ಮಳೆ ಪರಿಣಾಮದಿಂದ 74 ಅಡಿ ತಲುಪಿದ ಕೆಆರ್ ಎಸ್ ನೀರಿನ ಮಟ್ಟ
ಮಂಡ್ಯ, ಮೇ 28 : ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ.
ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮಳೆಯಾದರೆ ಜಲಾಶಯಕ್ಕೆ ಹರಿದು ಬರುವ ನೀರಿನ ಮಟ್ಟವೂ ಹೆಚ್ಚಾಗುವ ಸಾಧ್ಯತೆಯಿದೆ.
ಸುಪ್ರೀಂಕೋರ್ಟ್ ಆದೇಶ : ಕೆ.ಆರ್.ಎಸ್ನಲ್ಲಿ ಎಷ್ಟು ನೀರಿದೆ?
ಇದೀಗ ಕಾವೇರಿ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಏರಿಕೆಯಾಗಿರುವುದರಿಂದ ಕೃಷ್ಣರಾಜಸಾಗರ ಜಲಾಶಯ 74 ಅಡಿ ತಲುಪಿದ್ದು, ರೈತರಲ್ಲಿ ಸಂತಸವನ್ನುಂಟು ಮಾಡಿದೆ.
ಒಂದು ವಾರದ ಹಿಂದೆ 67 ಅಡಿಗೆ ಕುಸಿದಿದ್ದ ಕೆಆರ್ ಎಸ್ ನಲ್ಲಿ ಕಳೆದ 6 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ 74 ಅಡಿಗೆ ನೀರು ತಲುಪಿದೆ.
ಇದೇ ತಿಂಗಳ 30ರಿಂದ ಮುಂಗಾರು ಆರಂಭವಾಗಲಿದ್ದು, ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಚಂಡಮಾರುತದ ಪ್ರಭಾವದಿಂದ ಅಣೆಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತಮಿಳುನಾಡು ಹಾಗೂ ಕರ್ನಾಟಕದ ಮಧ್ಯ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಿದೆ.