ಪ್ರತಿಷ್ಠೆಯ ಕಣವಾಗಿ ಮಾರ್ಪಡುತ್ತಿದೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ
ಮಂಡ್ಯ, ನವೆಂಬರ್ 22: ಇದೀಗ ನಡೆಯುತ್ತಿರುವ ಉಪಚುನಾವಣೆ ಕಣಗಳ ಪೈಕಿ ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರವೂ ಒಂದಾಗಿದ್ದು, ಇದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಈಗಾಗಲೇ ಈ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಮೇಲಿಂದ ಮೇಲೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದು, ಮತದಾರರನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಯಾರೂ ನಾಮಪತ್ರಗಳನ್ನು ಹಿಂತೆಗೆದುಕೊಳ್ಳದ ಕಾರಣದಿಂದಾಗಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಣದಲ್ಲಿರುವ ಏಳು ಜನ ಯಾರು?
ಕಾಂಗ್ರೆಸ್ ನ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ನ ಬಿ.ಎಲ್.ದೇವರಾಜು, ಬಿಜೆಪಿಯ ಕೆ.ಸಿ.ನಾರಾಯಣಗೌಡ, ಉತ್ತಮ ಪ್ರಜಾಕೀಯ ಪಕ್ಷದ ಚಂದ್ರೇಗೌಡ ಎಚ್.ಎಂ., ಪೂರ್ವಾಂಚಲ ಮಹಾ ಪಂಚಾಯತ್ ಪಕ್ಷದಿಂದ ಎಚ್.ಡಿ.ರೇವಣ್ಣ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕೆರೆಮೇಗಲಕೊಪ್ಪಲು ಶಂಕರೇಗೌಡ, ಪಕ್ಷೇತರ ಸರ್ವೆ ದೇವೇಗೌಡ ಕಣದಲ್ಲಿರುವ ಏಳು ಅಭ್ಯರ್ಥಿಗಳಾಗಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಗೆಲುವಿಗಾಗಿ ಆರಂಭವಾಗಿದೆ ಜೆಡಿಎಸ್ ಗಾಳ
10 ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಕೆ
ಕ್ಷೇತ್ರದಲ್ಲಿ ಒಟ್ಟು 258 ಮತಗಟ್ಟೆಗಳಿದ್ದು, ಈ ಮತಗಟ್ಟೆಗಳಿಗೆ ಈಗಾಗಲೇ ಅಗತ್ಯ ಮೂಲ ಸೌಕರ್ಯ ಒದಗಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ 2.65 ಲಕ್ಷ ಮತದಾರರಿದ್ದು, ಇವರಲ್ಲಿ 1,05,848 ಪುರುಷರು, 1,02,533 ಮಹಿಳಾ ಮತದಾರರಾಗಿದ್ದಾರೆ. ಇತರೆ ಮತದಾರರು 3 ಜನ ಇದ್ದಾರೆ. ನಗರ ಪ್ರದೇಶದಲ್ಲಿ 21 ಮತಗಟ್ಟೆಗಳಿದ್ದರೆ, ಗ್ರಾಮೀಣ ಭಾಗದಲ್ಲಿ 237 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ 13 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಹಾಗೂ 52 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. 10 ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತಿದೆ.
ಅಗತ್ಯ ಪೊಲೀಸ್ ಬಂದೋಬಸ್ತ್
ಎಲ್ಲ ಮತಗಟ್ಟೆಗಳ ಮೇಲೂ ನಿಗಾ ವಹಿಸಲಾಗುತ್ತಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕ್ಷೇತ್ರಗಳಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ಹಣಾಹಣಿ ಇರುವುದರಿಂದಾಗಿ ಎಚ್ಚರಿಕೆ ವಹಿಸುವುದರ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗುತ್ತಿದೆ.
ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?
ಮದ್ಯ, ಸೀರೆ, ಹಣ ವಶ
ಮತದಾರರನ್ನು ಸೆಳೆಯುವ ಸಲುವಾಗಿ ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದುವರೆಗೆ ಎರಡು ಪ್ರಕರಣಗಳಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಸುಮಾರು 2 ಲಕ್ಷದ 15 ಸಾವಿರ ರೂ ಮೌಲ್ಯದ ಸೀರೆಗಳನ್ನು ಹಾಗೂ ದಾಖಲೆ ಇಲ್ಲದೆ ವಾಹನಗಳ ಮೂಲಕ ಸಾಗಿಸುತ್ತಿದ್ದ 9,26,630 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಸುಮಾರು 10 ಲಕ್ಷ ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಗೆಲುವಿಗಾಗಿ ತಂತ್ರಗಳು ಮುಂದುವರೆಯುತ್ತಿದೆ.