇಲೆ ನಮಗಿದೆ. ಅವರು ಬಿಟ್ಟಿರುವ ಕನಸು ಒಂದಷ್ಟು ಇವೆ. ಅವನ್ನು ನಿಮ್ಮ ಮೂಲಕ ನನಸು ಮಾಡಬೇಕಾದ ಕರ್ತವ್ಯ ನಿಮಗಿದೆ ಅನ್ನೋ ಮಾತುಗಳ ಮೂಲಕ ನನ್ನನ್ನು ಇಷ್ಟು ದೂರಕ್ಕೆ ಕರೆದುಕೊಂಡು ಬಂದಿದ್ದು ನೀವು.ಹಾಗೂ ನಾನು ಪ್ರತಿಯೊಬ್ಬರ ಮಾತುಗಳನ್ನು ಕೇಳಬೇಕು ಅನ್ನೋ ಆಸೆ. ಕಳೆದ ಮೂರ್ನಾಲ್ಕು ವಾರದಿಂದ ಮಂಡ್ಯದ ಮೂಲೆಮೂಲೆಗೂ ಹೋಗಿ ಜನಗಳನ್ನೇ ಕೇಳಿದೆ. ಇದು ಸರೀನಾ, ನಿಮಗೆ ಏನನ್ನಿಸುತ್ತಿದೆ? ನಾನು ರಾಜಕೀಯಕ್ಕೆ ಬರಬೇಕಾ? ನಾನು ನಿಮ್ಮ ಪ್ರತಿನಿಧಿಯಾಗಿ ಈ ಲೋಕಸಭೆ ಚುನಾವಣೆಯಲ್ಲಿ ನಿಲ್ಲಬೇಕಾ? ಇದನ್ನು ನೀವು ಒಪ್ತಿರಾ? ಅನ್ನೋಂಥ ಮಾತನ್ನು ಕೇಳಿಬಂದೆ. ಎಲ್ಲರೂ ಒಂದೇ ಮಾತನ್ನು ಹೇಳಿದರು. ನೀವು ಯಾವ ಪಕ್ಷ ಬೇಕಾದರೂ ನಿಂತುಕೊಳ್ಳಿ. ಪಕ್ಷೇತರರಾಗಿ ನಿಂತುಕೊಳ್ಳಿ. ನಾವು ಅಂಬರೀಶಣ್ಣನ ಪರವಾಗಿ, ಅಂಬರೀಶಣ್ಣನ ಮೇಲೆ ಇಟ್ಟಿರುವ ಪ್ರೀತಿಯಿಂದ ನಿಮ್ಮನ್ನು ನಾವು ಗೆಲ್ಲಿಸ್ತೀವಿ.
ಸುಮಲತಾ ಅಕ್ಕ ಗೆದ್ದರೆ ಡೆಲ್ಲಿವರೆಗೆ ಮಂಡ್ಯ ಹವಾ: ಅಣ್ತಮ್ಮ ಯಶ್
ಏನೇನು ಅವಮಾನಗಳನ್ನು ನಾನು ನುಂಗಿಕೊಳ್ಳಬೇಕು?
ನನ್ನ ಮುಂದೆ ಎರಡು ದಾರಿ ಇತ್ತು ಆಗ. ಒಂದೇನು ಅಂತ ಅಂದರೆ, ನಾನು, ಅಭಿಷೇಕ್ ನಮ್ಮ ಮನೆಯಲ್ಲಿ ಕೂತುಕೊಂಡು, ಆರಾಮಾಗಿ, ಶಾಂತಿಯುತವಾಗಿ ಉಳಿದಿರುವ ಜೀವನಕ್ಕೆ ಹೇಗಿರಬೇಕೋ ಹಾಗಿರಬಹುದಿತ್ತು. ಇವತ್ತು ಅಂಬರೀಶ್ ಅವರು ಇಲ್ಲ. ಆದರೆ ಜೀವನ ಪೂರ್ತಿ ಆರಾಮಾಗಿ ಕಳೆಯುವುದಕ್ಕೆ ಏನೇನು ಮಾಡಬೇಕೋ ಅದೆಲ್ಲ ಮಾಡಿಕೊಟ್ಟಿದ್ದಾರೆ. ನಾವು ನಲವತ್ತು ವರ್ಷ ಚಿತ್ರರಂಗದಲ್ಲಿದ್ದು, ಇನ್ನೂರು ಚಿತ್ರಗಳನ್ನು ಐದು ಭಾಷೆಗಳಲ್ಲಿ ನಾನು ಮಾಡಿದ್ದೀನಿ. ರಾಜಕೀಯಕ್ಕೆ ಬಂದು ಹೊಸದಾಗಿ ನಾನು ಹೆಸರು ಮಾಡಿಕೊಳ್ಳಬೇಕು ಅಂತೇನೂ ಇಲ್ಲ. ನನ್ನ ಅಸ್ತಿತ್ವ ನನಗೆ ಇದೆ. ಅಂಬರೀಶ್ ಅವರ ಹೆಸರು ನನಗಿದೆ. ಇವತ್ತು ಹೊಸದಾಗಿ ಹುಡುಕಿಕೊಂಡು ಬರುವ ಅಗತ್ಯವಿಲ್ಲ. ಈ ಒಂದು ತೀರ್ಮಾನ ನಾನೇನು ಮಾಡಬೇಕು? ಇನ್ನೊಂದು ಕಡೆ ಕಠಿಣವಾದ ಬಾಧೆ. ನಿಮ್ಮಗಳ ಪರವಾಗಿ ನಿಂತುಕೊಳ್ಳುವುದೇ ಆದರೂ ಅದರಲ್ಲಿ ಏನೇನು ಕಷ್ಟ ಕಾರ್ಪಣ್ಯಗಳು ಬರಬೇಕು, ಏನೇನು ಮಾತುಗಳು ನಾನು ಕೇಳಬೇಕು, ಏನೇನು ಅವಮಾನಗಳನ್ನು ನಾನು ನುಂಗಿಕೊಳ್ಳಬೇಕು ಅದೂ ಇತ್ತು ಇನ್ನೊಂದು ಕಡೆ.
ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?
ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದೆ
ನಾನು ಬೇಕಾದಷ್ಟು ನಮ್ಮ ಸನ್ನಿಹಿತರ ಜತೆ, ಹಿತೈಷಿಗಳ ಜತೆ ಸಮಾಲೋಚನೆ ಮಾಡಿದೆ. ಚರ್ಚೆ ಮಾಡಿದೆ. ಇದನ್ನು ಮಾಡೋಕೆ ನನ್ನ ಕೈಯಲ್ಲಿ ಆಗುತ್ತಾ? ಇದು ಸಾಧ್ಯವಾ? ನನ್ನಲ್ಲಿ ಅಷ್ಟೊಂದು ಧೈರ್ಯ ಬರುತ್ತಾ ಅನ್ನೋ ಮಾತನ್ನು ಕೇಳಿದೆ. ನಾನೊಬ್ಬಳೇ ಇದ್ದಾಗ ಬೇಕಾದಷ್ಟು ಯೋಚನೆ ಮಾಡಿದೆ. ಆದರೆ ಸುಲಭವಾದ ದಾರಿ ಬೇರೆ, ಸರಿಯಾದ ದಾರಿ ಬೇರೆ ಅಂತ ನನಗನ್ನಿಸಿತು. ನನ್ನನ್ನು ನಂಬಿ ಅಂಬರೀಶ್ ಅವರ ಪ್ರೀತಿಯನ್ನ ಕಳೆದುಕೊಳ್ಳುವುದಕ್ಕೆ ಇಷ್ಟವೇ ಇಲ್ಲದ ಜನರ ಪರವಾಗಿ ನಿಲ್ಲುವುದೇ ಸರಿಯಾದ ದಾರಿ. ಅದು ಕಷ್ಟ ಇರಬಹುದು. ಆದರೆ ಅದೇ ಸರಿಯಾದ ದಾರಿ ಅಂತ ನನಗೆ ಅನ್ನಿಸಿತು. ನಿಮಗೆಲ್ಲರಿಗೂ ಗೊತ್ತು, ನಾನು ನಿರೀಕ್ಷೆ ಮಾಡಿದೆ. ಅಂಬರೀಶ್ ಅವರು ಇದ್ದ ಪಕ್ಷ ಕಾಂಗ್ರೆಸ್ ಪಕ್ಷ. ಬೇಕಾದಷ್ಟು ವರ್ಷ ಆ ಪಕ್ಷಕ್ಕಾಗಿ ದುಡಿದಿದ್ದಾರೆ. ಅದೇ ಪಕ್ಷದ ಬಾಗಿಲು ತಟ್ಟಿದೆ. ಕೇಳಿದೆ. ಮಂಡ್ಯದ ಜನ ಅವರ ಜನಾಭಿಪ್ರಾಯವನ್ನು ಅವರ ಮುಂದೆ ಇಟ್ಟೆ ನಾನು. ನೀವ್ಯಾಕೆ ಬಿಟ್ಟುಕೊಡ್ತಿದೀರಾ ಇದನ್ನ? ಮಂಡ್ಯ ನಿಮಗೆ ಬೇಡವಾ? ಮಂಡ್ಯದಲ್ಲಿ ನಿಮ್ಮನ್ನು ನಂಬಿಕೊಂಡಿರುವ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಅವರು ನಿಮಗೆ ಬೇಡವಾ? ಅವರ ಬಗ್ಗೆ ನಿಮಗೆ ಚಿಂತೆ ಇಲ್ಲವಾ ಅನ್ನೋ ಮಾತನ್ನು ಕೇಳಿದೆ. ಅದಕ್ಕೆ ಸಿಕ್ಕ ಉತ್ತರ ನಿಮಗೇ ಗೊತ್ತು. ಅವರು, ನಾವು ನಿಸ್ಸಹಾಯರು. ನಮ್ಮ ಕೈಲಿ ಏನೂ ಮಾಡುವುದಕ್ಕೆ ಆಗ್ತಿಲ್ಲ. ಮೈತ್ರಿ ಧರ್ಮ ಪಾಲಿಸಬೇಕು ಅಂತ ಹೇಳಿ ಕಳುಹಿಸಿದರು. ಇವತ್ತು ಮೈತ್ರಿ ಧರ್ಮ ಯಾರು, ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಅಂತ ನೀವು ಕೂಡ ನೋಡ್ತಿದ್ದೀರಾ.
ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!
ನೀವೆಲ್ಲ ಕೈ ಜೋಡಿಸಿದರೆ ಯಾವುದೂ ಅಸಾಧ್ಯವಲ್ಲ
ಕಾರ್ಯಕರ್ತರಿಗೆ ಬೆದರಿಕೆ ಹಾಕುವುದು, ಜನರಿಗೆ ಬೆದರಿಕೆ ಹಾಕುವುದು ಇದೆಲ್ಲ ನಡೆಯುತ್ತಾ? ನೀವುಗಳೇ ಹೇಳಬೇಕು. ನನಗಂತೂ ಗೊತ್ತಿಲ್ಲ. ಇವತ್ತು ನನ್ನ ಮುಂದೆ ಇರುವುದು ಸಾಧಾರಣವಾದ ಸವಾಲಲ್ಲ. ಅತ್ಯಂತ ಕಠಿಣವಾದ ಸವಾಲು. ಒಂದು ಹಿಮಾಲಯ ಪರ್ವತವನ್ನು ಹತ್ತಬೇಕಾಗಿರುವಂಥ ಕಷ್ಟವಾದ ಸವಾಲು. ಆದರೆ ನೀವೆಲ್ಲ ಕೈ ಜೋಡಿಸಿದರೆ ಯಾವುದೇ ಸವಾಲು ಅಸಾಧ್ಯವಲ್ಲ. ಕಷ್ಟ ಇರಬಹುದು, ಅಸಾಧ್ಯವಲ್ಲ. ಈ ಒಂದು ಸಂದರ್ಭದಲ್ಲಿ ನಾನು ಸ್ಪರ್ಧೆ ಮಾಡ್ತೀನಿ ಅಂತ ಮುಂದೆ ಬಂದಾಗ ಮಾತುಗಳು, ಹೇಳಿಕೆಗಳು ಮೊದಲಿಂದಲೇ ಶುರುವಾಗಿ ಹೋದವು. ನಾನಿನ್ನೂ ನನ್ನ ನಿರ್ಧಾರವನ್ನು ತಿಳಿಸಿರಲಿಲ್ಲ ಮಾತುಗಳು ಬಾಣಗಳಂತೆ ಬರಲು ಶುರುವಾದವು. ನಾನೊಂದೇ ಹೇಳಿದೆ: ನಾನು ಈ ಮಾತುಗಳಿಗೆ ಉತ್ತರ ಹೇಳಲ್ಲ. ನಾನು ಈ ಮಾತುಗಳು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ. ಯಾಕೆಂದರೆ ನನ್ನ ಪರವಾಗಿ ಮಾತನಾಡುವುದಕ್ಕೆ ನನ್ನ ಜನ ಇದ್ದಾರೆ. ಅಂಬರೀಶ್ ಅವರ ಜನ ಇದ್ದಾರೆ. ಅವರನ್ನೇ ನಂಬಿಕೊಂಡು, ಪ್ರೀತಿಯಿಂದ ನೋಡಿಕೊಂಡು ಬಂದ ಜನ ಇದ್ದಾರೆ. ಅವರೇ ಕೊಡಲಿ ಉತ್ತರ. ನಾನು ಕೊಡಲ್ಲ. ಇನ್ನು ಮುಂದೆ ಇದೆ ಚಾಲೆಂಜ್. ಅದನ್ನೂ ನಾನೇನೂ ಮಾತನಾಡಲ್ಲ.