ರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆ
ಮಂಡ್ಯ, ಜುಲೈ 20: ಕಳೆದ ರಾತ್ರಿ ಕಬಿನಿ ಹಾಗೂ ಕಾವೇರಿ ಜಲಾಶಯದಿಂದ ನೀರನ್ನು ತಮಿಳುನಾಡಿಗೆ ಅಧಿಕಾರಿಗಳು ಹರಿಸಿದ್ದು, ಈ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕಬಿನಿ ಜಲಾಶಯದ ನೀರು ಗರಿಷ್ಠ ಮಟ್ಟ ತಲುಪುವ ಮುನ್ನವೇ ತಮಿಳುನಾಡಿಗೆ ನೀರು ಬಿಡಲಾಗಿದೆ. ಕಳೆದ ರಾತ್ರಿಯಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ ತಲುಪಲು ಇನ್ನೂ 14 ಅಡಿ ಬಾಕಿ ಇದ್ದು, ಇದಕ್ಕೂ ಮುನ್ನ ನೀರು ಬಿಡಲಾಗಿದೆ.
ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ನೆಮ್ಮದಿ
ಕೆಆರ್ ಎಸ್ ನಿಂದ ಎರಡು ದಿನಗಳ ಕೆಳಗಷ್ಟೇ ರೈತರ ನಾಲೆಗಳಿಗೆ ನೀರು ಬಿಡಲಾಗುತ್ತಿತ್ತು. ಇದರೊಟ್ಟಿಗೆ ಕೆಆರ್ ಎಸ್ ನಿಂದ ಶುಕ್ರವಾರ ರಾತ್ರಿ 5000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನೀರು ಹರಿಸಲಾಗುತ್ತಿದೆ ಎಂದು ಕೆಆರ್ ಎಸ್ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕೆಆರ್ಎಸ್ ನಿಂದ ನದಿಗೆ ಕೇವಲ 355 ಕ್ಯೂಸೆಕ್ ನೀರು ಮಾತ್ರ ಹೋಗುತ್ತಿತ್ತು. ಆದರೆ, ಸಂಜೆ 6ರ ವೇಳೆಗೆ ಈ ಪ್ರಮಾಣ 2453 ಕ್ಯೂಸೆಕ್ ಗೆ ಹೆಚ್ಚಿಸಲಾಗಿತ್ತು. ನಂತರ ರಾತ್ರಿ 8ರ ಸುಮಾರಿಗೆ ಈ ಪ್ರಮಾಣವನ್ನು 5000ಕ್ಕೆ ಏರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಇಂಡುವಾಳು ಗ್ರಾಮದ ಬಳಿ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ರೈತಸಂಘದ ಕಾರ್ಯಕರ್ತರು ಎತ್ತಿನ ಗಾಡಿ ಮೂಲಕ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ಈಗ ವಿ.ಸಿ.ನಾಲೆ ವ್ಯಾಪ್ತಿಯಲ್ಲಿ ಬೆಳೆಗಳು ಒಣಗಿ ನಿಂತಿವೆ. ಬೆಳೆಗಳ ರಕ್ಷಣೆ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ನಾಲೆಗೆ ನೀರು ಹರಿಸುತ್ತಿರುವುದಾಗಿ ನೀರಾವರಿ ಇಲಾಖೆ ಪ್ರಕಟಣೆ ಹೊರಡಿಸಿ, ಬಳಿಕ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೂ ನೀರು ಹರಿಸುತ್ತಿದೆ ಎನ್ನುವುದು ಪ್ರತಿಭಟನಾ ರೈತರ ಆಕ್ರೋಶವಾಗಿದೆ.
ತಮಿಳುನಾಡಿಗೆ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣವೆಷ್ಟು?
ಹಾಲಿ ಇರುವ ಬೆಳೆಗಳಿಗೆ ಮಾತ್ರ ನೀರು ಬಳಸುವಂತೆ ಕಾವೇರಿ ನೀರಾವರಿ ನಿಗಮ ಪ್ರಕಟಣೆ ಹೊರಡಿಸಿದ್ದು, ಹೊಸ ಬೆಳೆಗಳನ್ನು ಬೆಳೆಯದಂತೆ ಸೂಚಿಸಿದೆ. ಆದರೆ ತಮಿಳುನಾಡಿಗೆ ಅಣೆಕಟ್ಟೆಯ 5 ಗೇಟ್ಗಳ ಮೂಲಕ ನೀರು ಹರಿಸಲಾಗುತ್ತಿದೆ. ಈ ಹಿಂದೆ ರೈತರು ಪ್ರತಿಭಟನೆ ನಡೆಸಿ, ಹೋರಾಟ ಮಾಡಿದರೂ ನೀರು ಬಿಡದ ಸರ್ಕಾರ, ತಮಿಳುನಾಡಿಗೆ ನೀರು ಹರಿಸಿ, ರೈತರನ್ನು ವಂಚಿಸುತ್ತಿದೆ ಎಂದು ಕುಪಿತರಾಗಿದ್ದಾರೆ.
ಜಿಲ್ಲೆಯ ರೈತರು ಕಷ್ಟದಲ್ಲಿದ್ದರೂ ತಮಿಳುನಾಡಿಗೆ ರಾತ್ರೋರಾತ್ರಿ ಕದ್ದುಮುಚ್ಚಿ ನೀರು ಬಿಡುತ್ತಿರುವುದು ಖಂಡನಾರ್ಹ. ಈಗಾಗಲೇ ಒಣಗಿ ಹೋಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕು. ನಾಲೆಯಲ್ಲಿ ಸಮಪರ್ಕವಾಗಿ ನೀರು ಹರಿಸುವ ಮೂಲಕ ಬೆಳೆ ಬೆಳೆಯಲು ಅನುಕೂಲ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.