ಮುಖ್ಯಮಂತ್ರಿಗಳೇ ರೈತರ ಜೊತೆ ಆಟ ಆಡಬೇಡಿ: ಚಲುವರಾಯಸ್ವಾಮಿ
ಮಂಡ್ಯ, ಜೂನ್ 22: ಅದ್ಯಾಕೋ ಗೊತ್ತಿಲ್ಲ ಒಂದಲ್ಲ ಒಂದು ಕಾರಣಕ್ಕೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತಿನ ಛಾಟಿ ಬೀಸುತ್ತಲೇ ಬರುತ್ತಿದ್ದಾರೆ.
ಇದೀಗ ಮಂಡ್ಯದಲ್ಲಿ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ ನೀವು ನೀಡುವ ಋಣಮುಕ್ತ ಪತ್ರದಿಂದ ಯಾವುದೇ ಪ್ರಯೋಜನವಿಲ್ಲ. ಲಕ್ಷಾಂತರ ರೈತರ ಜೀವದ ಜೊತೆ ಆಟ ಆಡಬೇಡಿ ಎಂದು ಸಿಎಂ ರೈತರಿಗೆ ನೀಡುತ್ತಿರುವ ಋಣಮುಕ್ತ ಪತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದ ರೈತ ಹನುಮಂತಯ್ಯ ಎಂಬಾತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಸುದ್ಧಿ ತಿಳಿದು ಹೇಳಿಕೆ ನೀಡಿರುವ ಅವರು, ಹೆತ್ತಗೋನಹಳ್ಳಿ ಗ್ರಾಮದ ರೈತ ಆತ್ಮಹತ್ಯೆ ಪ್ರಕರಣ ರಾಜ್ಯಕ್ಕೆ ಒಂದು ಸಂದೇಶ ಹೋಗಬೇಕು. ರೈತ ಬ್ಯಾಂಕಿಗೆ ಹೋದಾಗ ಯಾವ ಸಾಲವೂ ಮನ್ನಾ ಆಗಲ್ಲ ಎಂದಿದ್ದಾರೆ.
ನೊಂದ ರೈತರಿಂದ ಆತ್ಮಹತ್ಯೆ: ಚಲುವರಾಯಸ್ವಾಮಿ
ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಖ್ಯಮಂತ್ರಿಗಳು ಇದನ್ನೆಲ್ಲಾ ಯೋಚಿಸಬೇಕು. ಯಾವುದೋ ಒಂದು ಪ್ರಕರಣದಲ್ಲಿ ಸಹಾಯ ಮಾಡಿದರೆ ಒಬ್ಬರ ಜೀವ ಉಳಿಸಬಹುದು. ಆದರೆ, ರಾಜ್ಯದಲ್ಲಿ ಲಕ್ಷಾಂತರ ರೈತರು ಸಮಸ್ಯೆಯಲ್ಲಿದ್ದಾರೆ ಎಂಬುದನ್ನು ಅರಿಯಲಿ ಎಂದರು.
'ಎಲ್ಲ ಸಾಲಮನ್ನಾ ಎಂದಿದ್ದಕ್ಕೆ ಈ ಪರಿಸ್ಥಿತಿ ಎದುರಾಗಿದೆ'
ಸಹಕಾರೀ ಕ್ಷೇತ್ರದ ಬ್ಯಾಂಕ್ ಸಾಲ ಮಾತ್ರ ಮನ್ನಾ ಮಾಡುತ್ತೇನೆ ಎಂದು ಹೇಳಿದರೆ ಈ ರೀತಿಯ ಪರಿಸ್ಥಿತಿಯನ್ನು ರೈತರು ಎದುರಿಸಬೇಕಾಗಿರಲಿಲ್ಲ. ಎಲ್ಲಾ ಸಾಲ ಮನ್ನಾ ಮಾಡುತ್ತೇನೆ ಎದು ಹೇಳಿದ್ದರಿಂದಲೇ ರೈತರು ಇಂದಲ್ಲ ನಾಳೆ ಸಾಲ ಮನ್ನಾ ಆಗುತ್ತೆ ಎನ್ನು ಆಶಾವಾದದಲ್ಲಿದ್ದರು. ನೀವು ಕೊಡುವ ಋಣಮುಕ್ತ ಪತ್ರದಿಂದ ಬ್ಯಾಂಕ್ನವರು ಸಾಲ ಕ್ಲೋಸ್ ಮಾಡಲ್ಲ ಎಂದು ಕಿಡಿಕಾರಿದರು.
'ಋಣಮುಕ್ತ ಪತ್ರವನ್ನು ಬ್ಯಾಂಕ್ ಕೊಡಲಿ ಸರ್ಕಾರವಲ್ಲ'
ಋಣಮುಕ್ತ ಪತ್ರ ಕೊಡುವುದನ್ನು ನಿಲ್ಲಿಸಿ, ರೈತರ ಜೀವನದ ಜೊತೆ ಸರ್ಕಾರ ಆಟ ಆಡುವುದು ಬೇಡ, ಋಣಮುಕ್ತ ಪತ್ರ ಬ್ಯಾಂಕ್ ನೀಡಬೇಕೇ ಹೊರತು ಮುಖ್ಯಮಂತ್ರಿಗಳು ಅಲ್ಲ, ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆಲ್ಲ. ಅವರು ಕೊಟ್ಟರೆ ವ್ಯಾಲ್ಯೂ ಇರಲ್ಲ. ಬ್ಯಾಂಕ್ನವರಿಂದ ಋಣಮುಕ್ತ ಪತ್ರ ಕೊಡಿಸಿ, ಆಗ ಮಾತ್ರ ಅದು ಊರ್ಜಿತ ಆಗುತ್ತೆ ಎಂದು ಸಲಹೆ ನೀಡಿದರು.
'ಪೂರ್ಣ ಸಾಲಮನ್ನಾ ಮಾಡಿ ಕ್ಲೋಸ್ ಮಾಡಿ'
ಸಾಲ ಮನ್ನಾ ಮಾಡುವುದಾದರೆ ಪೂರ್ಣ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಿ ಕ್ಲೋಸ್ ಮಾಡಿ, ಇಲ್ಲದಿದ್ದರೆ ಯಾವುದನ್ನು ಮನ್ನಾ ಮಾಡುತ್ತೀರಿ, ಯಾವುದನ್ನು ಮನ್ನಾ ಮಾಡುವುದಿಲ್ಲ ಎಂಬ ಬಗ್ಗೆ ಸ್ಪಷ್ಟ ಸಂದೇಶವನ್ನಾದರೂ ಕೊಡಿ. ಜನತೆ ಹೋರಾಟ ಮಾಡಿ ಅವರ ಬದುಕು ರೂಪಿಸಿಕೊಳ್ಳುತ್ತಾರೆ. ಅದು ಬಿಟ್ಟು ಲಕ್ಷಾಂತರ ಜನರ ಜೀವದ ಜೊತೆ ಆಟ ಆಡಬೇಡಿ ಎಂದು ಮನವಿ ಮಾಡಿದ್ದಾರೆ.