ಹಿಡಿಮಣ್ಣಿನ ಗೌರವದೊಂದಿಗೆ ಪುಟ್ಟಣ್ಣಯ್ಯ ಅಂತ್ಯಸಂಸ್ಕಾರ
ಮಂಡ್ಯ, ಫೆಬ್ರವರಿ 21 : ಭಾನುವಾರ ರಾತ್ರಿ ನಿಧನರಾದ ರೈತನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ಗುರುವಾರ (ಫೆ.22) ರಂದು ನಡೆಯಲಿದೆ.
ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ರೈತ ಕಾರ್ಯಕರ್ತರು ತಮ್ಮ ಜಿಲ್ಲೆಗಳಿಂದ ಒಂದು ಹಿಡಿ ಮಣ್ಣನ್ನು ತಂದು ಹಾಕುವ ಮೂಲಕ ವಿಶೇಷವಾಗಿ ಅಂತ್ಯಕ್ರಿಯೆ ನಡೆಸಲು ರಾಜ್ಯ ರೈತಸಂಘ ತೀರ್ಮಾನಿಸಿದೆ.
ಪುಟ್ಟಣ್ಣಯ್ಯ ಸಾವು : ಚುರುಕುಗೊಂಡ ರಹಸ್ಯ ತನಿಖೆ!
ಈಗಾಗಲೇ ಜಿಲ್ಲಾಧಿಕಾರಿಗಳು ರೈತಸಂಘದ ಮುಖಂಡರು ಸಭೆ ನಡೆಸಿ ಅಂತ್ಯಸಂಸ್ಕಾರ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ವಿದೇಶದಲ್ಲಿರುವ ಪುತ್ರಿ, ಮೊಮ್ಮಕ್ಕಳು ಆಗಮಿಸಿದ ಬಳಿಕ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿರುವ ಪಾರ್ಥಿವ ಶರೀರವನ್ನು ಬೆಳಗ್ಗೆ 5 ಗಂಟೆಗೆ ತೆರೆದ ವಾಹನದಲ್ಲಿ ಶ್ರೀರಂಗಪಟ್ಟಣದ ಮೂಲಕ ಪಾಂಡವಪುರಕ್ಕೆ 6 ಗಂಟೆಗೆ ತಂದು ವಾಹನದಲ್ಲಿಯೇ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
In Pics : ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ
ನಂತರ ಐದುದೀಪ ವೃತ್ತದಿಂದ ಹಾರೋಹಳ್ಳಿ, ಎಲೆಕೆರೆ ಮಾರ್ಗವಾಗಿ ಕ್ಯಾತನಹಳ್ಳಿ ಗ್ರಾಮದ ಪುಟ್ಟಣ್ಣಯ್ಯನವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಕೆಲಕಾಲ ಕುಟುಂಬಸ್ಥರಿಗೆ ವಿಧಿವಿಧಾನಕ್ಕೆ ಅವಕಾಶಮಾಡಿಕೊಡಲಾಗುತ್ತದೆ.
ನಂತರ ಕ್ಯಾತನಹಳ್ಳಿಯ ಕ್ರೀಡಾಂಗಣದಲ್ಲಿ ಬೆಳಗ್ಗೆ 7.30ರಿಂದ 10.30ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಕ್ರೀಡಾಂಗಣದಲ್ಲಿ ಬೃಹತ್ ಸ್ಕ್ರೀನ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಬೆಳಗ್ಗೆ 11 ಗಂಟೆ ಬಳಿಕ ರೈಸ್ಮಿಲ್ ಪಕ್ಕದಲ್ಲಿರುವ ತೋಟದಲ್ಲಿ ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆಯನ್ನು ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.
ಈಗಾಗಲೇ ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆ ನಡೆಯುವ ಸ್ಥಳ ಪರಿಶೀಲನೆ ನಡೆಸಿರುವ ಜಿಲ್ಲಾಡಳಿತ ಕುಟುಂಬಸ್ಥರಿಗೆ, ಗಣ್ಯರಿಗೆ, ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾದ ಸ್ಥಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ.
ಅಂತ್ಯಕ್ರಿಯೆಯನ್ನು ವೀಕ್ಷಣೆ ಮಾಡಲು ಅಂತ್ಯಕ್ರಿಯೆಯ ನಡೆಯುವ ಸ್ಥಳದಲ್ಲಿ ಸ್ಕ್ರೀನ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು, ಕಾರ್ಯಕರ್ತರು, ಅಭಿಮಾನಿಗಳಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೂರದ ಊರಿನಿಂದ ಆಗಮಿಸುವವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಸಹ ಕ್ಯಾತನಹಳ್ಳಿ ಗ್ರಾಮದಲ್ಲಿ ಮಾಡಲಾಗುತ್ತಿದೆ.