ಕೆ.ಆರ್.ಪೇಟೆ ಉಪಚುನಾವಣೆ: ಇಕ್ಕಟ್ಟಿಗೆ ಸಿಲುಕಿದ ಸುಮಲತಾ
ಮಂಡ್ಯ, ಅಕ್ಟೋಬರ್ 01: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಲಿಗೆ ಉಪಚುನಾವಣೆ ಭಾರಿ ಜಿದ್ದಾ-ಜಿದ್ದಿನ ಕಣವಾಗಿ ಪರಿಣಮಿಸಿದೆ. ಆದರೆ ಪಕ್ಷೇತರ ಸಂಸದೆ ಸುಮಲತಾ ಅವರಿಗೆ ಮಾತ್ರ ಈ ಉಪಚುನಾವಣೆ ರಾಜಕೀಯ ಇಕ್ಕಟ್ಟು ತಂದೊಡ್ಡಿದೆ.
ಸುಮಲತಾ ಅವರು ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಯಗಳಿಸಿದ್ದರು. ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಕಾಂಗ್ರೆಸ್ನ ಹಲವು ಮುಖಂಡರೂ ಸಹ ಸುಮಲತಾ ಅವರಿಗೆ ಬೆಂಬಲ ನೀಡಿದ್ದರು. ಆದರೆ ಈಗ ಸುಮಲತಾ ಅವರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಇಲ್ಲ: ಉಮೇಶ್ ಕತ್ತಿ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಹಿಂದೆ ಲೋಕಸಭೆ ಚುನಾವಣೆ ಸಮಯದಲ್ಲಿ ಸುಮಲತಾ ವಿರುದ್ಧ ಪ್ರಚಾರ ನಡೆಸಿದ್ದ ನಾರಾಯಣಗೌಡ ಅವರೇ ಈಗ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಗೆ ಋಣಸಂದಾಯ ಮಾಡುವರೇ ಸುಮಲತಾ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಅಧಿಕೃತ ಬೆಂಬಲ ನೀಡಿತ್ತು. ಹಾಗಾಗಿ ಈಗ 'ಋಣಸಂದಾಯ' ಮಾಡಲೇಬೇಕಾದ ಪರಿಸ್ಥಿತಿ ಸುಮಲತಾ ಅವರಿಗೆ ಎದುರಾಗಿದೆ. ಆದರೆ ಈ ಋಣಸಂದಾಯವೇ ಸುಮಲತಾ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿದೆ.
ಕೆ.ಬಿ.ಚಂದ್ರಶೇಖರ್ ಕಾಂಗ್ರೆಸ್ ಅಭ್ಯರ್ಥಿ?
ಕೆ.ಆರ್.ಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್ ಅವರು ಸ್ಪರ್ಧಿಸುವುದು ಸಹ ಬಹುತೇಕ ಖಚಿತವಾಗಿದೆ. ಕಳೆದ ಬಾರಿಯೂ ಇವರೇ ಸ್ಪರ್ಧಿಸಿ ನಾರಾಯಣಗೌಡ ವಿರುದ್ಧ ಸೋಲನುಭವಿಸಿದ್ದರು. ಕೆ.ಬಿ.ಚಂದ್ರಶೇಖರ್ ಅವರೂ ಸಹ ಪರೋಕ್ಷವಾಗಿ ಸುಮಲತಾ ಅವರಿಗಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.
15 ಕ್ಷೇತ್ರದ ಉಪ ಚುನಾವಣೆ; ಮತ ಎಣಿಕೆ ದಿನಾಂಕ ನಿಗದಿ
ಇಕ್ಕಟ್ಟಿಗೆ ಸಿಲುಕಿದ್ದಾರೆ ಸುಮಲತಾ
ಈಗ ಸುಮಲತಾ ಅವರು ಇಕ್ಕಟ್ಟಿಗೆ ಸಿಲುಕಿದ್ದು, ತಮ್ಮ ಪರವಾಗಿ ಕೆಲಸ ಮಾಡಿದ್ದ ಕೆ.ಬಿ.ಚಂದ್ರಶೇಖರ್ ಅವರಿಗೆ ಉಪಚುನಾವಣೆಯಲ್ಲಿ ಬೆಂಬಲ ನೀಡುವುದೋ ಅಥವಾ ತಮಗೆ ಬೆಂಬಲ ನೀಡಿದ್ದ ಬಿಜೆಪಿಗೆ ಬೆಂಬಲ ನೀಡುವುದೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಕೆ.ಬಿ.ಚಂದ್ರಶೇಖರ್ ಅವರು ಸುಮಲತಾ ಪರ ನಿಂತಿದ್ದರು
ಮೈತ್ರಿಯನ್ನು ಧಿಕ್ಕರಿಸಿ ಕೆ.ಬಿ.ಚಂದ್ರಶೇಖರ್ ಅವರು ಸುಮಲತಾ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಿದ್ದರು. ಇವರು ಮಾತ್ರವೇ ಅಲ್ಲದೆ, ಕಾಂಗ್ರೆಸ್ನ ಚೆಲುವರಾಯಸ್ವಾಮಿ ಸೇರಿ ಹಲವು ಕಾರ್ಯಕರ್ತರು ಮುಖಂಡರು ಸುಮಲತಾ ಪರವಾಗಿ ಕೆಲಸ ಮಾಡಿದ್ದರು. ಚಂದ್ರಶೇಖರ್ ಅವರು ಸುಮಲತಾ ಅವರೊಂದಿಗೆ ಸಭೆಯೊಂದರಲ್ಲಿ ಭಾಗವಹಿಸಿದ್ದ ವಿಡಿಯೋ ಸಹ ಹೊರಗೆ ಬಂದಿತ್ತು. ವಿಚಿತ್ರವೆಂದರೆ ಈಗ ಬಿಜೆಪಿ ಪರವಾಗಿ ಅಭ್ಯರ್ಥಿಯಾಗಿರುವ ನಾರಾಯಣಗೌಡ ಅವರು ಲೋಕಸಭೆ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪರವಾಗಿ ನಿಂತಿದ್ದರು.
ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಯಾರು? ಅಂದಿನ ಸತ್ಯ ಈಗ ಬಹಿರಂಗ!
ಸುಮಲತಾ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ: ಅಶೋಕ್
ಸುಮಲತಾ ಅವರಿಗೆ ನಾವು ಬೆಂಬಲ ನೀಡಿದ್ದೇವೆ, ನಮಗೆ ಈಗ ಅವರ ಬೆಂಬಲದ ಅವಶ್ಯಕತೆ ಇದ್ದು, ಸುಮಲತಾ ಅವರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.