ಕೆ.ಆರ್.ಪೇಟೆ ಉಪ ಚುನಾವಣೆ: ಮತದಾನಕ್ಕೆ ಮುನ್ನ ಏನೆಲ್ಲಾ ತಯಾರಿ?
ಮಂಡ್ಯ, ಡಿಸೆಂಬರ್ 3: ಕೆ.ಆರ್.ಪೇಟೆ ಉಪ ಚುನಾವಣಾ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ನಂತರ ಯಾವುದೇ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೋಟೆಲ್ ವಸತಿ ನಿಲಯಗಳಿಗೆ ಸೂಚನೆ
ಮತದಾರರನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ವಾಸ್ತವ್ಯ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಕ್ಷೇತ್ರದ ಎಲ್ಲ ಹೋಟೆಲ್ ಹಾಗೂ ವಸತಿ ನಿಲಯಗಳಿಗೆ ಸೂಚನೆ ನೀಡಿದ್ದು, ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ನಿರ್ದಾಕ್ಷಿಣ್ಯವಾಗಿ ಕ್ಷೇತ್ರದಿಂದ ಹೊರಹಾಕಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮತದಾನಕ್ಕೂ 48 ಗಂಟೆಗಳ ಮುಂಚೆ ಯಾವುದೇ ಲೋಡ್ ಸ್ಪೀಕರ್ ಬಳಕೆ ಮಾಡುವಂತಿಲ್ಲ. ಮತದಾನದ ಮುಕ್ತವಾಗಿ 30 ನಿಮಿಷ ಕಳೆಯುವ ತನಕ ಎಕ್ಸಿಟ್ ಪೋಲ್ ಮಾಡುವ ಹಾಗಿಲ್ಲ. 48 ಗಂಟೆಗಳ ಮುಂಚೆ ಒಪಿನಿಯನ್ ಪೋಲ್ ಮಾಡುವಂತಿಲ್ಲ ಎಂದು ವಿವರಿಸಿದರು.
ಮಂಡ್ಯದಲ್ಲಿ ಕಮಲ ಅರಳಿಸಲು ನಡೆಯುತ್ತಿದೆ ಏನೆಲ್ಲಾ ಕಸರತ್ತು!
ಕೆ.ಆರ್. ಪೇಟೆಯಲ್ಲಿ 258 ಮತಗಟ್ಟೆ
ಕ್ಷೇತ್ರದಲ್ಲಿ 258 ಮತಗಟ್ಟೆಗಳಿವೆ. 290 ಪ್ರಿಸೈಡಿಂಗ್ ಅಧಿಕಾರಿಗಳು, 293 ಸಹಾಯಕ ಮತಗಟ್ಟೆ ಅಧಿಕಾರಿಗಳು, 580 ಮತದಾನ ಅಧಿಕಾರಿಗಳು ಇರುತ್ತಾರೆ. ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 53 ಮತ್ತು 141 ರಲ್ಲಿ 2 ಸಖಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು.
ಅಂಗವಿಕಲರಿಗಾಗಿ ಮತಗಟ್ಟೆ ಸಂಖ್ಯೆ 128ರಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಅಲ್ಲದೇ ಮತದಾರರಿಗೆ ಮತದಾನ ಮಾಡಲು ಬಂದಾಗ ಸುಂದರ ವಾತಾವರಣ ಕಲ್ಪಿಸಲು ಕೆ.ಆರ್.ಪೇಟೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಮತಗಟ್ಟೆಯಲ್ಲಿ 100 ಮೀಟರ್ ವ್ಯಾಪ್ತಿಯಿಂದ ಹೊರಗೆ ಮತದಾರರ ಸಹಾಯಕ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಚುನಾವಣೆಯಲ್ಲಿ ಎಂ 3 ಮಾದರಿಯ ಇವಿಎಂ ಜೊತೆಗೆ ವಿವಿ ಪ್ಯಾಡ್ ಗಳನ್ನು ಬಳಸಲಾಗುವುದು. ಮತಗಟ್ಟೆಗಳಿಗೆ ಮೊಬೈಲ್, ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ. ಈ ಬಾರಿ ಮತದಾನದಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಅಗತ್ಯವಿರುವವರಿಗೆ ನೋಟಾ ಮತದಾನ ಮಾಡಲು ಅವಕಾಶ ಕೂಡ ಕಲ್ಪಿಸಲಾಗಿದೆ ಎಂದು ವಿವರಿಸಿದರು.
52 ಸೂಕ್ಷ್ಮ, 13 ಅತಿ ಸೂಕ್ಷ್ಮ ಮತಗಟ್ಟೆ
ಕ್ಷೇತ್ರದಲ್ಲಿ 52 ಸೂಕ್ಷ್ಮ, 13 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗುವುದು. 10 ಮತಕೇಂದ್ರಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು, 45 ಮತ ಕೇಂದ್ರಗಳಲ್ಲಿ ಮೈಕ್ರೋ ಅಬ್ಸರ್ ಗಳನ್ನು ನೇಮಕ ಮಾಡಲಾಗುವುದು. ಎಲ್ಲಾ ಮತಗಟ್ಟೆಗಳಿಗೂ ಕೇಂದ್ರೀಯ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ಅಭ್ಯರ್ಥಿಗಳು ಮತಗಟ್ಟೆ 200 ಮೀಟರ್ ವ್ಯಾಪ್ತಿಯ ಆಚೆಗೆ ಸಹಾಯಕ ಕೇಂದ್ರಗಳನ್ನು ಸ್ಥಾಪನೆ ಮಾಡಬಹುದು. ಈ ಬೂತ್ ಗಳಲ್ಲಿ ಒಂದು ಮೇಜು, ಒಂದು ಕುರ್ಚಿ ಇಡಲು ಅವಕಾಶ ಮಾಡಿಕೊಡಲಾಗುವುದು. ಮತದಾನದ ಹಿನ್ನೆಲೆಯಲ್ಲಿ ಡಿ.5ರಂದು ತಾಲೂಕಿನಾದ್ಯಂತ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕೆ.ಆರ್ .ಪೇಟೆ ತಾಲೂಕಿನಿಂದ ಹೊರಗಿರುವ ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ಎಲ್ಲ ಸರ್ಕಾರಿ, ಖಾಸಗೀ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ನವ ಕೆಆರ್ ಪೇಟೆ ನಿರ್ಮಾಣ: ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ
ಡಿ.9ಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ
ಡಿಸೆಂಬರ್ 5ರಂದು ನಡೆಯುವ ಸಂತೆ, ಜಾತ್ರೆ ಉತ್ಸವಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಿಸಿ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ. ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಡಿಸೆಂಬರ್ 3ರ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಸಂಜೆ 6 ಗಂಟೆವರೆಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೆ, ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು ಎಂದು ಹೇಳಿದರು.
ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶಾಂತಿಯುತ ಚುನಾವಣೆಗಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. ಈವರೆಗೆ ಜಿಲ್ಲೆಯಲ್ಲಿ 63,54,57 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಡಿ.9ರಂದು ಕೆ.ಆರ್ .ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. 14 ಮತ ಎಣಿಕೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ. 7.59 ನಿಮಿಷಕ್ಕೆ ಅಂಚೆ ಮತಗಳ ಎಣಿಕೆ ಕೇಂದ್ರ ಆರಂಭವಾಗಲಿದೆ. 11 ಗಂಟೆ ವೇಳೆಗೆ ಫಲಿತಾಂಶದ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ, ಜಿಲ್ಲಾ ವಾರ್ತಾಧಿಕಾರಿ ಹರೀಶ್ ಗೋಷ್ಠಿಯಲ್ಲಿದ್ದರು.