ಕೆ.ಆರ್.ಪೇಟೆ ಪೇದೆಯಲ್ಲಿ ಕೊರೊನಾ; ಪೊಲೀಸ್ ಠಾಣೆಗಳು ಸೀಲ್ ಡೌನ್
ಮಂಡ್ಯ, ಮೇ 22: ಕೆ.ಆರ್.ಪೇಟೆ ಟೌನ್ ಪೋಲಿಸ್ ಸ್ಟೇಷನ್ ಮುಖ್ಯಪೇದೆಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು 30 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸರುವುದಾಗಿ ಮಾಹಿತಿ ನೀಡಿದರು.
ಕೆ.ಆರ್.ಪೇಟೆಗೆ ಬರಲು ಸಿದ್ಧವಾದ ವಲಸಿಗರ ಸಂಖ್ಯೆ ಕಂಡು ಜಿಲ್ಲಾಡಳಿತ ಶಾಕ್
ಕೋವಿಡ್ ಕರ್ತವ್ಯಕ್ಕೆ ಧಕ್ಕೆ ಉಂಟಾಗದಂತೆ ಕ್ವಾರಂಟೈನ್ ಕೇಂದ್ರಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ. ಗ್ರಾಮಕ್ಕೆ ಹೊರ ರಾಜ್ಯಗಳಿಂದ ನುಸುಳಿರುವ ಜನರ ಬಗ್ಗೆ ಗ್ರಾಮಸ್ಥರು ಕೂಡಲೇ ಮಾಹಿತಿಯನ್ನು ನೀಡಬೇಕು. ತಾಲ್ಲೂಕಿಗೆ ಯಾರೇ ಹೊಸದಾಗಿ ಬಂದರೂ 14 ದಿನಗಳು ಹೋಂ ಕ್ವಾರಂಟೈನ್ ನಲ್ಲಿರುವುದು, ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಈ ಸಂದರ್ಭ ಶ್ರೀರಂಗಪಟ್ಟಣ ಡಿವೈಎಸ್ ಪಿ ಅರುಣ್ ನಾಗೇಗೌಡ, ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಯೋಗೇಶ್, ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ಡಿ.ಲಕ್ಷ್ಮಣ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.