ಕೆಆರ್ ಎಸ್ ಡಿಸ್ನಿಲ್ಯಾಂಡ್ ಯೋಜನೆ ಮಾಡಿಯೇ ಸಿದ್ಧ: ಪುಟ್ಟರಾಜು
ಮಂಡ್ಯ, ನವೆಂಬರ್ 21: ಕೃಷ್ಣರಾಜಸಾಗರದ ಬಳಿ 1200 ಕೋಟಿ ರು ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ, 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ಸ್ಥಾಪನೆ ಯೋಜನೆಗೆ ವಿರೋಧ ಕೇಳಿ ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲು ಸಚಿವ ಸಿಎಸ್ ಪುಟ್ಟರಾಜು ಅವರು ಸುದ್ದಿಗೋಷ್ಠಿ ನಡೆಸಿದರು.
'30 ಅಡಿ ಗುಂಡಿ ಅಡಿಪಾಯ ತೋಡಿ, 125 ಅಡಿ ಕಾವೇರಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಚಾರವಲ್ಲ. ಇಂದು ವೈಜ್ಞಾನಿಕ ಜಗತ್ತಿನಲ್ಲಿ ಅನೇಕ ತಂತ್ರಜ್ಞಾನಗಳು ಬಂದಿವೆ. ಬೇಕಿದ್ದರೆ, ಯೋಜನೆ ವಿರೋಧಿಸುತ್ತಿರುವವರೇ ಸೂಚಿಸುವ ತಜ್ಞರನ್ನು ಮುಂದಿಟ್ಟಕೊಂಡು ಒಂದು ತೀರ್ಮಾನಕ್ಕೆ ಬರೋಣ," ಎಂದು ಅವರು ಹೇಳಿದರು.
ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ಎಸ್ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ. ಆದ್ರೆ ಯೋಜನೆಗೆ ರೈತರ ಒಂದಿಂಚು ಭೂಮಿಯನ್ನೂ ವಶಪಡಿಸಿಕೊಳ್ಳಲ್ಲ. ನೂರಾರು ಎಕರೆ ಸರ್ಕಾರದ ಜಮೀನು ಇದೆ. ಒಂದು ವೇಳೆ ಅನಿವಾರ್ಯ ಬಂದಾಗ ಅಗತ್ಯ ಪರಿಹಾರ ನೀಡಿ ವಶಪಡಿಸಿಕೊಳ್ತೀವಿ ಎಂದರು.
'ಕೆಆರ್ ಎಸ್ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿದರೆ ಜಲಾಶಯಕ್ಕೆ ಸಂಚಕಾರ'
ಕೆಆರ್ಎಸ್ ಸುತ್ತ ಮುತ್ತ ಸರ್ಕಾರದ 300 ಎಕರೆ ಜಮೀನಿದೆ. ಆ ಭಾಗದಲ್ಲಿ ನನ್ನ ಕುಟುಂಬದ 10ಎಕರೆ ಜಮೀನೂ ಇದೆ. ಅಗತ್ಯ ಬಿದ್ದರೆ ನಾನು ಜಮೀನು ಕೊಡುತ್ತೇನೆ. ಸಚಿವ ಎಂದು ಜಮೀನು ಕೊಡದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಗೆ ರೈತರೇ ಸ್ವಇಚ್ಛೆಯಿಂದ ಜಮೀನು ನೀಡಿದ್ದರು. ಹಾಗೇ ನಾನೂ ಜಮೀನು ಬರೆದುಕೊಡುತ್ತೇನೆ," ಎಂದರು.
ಅಭಿವೃದ್ಧಿ-ವಿರೋಧಿಗಳಿಂದಲೇ ಮಂಡ್ಯ ಜಿಲ್ಲೆಗೆ ಕಳಂಕ. ಯಾವೊಂದು ಕೈಗಾರಿಕೆಗಳು ಮಂಡ್ಯಕ್ಕೆ ಬರ್ತಿಲ್ಲ. ಕಾವೇರಿ ಮಾತೆಯ ಪುತ್ಥಳಿ ನಿರ್ಮಾಣದಿಂದ ಕೆಆರ್ಎಸ್ಗೆ ಕಂಟಕವಿರೋದನ್ನ ತಜ್ಞರು ಹೇಳಬೇಕು. ಕೆಆರ್ಎಸ್ ಅಭಿವೃದ್ಧಿಯಾದರೆ ಸಾವಿರಾರು ಜನರಿಗೆ ಉದ್ಯೋಗ ದೊರಕಲಿದೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ.