ನಾಯಕರ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು
ಮಂಡ್ಯ, ಏಪ್ರಿಲ್ 4: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಡುವಣ ರಾಜಕೀಯ ವಾಗ್ದಾಳಿಗಳು ತೀವ್ರವಾಗುತ್ತಿರುವ ಸಂದರ್ಭದಲ್ಲಿಯೇ ಅಲ್ಲಿನ ಕಾಂಗ್ರೆಸ್ನಲ್ಲಿ ಒಡಕು ಹೆಚ್ಚುವ ಲಕ್ಷಣಗಳು ಕಂಡುಬಂದಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ ವಿರುದ್ಧ ಸ್ಥಳೀಯ ಮಟ್ಟದ ನಾಯಕರು ಮತ್ತು ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ನಮಗೆ ಸ್ವಾಭಿಮಾನವಿದೆ. ಅದಕ್ಕಾಗಿ ಸುಮಲತಾ ಅವರನ್ನೇ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ನಾಯಕರಿಗೆ ಪ್ರತಿ ಸವಾಲೊಡ್ಡಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ!
ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರಕ್ಕೆ ತೆರಳುತ್ತಿರುವ ಕಾಂಗ್ರೆಸ್ ಮುಖಂಡರು ಪಕ್ಷದ ಬಾವುಟ ಹಿಡಿದುಕೊಳ್ಳುತ್ತಿದ್ದಾರೆ. ಅವರ ಜತೆ ಬಿಜೆಪಿ ಬಾವುಟ ಹಿಡಿದ ಕಮಲ ಪಕ್ಷದ ಬೆಂಬಲಿಗರೂ ಸೇರಿಕೊಳ್ಳುತ್ತಿದ್ದಾರೆ. ಪರಸ್ಪರ ವಿರುದ್ಧ ಸೈದ್ಧಾಂತಿಕ ಹಿನ್ನೆಲೆಯುಳ್ಳ ಪಕ್ಷಗಳ ಬಾವುಟ ಒಂದಾಗಲು ಸಾಧ್ಯವಿಲ್ಲ. ಹೀಗೆ ಬಾವುಟ ಹಿಡಿದು ಹೋಗುವವರು ಪಕ್ಷ ಬಿಟ್ಟು ಹೋಗಲಿ. ಕಾಂಗ್ರೆಸ್ ಬಾವುಟ ಹಿಡಿದು ಹೋಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಪಕ್ಷ ತ್ಯಜಿಸಿ ಯಾರ ಪರವಾದರೂ ಕೆಲಸ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.
ಇದಕ್ಕೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂಡವಾಳು ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ನಾಯಕರ ಮಾತಿಗೆ ಕಿಮ್ಮತ್ತು ನೀಡದೆ ಇರಲು ತೀರ್ಮಾನಿಸಲಾಗಿದೆ.
ಶಿವರಾಮೇಗೌಡ ಕ್ಷಮೆಯಾಚಿಸಲಿ:ಮೈಸೂರು ಜಿಲ್ಲಾ ನಾಯ್ಡು ಸಮಾಜ ಆಗ್ರಹ
'ನಾವು ಸ್ವಾಭಿಮಾನಕ್ಕೆ ಸುಮಲತಾ ಅವರನ್ನು ಬೆಂಬಲಿಸುತ್ತೇವೆ. ಬಾವುಟ ಹಿಡಿಯುವ ಅಧಿಕಾರ ನಮ್ಮದು. ಕಾರ್ಯಕರ್ತರಿಂದ ನಾಯಕರು ವಿನಾ, ನಾಯಕರಿಂದ ಕಾರ್ಯಕರ್ತರಲ್ಲ. ಕಾರ್ಯಕರ್ತರಿದ್ದರೆ ಮಾತ್ರ ಪಕ್ಷ ಉಳಿಸಲು ಸಾಧ್ಯ' ಎಂದು ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ನಮಗೆ ಬೆಂಬಲಿಸುತ್ತಿಲ್ಲ: ಜಿ.ಟಿ.ದೇವೇಗೌಡ ಆರೋಪ
'ಈ ಮೈತ್ರಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ. ಕಳೆದ ಉಪ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡು ಜೆಡಿಎಸ್ನವರಿಗೆ ಅವಕಾಶ ನೀಡಲಾಗಿತ್ತು. ಶಿವರಾಮೇಗೌಡ ಅವರು ನಮ್ಮ ಜಿಲ್ಲೆಯವರೆಂಬ ಕಾರಣಕ್ಕೆ ಅವರಿಗೆ ಮತ ಹಾಕಿದ್ದೆವು. ಆದರೆ, ಈಗ ಹಾಸನದಿಂದ ಕರೆದುಕೊಂಡು ಬಂದು ನಿಲ್ಲಿಸುತ್ತಿದ್ದಾರೆ. ಇದರಿಂದ ಮಂಡ್ಯದವರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಎಂದಿಗೂ ಬೇರೆ ಪಕ್ಷದವರನ್ನು ಮಂಡ್ಯದಲ್ಲಿ ನಿಲ್ಲಿಸಿ, ಗೆಲ್ಲಿಸಿದ ಉದಾಹರಣೆ ಇಲ್ಲ. ಯಾವ ಪಕ್ಷದವರಾದರೂ ಅವರು ಮಂಡ್ಯದವರೇ ಆಗಿರಲಿ' ಎಂದು ಆಗ್ರಹಿಸಿದ್ದಾರೆ.
ತಳಮಟ್ಟದಲ್ಲಿ ಕೆಲಸ ಮಾಡಿ ಪಕ್ಷವನ್ನು ಸಂಘಟನೆ ಮಾಡಿರುವುದು ಕಾರ್ಯಕರ್ತರೇ ಹೊರತು ನಾಯಕರಲ್ಲ. ನಾವೆಲ್ಲರೂ ತೀರ್ಮಾನ ಮಾಡಿಕೊಂಡು ನಾಯಕರನ್ನು ಸೃಷ್ಟಿಸುತ್ತೇವೆ ಎಂದಿದ್ದಾರೆ.