ಮದ್ದೂರು ಕೆರೆ ಕೋಡಿ ಒಡೆದು ಪ್ರವಾಹ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್
ಮಂಡ್ಯ, ಆಗಸ್ಟ್ 3 : ಐತಿಹಾಸಿಕ ಮದ್ದೂರು ಕೆರೆ ಕೋಡಿ ಒಡೆದು ಉಂಟಾದ ನೀರಿನ ಪ್ರವಾಹಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದರಿಂದ ಬುಧವಾರ ಇಡೀ ದಿನ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿರುವ ಘಟನೆ ನಡೆಯಿತು.
ಮದ್ದೂರು ಕೆರೆ ಕೋಡಿ ನೀರು ಭಾರೀ ಪ್ರಮಾಣದಲ್ಲಿ ಕೆರೆ ಪಾತ್ರದ ಜಮೀನುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಕೊಲ್ಲಿ ನದಿ ಮೂಲಕ ಹರಿದ ನೀರಿನ ಪ್ರವಾಹದಿಂದಾಗಿ ಮದ್ದೂರು ಪಟ್ಟಣದಲ್ಲಿ ಭಾರೀ ಪ್ರಮಾಣದ ಆನಾಹುತ ಸೃಷ್ಠಿಸಿದೆ. ಮಂಗಳವಾರವಷ್ಟೇ ಮಂಡ್ಯ ತಾಲೂಕು ಹೊಸಬೂದನೂರು ಕೆರೆ ಒಡೆದು ಅಪಾರ ಪ್ರಮಾಣದ ನೀರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರ ಬಂದ್ ಆಗಿತ್ತು. ಈಗ ಹೆದ್ದಾರಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಮಂಡ್ಯ ತಾಲೂಕು ಕೆರೆಗೋಡು ಹಾಗೂ ಹುಂಜನಕೆರೆಗಳು ಭಾರಿ ಮಳೆಯಿಂದಾಗಿ ಒಡೆದು ಪ್ರವಾಹೋಪಾದಿಯಲ್ಲಿ ಹರಿದು ಮದ್ದೂರು ಕೆರೆಯತ್ತ ಹರಿದುಬಂದಿದ್ದರಿಂದ ಈಗ ಮದ್ದೂರು ಕೆರೆಯೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಆ.8ರವರೆಗೆ ಕರ್ನಾಟಕಕ್ಕೆ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ
ಕೆರೆಯ ಕೆಳ ಭಾಗದಲ್ಲಿ ಬರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕೆರೆ ಕೋಡಿ ನೀರು ಕೊಲ್ಲಿ ನದಿಗೆ ನುಗ್ಗಿದ್ದರಿಂದ ನದಿ ಪಾತ್ರದ ಪಟ್ಟಣದಲ್ಲಿ ಬರುವ ಎಲ್ಐಸಿ ಬಡಾವಣೆ ಹಾಗೂ ವಿನಾಯಕ ಲೇಔಟ್ಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ, ಪೂರ್ಣಪ್ರಜ್ಞ ಶಾಲೆ, ಸೋಮೇಶ್ವರ ಸಮುದಾಯ ಭವನ, ಕಲ್ಯಾಣ ಮಂಟಪ, ಮಹದೇಶ್ವರ ಅಕ್ಕಿ ಗಿರಣಿಗೆ ನೀರು ನುಗ್ಗಿದೆ. ಪರಿಣಾಮ ಗಿರಣಿಯಲ್ಲಿ ದಾಸ್ತಾನು ಮಾಡಲಾಗಿದ್ದ ಭತ್ತ ಮತ್ತು ಅಕ್ಕಿ ನೀರಿನಿಂದ ಆವೃತವಾಗಿ ಲಕ್ಷಾಂತರ ರೂ. ನಷ್ಟವುಂಟಾಗಿದೆ ಅಲ್ಲದೆ, ಮನೆಯಲ್ಲಿದ್ದ ಹಲವು ದಿನಬಳಕೆ ವಸ್ತುಗಳು ಹಾನಿಗೊಳಗಾಗಿವೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕೊಲ್ಲಿ ಸೇತುವೆ ಸೇರಿದಂತೆ ಸಂಪರ್ಕ ರಸ್ತೆಗಳಲ್ಲಿ ನೀರಿನ ಪ್ರವಾಹದಿಂದಾಗಿ ಹೆದ್ದಾರಿ ವಾಹನಗಳ ಸಂಚಾರಿ ಸಂಪೂರ್ಣವಾಗಿ ನಿಷೇದಿಸಲಾಗಿತ್ತು. ಬೆಂಗಳೂರಿನಿಂದ ಮೈಸೂರಿಗೆ ಬರುವ ವಾಹನಗಳನ್ನು ಪರ್ಯಾಯ ವ್ಯವಸ್ಥೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಬರುವ ವಾಹನಗಳನ್ನು ರುದ್ರಾಕ್ಷಿಪುರ, ವೈದ್ಯನಾಥಪುರ, ಮದ್ದೂರು, ಕೆ.ಎಂ. ದೊಡ್ಡಿ, ಮಂಡ್ಯ ಮಾರ್ಗವಾಗಿ ಮೈಸೂರಿಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ಬರುವ ವಾಹನಗಳನ್ನು ಶ್ರೀರಂಗಪಟ್ಟಣ, ಮಂಡ್ಯ, ಮಳವಳ್ಳಿ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಕರ್ನಾಟಕದಲ್ಲಿ ಮಳೆ ಅನಾಹುತಕ್ಕೆ 2 ತಿಂಗಳಲ್ಲೇ 59 ಮಂದಿ ಬಲಿ
ಕೊಲ್ಲಿ ಸರ್ಕಲ್ನ ಹೆದ್ದಾರಿ ಸೇತುವೆ ಮೇಲೆ ಹರಿಯುತ್ತಿರುವ ನೀರನ್ನು ತೆರವು ಮಾಡಲು ಪುರಸಭಾಧ್ಯಕ್ಷ ಸುರೇಶ್ಕುಮಾರ್ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಪುರಸಭಾ ಸಿಬ್ಬಂದಿಗಳು ಎರಡು ಜೆಸಿಬಿಗಳ ಸಹಾಯದಿಂದ ಸೇತುವೆ ಮತ್ತು ಇಕ್ಕಲೆಗಳಲ್ಲಿ ಬರುವ ರಸ್ತೆ ವಿಭಜಕಗಳನ್ನು ಒಡೆದು ಪ್ರವಾಹದ ನೀರನ್ನು ಶಿಂಷಾ ನದಿಗೆ ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದರಾದರೂ, ನೀರಿನ ಪ್ರವಾಹ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಡ್ಯ ತಾಲೂಕು ಕೀಲಾರ ಕೆರೆಯು ಅಪಾಯದ ಹಂಚಿಗೆ ತಲುಪಿದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನೀಗಮದ ಅಧಿಕಾರಿಗಳು ಮದ್ದೂರು ಕೆರೆ ಕೋಡಿಯನ್ನು ಮತ್ತಷ್ಟು ಅಗಲಗೊಳಿಸಿ ಹರಿದುಬರುವ ನೀರಿನ ಪ್ರಮಾಣವನ್ನು ಹೊರ ಹಾಕುವ ಮೂಲಕ ಕೆರೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಂಡಿದ್ದಾರೆ.
ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜು, ಎಇ ನಾಗರಾಜು, ಸಹಾಯಕ ಇಂಜಿನಿಯರ್ ತಾರಾ ಹಾಗೂ ಸಿಬ್ಬಂದಿಗಳು ಕೆರೆಯ ಬಳಿ ಮೊಕ್ಕಾಂ ಹೂಡಿದ್ದು, ಅಪಾಯ ಸ್ಥಿತಿ ಎದುರಾದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಕೋಡಿಯನ್ನು ಅಗಲಗೊಳಿಸಿ ಮತ್ತಷ್ಟು ನೀರು ಶಿಂಷಾ ನದಿಗೆ ಹರಿದುಹೋಗುವಂತೆ ಮಾಡಲು ನಿರ್ಧಾರ ಮಾಡಿದ್ದಾರೆ.