ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ
Recommended Video
ಮಂಡ್ಯ, ನವೆಂಬರ್ 27: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹು ದಿನಗಳ ನಂತರ ಮತ್ತೆ ಕಣ್ಣಿರಿಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂದಿದ್ದ ಅವರ ಕಣ್ಣೀರು ಬಿಡುವಿನ ನಂತರ ಈಗ ಮತ್ತೆ ಉಪಚುನಾವಣೆ ಸಮಯದಲ್ಲಿ ಹರಿದಿದೆ.
ಮಂಡ್ಯದ ಕಿಕ್ಕೇರಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ 'ಅನರ್ಹ' ನಾರಾಯಣಗೌಡ ಹಿಂದೆ ಜೆಡಿಎಸ್ ನಲ್ಲಿದ್ದಾಗ ತಮಗೆ ಬರೆದಿದ್ದ ಪತ್ರವನ್ನು ಓದಿದರು. ಪತ್ರದಲ್ಲಿ ಕುಮಾರಸ್ವಾಮಿ ಅವರನ್ನು ನಾರಾಯಣಗೌಡ ಹಾಡಿ ಹೊಗಳಿದ್ದರು.
ಸಂಕ್ರಾಂತಿ ನಂತರ ಮತ್ತೆ ಕುಮಾರಸ್ವಾಮಿ ಸಿಎಂ.?
ಪತ್ರ ಓದಿದ ನಂತರ ಭಾವುಕರಾದ ಕುಮಾರಸ್ವಾಮಿ, 'ನಿಮ್ಮನ್ನು (ಮಂಡ್ಯದ ಜನ) ನಂಬಿದ್ದೆ ಆದರೆ ನೀವೇ ನನ್ನ ಕೈಬಿಟ್ಟಿರಿ' ಎಂದು ಭಾವುಕರಾದರು. ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ನನಗೆ ಇದೆಲ್ಲಾ ಬೇಕಿತ್ತಾ? ಎಂದ ಎಚ್ಡಿಕೆ ಮಂಡ್ಯದಲ್ಲಿ ಮಗನ ಸೋಲನ್ನು ನೆನೆದು ಕಣ್ಣೀರಿಟ್ಟರು.
ಎರಡು ಹೊತ್ತು ಊಟಕ್ಕೆ ರಾಜಕೀಯ ಮಾಡಬೇಕಾ?: ಎಚ್ಡಿಕೆ
ನನಗೆ ರಾಜಕೀಯವೇ ಬೇಡವೆಂದು ನಿರ್ಣಯ ಮಾಡಿದ್ದೆ, ಎರಡು ಹೊತ್ತು ಊಟಕ್ಕೆ ರಾಜಕೀಯ ಏಕೆ ಮಾಡಬೇಕು? ಆದರೆ ಕಾಂಗ್ರೆಸ್ನವರೇ ಬಂದು ಸಿಎಂ ಆಗಿ ಎಂದರು. ರಾಹುಲ್ ಗಾಂಧಿ ನನ್ನನ್ನು ಇಲ್ಲಿನ ಕಾಂಗ್ರೆಸ್ನವರಿಗೆ ತಗುಲಿಹಾಕಿದರು' ಎಂದರು.
ನಾನೇನು ತಪ್ಪು ಮಾಡಿದ್ದೆ: ಕುಮಾರಸ್ವಾಮಿ ಪ್ರಶ್ನೆ
ಎರಡು ಹೊತ್ತಿನ ಊಟಕ್ಕೆ ರಾಜಕೀಯ ಮಾಡಬೇಕೆ? ಎಂದು ಗದ್ಗದಿತರಾದ ಕುಮಾರಸ್ವಾಮಿ, ನಾನೇನು ತಪ್ಪು ಮಾಡಿದೆ, ನೀವು ಏಕೆ ನನ್ನ ಬಿಟ್ಟಿರಿ? ಎಂದು ಜನರನ್ನು ಪ್ರಶ್ನೆ ಮಾಡಿದರು.
ನಾರಾಯಣಗೌಡನನ್ನು ಬಾಂಬೆ ಕಳ್ಳ ಎನ್ನುತ್ತಿದ್ದರು: ಕುಮಾರಸ್ವಾಮಿ
'ನಾರಾಯಣಗೌಡ ನನ್ನು ಬಾಂಬೆ ಕಳ್ಳ ಎಂದು ಕರೆಯುತ್ತಿದ್ದರು. ಆದರೂ ನಾನು ಆತನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ದೇವೇಗೌಡ ರ ವಿರೋಧವಿದ್ದರೂ ನಾನು ಆತನನ್ನು ಗೆಲ್ಲಿಸಿಕೊಂಡು ಬಂದೆ, ಇದರಲ್ಲಿ ನನ್ನ ತಪ್ಪೂ ಇದೆ ನನ್ನ ಕುಟುಂಬದ್ದೂ ತಪ್ಪಿದೆ, ಆತನನ್ನು ಗೆಲ್ಲಿಸಬಾರದಿತ್ತು' ಎಂದು ಕುಮಾರಸ್ವಾಮಿ ಹೇಳಿದರು.
ಆಗ ದೇವರು ಎನ್ನುತ್ತಿದ್ದವರು ಈಗ ಬೆನ್ನಿಗೆ ಇರಿದಿದ್ದಾರೆ: ಎಚ್ಡಿಕೆ
'ಆಗ ನನ್ನನ್ನು ದೇವರು ಎನ್ನುತ್ತಿದ್ದ ನಾರಾಯಣಗೌಡ ನನಗೇ ಬೆನ್ನಿಗೆ ಚೂರಿ ಹಾಕಿದ. ಬಾಂಬೆಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ, ಅದು ಅನಾರೋಗ್ಯದಿಂದ ಅಲ್ಲ, ಬಿಜೆಪಿಯಿಂದ ದುಡ್ಡು ತೆಗೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದ' ಎಂದು ಸಿಟ್ಟು ಹೊರಹಾಕಿದರು.
ಬಾಂಬೆ ಅಲ್ಲ ಕಾಮಾಟಿಪುರ ಮಾಡ್ತಾನೆ: ಡಿ.ಸಿ.ತಮ್ಮಣ್ಣ
ಮದ್ದೂರು ಜೆಡಿಎಸ್ನ ಡಿ.ಸಿ.ತಮ್ಮಣ್ಣ ಮಾತನಾಡಿ, 'ಕೆ.ಆರ್.ಪೇಟೆಯನ್ನು ಬಾಂಬೆ ಮಾಡುವುದಾಗಿ ನಾರಾಯಣಗೌಡ ಹೇಳುತ್ತಿದ್ದಾನೆ, ಅವನು ಗೆದ್ದರೆ ಕೆ.ಆರ್.ಪೇಟೆಯಲ್ಲ ಬಾಂಬೆ ಅಲ್ಲ ಕಾಮಾಟಿಪುರ ಮಾಡುತ್ತಾನೆ' ಎಂದು ವಾಗ್ದಾಳಿ ನಡೆಸಿದರು.