ಪುರಸಭಾ ಸದಸ್ಯರು ಸ್ಪಂದಿಸಿದರೆ ಅಭಿವೃದ್ಧಿ; ಇಲ್ಲದಿದ್ದರೆ ನಾನು ತಟಸ್ಥ; ಸಚಿವ ನಾರಾಯಣಗೌಡ ಎಚ್ಚರಿಕೆ
ಮಂಡ್ಯ, ಆಗಸ್ಟ್, 17: ಕೆ.ಆರ್. ಪೇಟೆ ಪುರಸಭಾ ಸದಸ್ಯರು ಸಹಕರಿಸಿದರೆ ಮಾತ್ರ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇಲ್ಲದಿದ್ದರೆ ನಾನು ನನ್ನ ಪಾಡಿಗೆ ಇರುತ್ತೇನೆ. ನನಗೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ವಂತ ಮನೆ ಇಲ್ಲ. ನನ್ನ ಸ್ವಗ್ರಾಮ ಕೈಗೋನಹಳ್ಳಿ ಆಗಿದ್ದು, ಪುರಸಭಾ ಸದಸ್ಯರು ಪಕ್ಷಾತೀತವಾಗಿ ಸಹಕರಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಗುಡುಗಿದರು.
ಪಟ್ಟಣದ ಶಹರಿ ರೋಜ್ಗರ್ ಯೋಜನೆಯ ಕಟ್ಟಡದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಂತರ ಸದಸ್ಯರಿಗೆ ಕೈಮುಗಿದು ಸಭೆಯಲ್ಲಿ ಭಾಗವಹಿಸದೆ ಕಾರ್ಯನಿಮಿತ್ತ ಹೊರ ನಡೆಯಲು ಮುಂದಾದರು. ಸಚಿವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಸದಸ್ಯರು ಅಪರೂಪಕ್ಕೆ ಸಭೆಗೆ ಬಂದಿದ್ದೀರಿ. ಸಭೆಯಲ್ಲಿ ಕುಳಿತು ಪಟ್ಟಣದ ಸಮಸ್ಯೆಗಳನ್ನು ಆಲಿಸಿ ಎಂದು ಆಗ್ರಹಿಸಿದರು. ಸದಸ್ಯರ ಒತ್ತಡಕ್ಕೆ ಮಣಿದ ಸಚಿವರು ಸುಮಾರು ಅರ್ಧ ಗಂಟೆ ಸಭೆಯಲ್ಲಿದ್ದು, ಅಹವಾಲುಗಳನ್ನು ಆಲಿಸಿದರು. ಸದಸ್ಯರ ಅನುಮೋದನೆ ಇಲ್ಲದೆ ಪುರಸಭೆಯಲ್ಲಿ ಕಾಮಗಾರಿ ಬಿಲ್ ಪಾಸ್ ಆಗುತ್ತಿದೆ. ಪಟ್ಟಣದ ಅಭಿವೃದ್ಧಿಗೆ ಬಳಕೆ ಆಗಿರುವ ಸುಮಾರು 1 ಕೋಟಿ ರೂಪಾಯಿ ಹಣದ ಬಿಲ್ ಪಾಸ್ ಆಗಿದೆ. ಇದನ್ನು ಸದಸ್ಯರ ಗಮನಕ್ಕೆ ಬರದಂತೆ ಮಾಡಲಾಗಿದೆ.
ಮಂಡ್ಯ: ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳಲ್ಲಿ ಪಾಠ, ವಿದ್ಯಾರ್ಥಿನಿಯರಿಗೆ ಆತಂಕ
ಪುರಸಭೆ ಸದಸ್ಯರ ಆರೋಪ ಏನು?
ಪಟ್ಟಣದ ಬಹುತೇಕ ಕಡೆ ಕುಡಿಯುವ ನೀರಿನ ಪೈಪ್ಗಳು ಹಾಳಾಗಿವೆ. ಅವುಗಳ ನಿರ್ವಹಣೆಯ ಹೆಸರಿನಲ್ಲಿ 17-18 ಲಕ್ಷ ಹಣ ವ್ಯಯ ಮಾಡಲಾಗುತ್ತಿದೆ. ಪುರಸಭೆಯಲ್ಲಿ ಒಬ್ಬ ಖಾಯಂ ನೀರು ನಿರ್ವಾಹಕನೂ ಇಲ್ಲ. ಕಳೆದ 50 ವರ್ಷಗಳ ಹಿಂದಿನ ಪೈಪ್ಲೈನ್ ಅನ್ನು ಬದಲಿಸಿ ಎಂದರು. ಪುರಸಭೆಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ.
ಭ್ರಷ್ಟರ ವಿರುದ್ಧ ಕ್ರಮಕ್ಕೆ ಒತ್ತಾಯ
ಒಂದು ಈ-ಸ್ವತ್ತು ಮಾಡಿಸಲು 20-30 ಸಾವಿರ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಯುಜಿಡಿ ವ್ಯವಸ್ಥೆ ಹಲವು ದಶಕಗಳಿಂದ ಪೂರ್ಣಗೊಳ್ಳದೆ ಇಲ್ಲಿನ ಜನರಿಗೆ ತುಂಬಾ ಸಮಸ್ಯೆ ಆಗಿದೆ. ಮೊದಲು ಯುಜಿಡಿ ಸರಿಪಡಿಸಿ ನಂತರ ಪಟ್ಟಣದ ರಸ್ತೆ ಅಭಿವೃದ್ಧಿಗೆ ಮುಂದಾಗಿ. ಏಕ ನಿವೇಶನಗಳನ್ನು ನಿಯಮ ಮೀರಿ ಬಹು ನಿವೇಶನಗಳನ್ನಾಗಿ ಖಾತೆ ಮಾಡಿರುವ ಭ್ರಷ್ಟ ನೌಕರರ ವಿರುದ್ಧ ಕ್ರಮ ಜರುಗಿಸಿ ಎಂದು ಸಚಿವರನ್ನು ಕೇಳಿಕೊಂಡರು.
ಸಚಿವರ ಪ್ರಕಾರ ಬಿಡುಗಡೆಯಾದ ಹಣ ಎಷ್ಟು?
ಸದಸ್ಯರ ಮಾತುಗಳನ್ನು ಆಲಿಸಿದ ಸಚಿವ ಕೆ.ಸಿ.ನಾರಾಯಣಗೌಡ ಪಟ್ಟಣದ ದೇವೀರಮ್ಮಣ್ಣಿ ಕೆರೆ ಕೋಡಿಯಿಂದ ಹೊಸಹೊಳಲುವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ 6.5 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಪಟ್ಟಣದ ಅಭಿವೃದ್ಧಿಗೆ 17 ಕೋಟಿ ಹಣ ಬಿಡುಗಡೆಯಾಗಿದ್ದು, ಮತ್ತೆ 5 ಕೋಟಿ ಬಿಡುಗಡೆಯ ಹಂತದಲ್ಲಿದೆ. ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ 9 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಹಣ ಬಿಡಗಡೆ ಆಗಿದೆ. ಭ್ರಷ್ಟಾಚಾರದ ವಿರುದ್ದ ಸದಸ್ಯರು ಪಕ್ಷಾತೀತವಾಗಿ ಕಡಿವಾಣ ಹಾಕಿ. ಇದಕ್ಕೆ ನನ್ನ ಬೆಂಬಲವೂ ಇದೆ ಎಂದರು.
ಹಣ ಬಂದಿಲ್ಲ ಎಂದು ಪುರಸಭೆಯ ಇಂಜಿನಿಯರ್ ವಾದ
ಯುಜಿಡಿ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿದರು. ಹೀಗೆ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಡಿ.ಪ್ರೇಮ್ಕುಮಾರ್, ಕೆ.ಆರ್.ರವೀಂದ್ರಬಾಬು ಆಕ್ಷೇಪ ವ್ಯಕ್ತಪಡಿಸಿ ಹಣ ಬಂದಿಲ್ಲ. ಬಂದಿದ್ದರೆ ಆದೇಶದ ಪ್ರತಿ ನೀಡಿ ಎಂದು ಸವಾಲು ಹಾಕಿದರು. ಪುರಸಭೆಯ ಮುಖ್ಯ ಅಧಿಕಾರಿ ಹಣ ಬಂದಿದೆ ಎಂದರು. ಆದರೆ ಪುರಸಭೆಯ ಇಂಜಿನಿಯರ್ ಹಣ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಅಂತಿಮವಾಗಿ ಸಚಿವರು ಹಣ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳುವ ಮೂಲಕ ಸಭೆಯಿಂದ ಹೊರಟು ಹೋಗಿದ್ದಾರೆ.
Recommended Video