ಮಂಡ್ಯದ ಕೆರೆ ಕಾಮೇಗೌಡರಿಗೆ ಸಿಕ್ಕಿತು ಉಚಿತ ಬಸ್ ಪಾಸ್
ಮಂಡ್ಯ, ಜುಲೈ 02 : "ನನಗೆ ಪ್ರಶಸ್ತಿ ಬೇಡ, ಉಚಿತ ಬಸ್ ಪಾಸು ಸಿಕ್ಕರೆ ಅಕ್ಕಪಕ್ಕದ ಜಿಲ್ಲೆಗಳ ದೇವಾಲಯಗಳಿಗೆ ಹೋಗುವೆ" ಎಂದು ಹೇಳಿದ್ದ 84 ವರ್ಷದ ಕೆರೆ ಕಾಮೇಗೌಡರಿಗೆ ಇದೀಗ ಸರ್ಕಾರ ಉಚಿತ ಬಸ್ ಪಾಸ್ ನೀಡಿದೆ.
Recommended Video
ಈಚೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಂಡ್ಯದ ಕಾಮೇಗೌಡರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. "ಕೆರೆಗಳ ಅಭಿವೃದ್ಧಿ, ಪ್ರಕೃತಿ ಸಂರಕ್ಷಣೆಗೆ ಕಾಮೇಗೌಡರು ಮಾಡುತ್ತಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು" ಎಂದಿದ್ದರು. ಆನಂತರ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಎಲ್ಲೆಡೆಯಿಂದಲೂ ಒತ್ತಾಯ ಕೇಳಿಬಂದಿತ್ತು.
ಉಚಿತ ಬಸ್ ಪಾಸ್ ಕೊಡಿ ಸಾಕು; ಮಂಡ್ಯದ ಕಾಮೇಗೌಡರು
ಇದಕ್ಕೆ ಪ್ರತಿಕ್ರಿಯಿಸಿದ ಕಾಮೇಗೌಡರು, ನನಗೆ ಪ್ರಶಸ್ತಿ ಬೇಡ, ನಾನು ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟ, ರಾಮನಗರದ ಹನುಮ ದೇವಾಲಯಕ್ಕೆ ಹೋಗುತ್ತಿರುವೆ. ಯಾವುದೇ ಸಮಸ್ಯೆ ಇಲ್ಲದೇ ಸಂಚಾರ ನಡೆಸಲು ಉಚಿತ ಬಸ್ ಪಾಸ್ ಸಿಕ್ಕಿದರೆ ಸಾಕು" ಎಂದಿದ್ದರು. ಈ ಪುಟ್ಟ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಾಮೇಗೌಡರಿಗೆ ಜೀವಿತಾವಧಿವರೆಗೂ ಉಚಿತ ಬಸ್ ಪಾಸ್ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ನಿಗಮದ ಸಾಮಾನ್ಯ, ವೇಗದೂತ, ರಾಜಹಂಸ, ವೋಲ್ವೊ ಸಹಿತ ಎಲ್ಲಾ ಬಗೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಅನ್ನು ಒದಗಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡರು ಕೆರೆ ಕಾಮೇಗೌಡರು ಎಂದೇ ಹೆಸರುವಾಸಿ. ಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸಲು 16 ಕೆರೆಗಳನ್ನು ನಿರ್ಮಾಣ ಮಾಡಿ ಪರಿಸರ ಕಾಳಜಿ ಮೆರೆದಿದ್ದರು.