ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ
ಮಂಡ್ಯ, ಜೂ23: ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.
ಬುಧವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಮಠದ ಆವರಣ ಪ್ರವೇಶಿಸಿರುವ ಚಿರತೆಯ ಚಲನ ವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಠದ ಆವರಣವನ್ನು ಕೆಲ ನಿಮಿಷಗಳ ಕಾಲ ಸುತ್ತಾಡಿರುವ ಚಿರತೆ ಬಳಿಕ ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ತಿಂದಿದೆ. ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನ ವಲನ ಆಧರಿಸಿ ಜೀವಂತ ನಾಯಿಯನ್ನು ಬೋನಿನಲ್ಲಿರಿಸಿ ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ.
ಮೋದಿ ಜೊತೆ ಸಂವಾದ; ಸಂತಸ ಹಂಚಿಕೊಂಡ ಮಂಡ್ಯದ ನಿತೀಶ್ ಕುಮಾರ್
ಕರು ಮೇಲೆ ದಾಳಿ ನಡೆದಿತ್ತು
ಬೇಬಿ ಬೆಟ್ಟ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆಯೂ ಚಿರತೆ ಕರು ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಮಠದಲ್ಲಿ 15ಕ್ಕೂ ಹೆಚ್ಚು ಹಸುಗಳಿದ್ದು, ಅವುಗಳು ಮೇಯಿಸಲು ಹೊರ ಕಳುಹಿಸಲು ಭಯವಾಗುತ್ತದೆ. ಪ್ರಾಣಿಗಳು ಮನುಷ್ಯನ ಮೇಲೆ ಯಾವ ಸಂದರ್ಭದಲ್ಲಿ ದಾಳಿ ನಡೆಸುತ್ತವೆ ಎಂಬುದು ತಿಳಿಯಲು ಸಾಧ್ಯವಿಲ್ಲ.
"ನಾವು ಕೂಡ ಭಕ್ತಾಧಿಗಳ ಮನೆಗಳಲ್ಲಿ ಪೂಜೆ ಸೇರಿದಂತೆ ಇತರೆ ಧಾರ್ಮಿಕ ಕೈಂಕರ್ಯಗಳಿಗೆ ಹೊರ ಜಿಲ್ಲೆ, ತಾಲೂಕುಗಳಿಗೆ ತೆರಳಿ ತಡ ರಾತ್ರಿ ಮಠಕ್ಕೆ ಆಗಮಿಸುತ್ತೇವೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯಲು ಹೆಚ್ಚಿನ ರೀತಿಯಲ್ಲಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ," ಎಂದು ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಆಗ್ರಹಿಸಿದರು.
ಅರಣ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮಠದಲ್ಲಿ ಚಿರತೆ ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಚಿರತೆ ಆರೇಳು ಬಾರಿ ದಾಳಿ ನಡಿಸಿದ್ದು, ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅರಣ್ಯಾಧಿಕಾರಿ ಮಠದಲ್ಲಿ ಚಿರತೆ ಹಿಡಿಯುವ ಬೋನ್ ಇಡದೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿ ಇರುವುದು ಒಂದೇ ಬೋನ್ ಎಂಬ ಅರಣ್ಯಾಧಿಕಾರಿ ಪುಟ್ಟೇಗೌಡರ ಬೇಜವಬ್ದಾರಿ ಹೇಳಿಕೆಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
Recommended Video