ಕೊರೊನಾದಿಂದ ಕಾಪಾಡು; ದೇವಿಗೆ ಹರಕೆ ಹೊತ್ತ ಕೆ.ಆರ್.ಪೇಟೆ ಗ್ರಾಮಸ್ಥರು
ಮಂಡ್ಯ, ಏಪ್ರಿಲ್ 15: ಕಷ್ಟ ಬಂದಾಗ ಅದರ ಪರಿಹಾರಕ್ಕಾಗಿ ಬೇಕಾದ ಕೆಲಸಗಳನ್ನು ಮಾಡುವುದರೊಂದಿಗೆ ಕೊನೆಯ ಅಸ್ತ್ರ ಎಂಬಂತೆ ದೇವರಿಗೆ ಮೊರೆ ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇದೀಗ ಕೊರೊನಾ ಹೆಮ್ಮಾರಿ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದರ ಹೊಡೆತಕ್ಕೆ ಹಲವು ಬಲಿಗಳಾಗಿವೆ. ಜತೆಗೆ ಬಡವ ಶ್ರೀಮಂತ ಎನ್ನದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಸಾಮಾಜಿಕ ಅಂತರ ಕಾಪಾಡುವ ಮೂಲಕ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಶ್ರಮಪಡುತ್ತಿದ್ದರೆ, ಮತ್ತೊಂದೆಡೆ ಮಾನವ ಜೀವ ಸಂಕುಲವನ್ನು ಉಳಿಸಬೇಕೆಂದು ಪ್ರಾರ್ಥಿಸಿ ಗ್ರಾಮಸ್ಥರು ದೇವರ ಮೊರೆ ಹೋಗುವುದು, ಪೂಜೆ ನಡೆಸುವುದು ಎಲ್ಲೆಡೆಯೂ ನಡೆಯುತ್ತಿದೆ. ಅದರಂತೆ ಕೆ.ಆರ್.ಪೇಟೆ ಪಟ್ಟಣದ ಗ್ರಾಮದೇವತೆ ಮಾರಮ್ಮನಿಗೂ ಗ್ರಾಮದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಕೊರೊನಾ ಸಂಕಷ್ಟವನ್ನು ಪರಿಹರಿಸಿ ಒಳಿತು ಮಾಡುವಂತೆ ಮಾರಮ್ಮನಲ್ಲಿ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಂಡಿದ್ದಾರೆ.
"ಅಂದು ಕಾಲರಾ ಪ್ಲೇಗ್ ನಿಂದ ಕಾಪಾಡಿದ್ದೆ, ಇಂದು ಕೊರೊನಾದಿಂದ ಕಾಪಾಡು"
ವಿಶ್ವದಾದ್ಯಂತ ನಿತ್ಯ ಸಾವಿರಾರು ಮಂದಿ ಕೊರೊನಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ಮಂದಿ ರೋಗ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಿ ಮಾನವ ಸಂಕುಲವನ್ನು ಉಳಿಸಬೇಕೆಂದು ಗ್ರಾಮಸ್ಥರು ಮಾರಮ್ಮನಲ್ಲಿ ಬೇಡಿಕೊಳ್ಳುತ್ತಾ, ಈ ಸಂಕಷ್ಟಗಳು ದೂರವಾದರೆ ಅದ್ಧೂರಿಯಾಗಿ ಮಾರಿ ಹಬ್ಬ ಆಚರಿಸುವುದಾಗಿ ಹರಕೆ ಹೊತ್ತುಕೊಂಡಿದ್ದಾರೆ.