ಕೊರೊನಾದಿಂದ ಗುಣಮುಖರಾದ ಕೆರೆ ಕಾಮೇಗೌಡರು
ಮಂಡ್ಯ, ಆಗಸ್ಟ್ 01: ಮಂಡ್ಯದ ಕೆರೆ ಕಾಮೇಗೌಡರು ಕೊರೊನಾ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಕಾಮೇಗೌಡರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಕೊವಿಡ್ ಆಸ್ಪತ್ರೆಯಿಂದ ಅವರನ್ನು ಇಂದು ಬಿಡುಗಡೆಗೊಳಿಸುವುದಾಗಿ ತಿಳಿದುಬಂದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ, 82 ವರ್ಷದ ಕಾಮೇಗೌಡರು ಈಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಾಲಿಗೆ ತೀವ್ರ ಗಾಯವಾಗಿತ್ತು. ಬಲಗಾಲಿನ ನರ ಸಂಬಂಧಿ ಕಾಯಿಲೆಯ ಗಾಯ ಉಲ್ಬಣಗೊಂಡಿದ್ದ ಹಿನ್ನೆಲೆ ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲೇ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು.
ಕೆರೆ ಕಾಮೇಗೌಡರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್!
ಕಳೆದ ವಾರ ಮಂಡ್ಯದ ಕಾಮೇಗೌಡರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ರಾಜಕೀಯ ಮುಖಂಡರೂ ಸರ್ಕಾರವನ್ನು ಒತ್ತಾಯಿಸಿದ್ದರು. ಹಲವರು ಅವರು ಬೇಗ ಗುಣಮುಖರಾಗಲೆಂದು ಹಾರೈಸಿದ್ದರು.
ಇದೀಗ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಕಾಮೇಗೌಡರ ಕಾಲಿನ ಗಾಯಕ್ಕೆ ಮನೆಯಲ್ಲಿಯೇ ಚಿಕಿತ್ಸೆಗೆ ವೈದ್ಯರು ಸೂಚನೆ ನೀಡಿದ್ದಾರೆ.
ಈಚೆಗೆ ಕಾಮೇಗೌಡರ ಕೆರೆ ಕಟ್ಟು ಕಾಯಕವನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಶಂಸಿಸಿದ್ದರು.