ಎಲೆಕ್ಷನ್ ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಚಲುವರಾಯಸ್ವಾಮಿ
ಮಂಡ್ಯ, ಜೂನ್ 6: ಅಭಿವೃದ್ಧಿ ಪರವಾದ ಆಲೋಚನೆಗಳಿಲ್ಲದೆ ಮೈತ್ರಿ ಸರಕಾರ ಜನರ ಅಪನಂಬಿಕೆಗೆ ಗುರಿಯಾಗಿರುವಾಗ ಗ್ರಾಮ ವಾಸ್ತವ್ಯದಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕುಟುಕಿದ್ದಾರೆ.
ಅಂದ ಹಾಗೆ, ದಶಕಗಳ ಬಳಿಕ ಇದೇ ತಿಂಗಳಿಂದ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಗ್ರಾಮ ವಾಸ್ತವ್ಯ ಹತ್ತು ವರ್ಷಗಳ ಹಿಂದಿನ ಹಳೆಯ ಪರಿಕಲ್ಪನೆ. ಅದನ್ನು ಮತ್ತೆ ಮಾಡುವುದರಿಂದ ಜನರ ವಿಶ್ವಾಸವನ್ನು ಗೆಲ್ಲುತ್ತೇನೆ ಎಂಬುದು ಬರೀ ಭ್ರಮೆ ಎಂದು ತಿವಿದಿದ್ದಾರೆ.
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಲ್ಲಿಂದ ಇಲ್ಲಿವರೆಗೆ ಎರಡೂ ಪಕ್ಷದ ನಾಯಕರಲ್ಲಿ ಸಮನ್ವಯತೆ ಇಲ್ಲದೆ, ಅಭಿವೃದ್ಧಿ ಪರವಾದ ಆಲೋಚನೆಗಳಿಲ್ಲದೆ ಜನರ ಅಪನಂಬಿಕೆಗೆ ಗುರಿಯಾಗಿದೆ. ಇಂತಹ ಕಠಿಣ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಗ್ರಾಮವಾಸ್ತವ್ಯದಿಂದ ರಾಜ್ಯದ ಜನರ ಪ್ರೀತಿ ಸಂಪಾದಿಸುವುದು ಸಾಧ್ಯವಾಗದ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಶಾಸಕರು, ಮಂತ್ರಿಗಳು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಿ. ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸಲಾಗದೆ ನನಗೆ ನೆಮ್ಮದಿ ಇಲ್ಲ, ವಿಷಕಂಠ, ನಾನು ಸಾಂದರ್ಭಿಕ ಶಿಶು ಎಂಬೆಲ್ಲಾ ಹೇಳಿಕೆಗಳನ್ನು ಕೊಟ್ಟು ಸರಕಾರದಲ್ಲಿ ಒಗ್ಗಟ್ಟಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡಿದ್ದಾರೆ. ಜತೆಗೆ ಲೋಕಸಭಾ ಚುನಾವಣೆ ಮುಗಿದು ಎರಡು ತಿಂಗಳಾಗುತ್ತಿದೆ. ಮುಖ್ಯಮಂತ್ರಿಗಳು ತಪ್ಪನ್ನು ಸರಿಪಡಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಎಂದಿದ್ದಾರೆ.
ಮಂಡ್ಯ ಜಿಲ್ಲೆಯೊಳಗೆ ಕಾಂಗ್ರೆಸ್ ನವರನ್ನು ಸೌಜನ್ಯದಿಂದ ನಡೆಸಿಕೊಳ್ಳುತ್ತಿಲ್ಲ. ಹಾಗಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಹೇಳುವುದೇ ಲೇಸು. ಮೈತ್ರಿಗೆ ಅಂತ್ಯ ಹೇಳಿ, ಚುನಾವಣೆಗೆ ಹೋಗೋದು ಇಲ್ಲವೇ ವಿರೋಧ ಪಕ್ಷದಲ್ಲಿ ಕೂರುವುದು ಎರಡರಲ್ಲಿ ಒಂದು ನಿರ್ಧಾರವಾಗಬೇಕು. ಗೊಂದಲಗಳಲ್ಲೇ ಮೈತ್ರಿ ಸರಕಾರ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.