ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ!
ಮಂಡ್ಯ, ಏಪ್ರಿಲ್ 3: ಸಿದ್ದರಾಮಯ್ಯ ಮಾತಿಗೂ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಬೆಲೆ ನೀಡುತ್ತಿಲ್ಲವಾ? ಮೈತ್ರಿ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ, ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸದೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.
ಆದರೂ ಅದು ಪ್ರಯೋಜನ ಬಂದಂತೆ ಕಾಣುತ್ತಿಲ್ಲ. ಅದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸುಮಲತಾ ಪರ ಪ್ರಚಾರ ನಡೆಸುತ್ತಿರುವುದು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ.
ಮಂಡ್ಯ ಜಿಲ್ಲಾಧ್ಯಕ್ಷರೂ ಸೇರಿದಂತೆ ಇತರ ನಾಯಕರಿಗೆ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರ ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್ ಬಾವುಟವನ್ನು ಪ್ರದರ್ಶಿಸದಂತೆ ಸೂಚನೆ ನೀಡಿದ್ದರೂ ರಾಜಾರೋಷವಾಗಿ ಕೈ ಬಾವುಟ ಪ್ರದರ್ಶಿಸುತ್ತಿದ್ದಾರೆ.
ಮಂಡ್ಯ : ಕಾಂಗ್ರೆಸ್ ನಾಯಕ ಆತ್ಮಾನಂದ ಮನೆ ಮೇಲೆ ಐಟಿ ದಾಳಿ
ದರ್ಶನ್ ಅವರು ಬುಧವಾರ ನಡೆಸಿದ ರೋಡ್ ಷೋನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಬಹಿರಂಗವಾಗಿ ದರ್ಶನ್ ಅವರ ಜೊತೆ ನಿಂತು ಪ್ರಚಾರ ಮಾಡಿದರೆ, ಬ್ಲಾಕ್ ಕಾಂಗ್ರೆಸ್ ನ ಮತ್ತೊಬ್ಬ ಅಧ್ಯಕ್ಷ ಕಿಕ್ಕೇರಿ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಬಿ.ರವಿ, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಬೆಂಬಲಕ್ಕೆ ಇದ್ದರು.
ಮನ್ ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಸ್.ಅಂಬರೀಶ್ ಕೂಡ ದರ್ಶನ್ ಅವರ ಪ್ರಚಾರದ ವೇಳೆ ಉದ್ದಕ್ಕೂ ಜೊತೆಯಲ್ಲಿದ್ದು, ಜನರನ್ನು ಸಂಘಟಿಸುತ್ತಿದ್ದರೆ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ರವೀಂದ್ರಬಾಬು ಅವರು ದರ್ಶನ್ ಜೊತೆಯಲ್ಲಿಯೇ ಬಹಿರಂಗವಾಗಿ ಪ್ರಚಾರ ಮಾಡಿ, ದೋಸ್ತಿ ನಾಯಕರಿಗೆ ಕಿಚ್ಚು ಹಚ್ಚಿದ್ದಾರೆ.
ಸುಮಲತಾ ಪರ ಯಶ್, ದರ್ಶನ್ ಪ್ರಚಾರ: ಸಿಎಂ ಮತ್ತೊಂದು ಟೀಕೆ
ಇನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಹಿರಂಗವಾಗಿ ದರ್ಶನ್ ಅವರ ಜೊತೆಯಲ್ಲಿ ಪ್ರಚಾರದಲ್ಲಿ ಭಾಗವಹಿಸದೆ, ತಮ್ಮ ಹಿಂಬಾಲಕರು ಮತ್ತು ಕಾಂಗ್ರೆಸ್ ಮುಖಂಡರನ್ನು ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಕಳುಹಿಸಿದ್ದಾರೆ. ಆ ಮೂಲಕ ತೆರೆಮರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಗೆಲುವಿಗೆ ಶ್ರಮಿಸುತ್ತಿರುವುದು ಕಂಡುಬರುತ್ತಿದೆ.